ಹೈದರಾಬಾದ್ ಸ್ಫೋಟ: ಇಂಡಿಯನ್ ಮುಜಾಹಿದ್ದೀನ್ ಮುಖ್ಯಸ್ಥ ಅಪರಾಧಿ
ಇಂಡಿಯನ್ ಮುಜಾಹಿದ್ದೀನ್ ಮುಖ್ಯಸ್ಥ ಯಾಸಿನ್ ಭಟ್ಕಳ್ ಸೇರಿದಂತೆ ನಾಲ್ವರನ್ನು ಇಲ್ಲಿನ ದಿಲ್ ಸುಖ್ ನಗರ ಸ್ಫೋಟ ಪ್ರಕರಣದಲ್ಲಿ ಅಪರಾಧಿಗಳು ಎಂದು ವಿಶೇಷ ನ್ಯಾಯಾಲಯ ಮಂಗಳವಾರ ಘೋಷಿಸಿದೆ.
ಹೈದರಾಬಾದ್, ಡಿಸೆಂಬರ್ 13: ಇಂಡಿಯನ್ ಮುಜಾಹಿದ್ದೀನ್ ಮುಖ್ಯಸ್ಥ ಯಾಸಿನ್ ಭಟ್ಕಳ್ ಸೇರಿದಂತೆ ನಾಲ್ವರನ್ನು ಇಲ್ಲಿನ ದಿಲ್ ಸುಖ್ ನಗರ ಸ್ಫೋಟ ಪ್ರಕರಣದಲ್ಲಿ ಅಪರಾಧಿಗಳು ಎಂದು ವಿಶೇಷ ನ್ಯಾಯಾಲಯ ಮಂಗಳವಾರ ಘೋಷಿಸಿದೆ.
2013ರ ಫೆಬ್ರವರಿಯಲ್ಲಿ ಹೈದರಾಬಾದಿನ ದಿಲ್ ಸುಖ್ ನಗರದಲ್ಲಿ ಸಂಭವಿಸಿದ ಸ್ಫೋಟ ಪ್ರಕರಣದಲ್ಲಿ ಯಾಸೀನ್ ಭಟ್ಕಳ ಮತ್ತು ಇತರೆ 4 ಮಂದಿ ಉಗ್ರರು ತಪ್ಪಿತಸ್ಥರು ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ನ್ಯಾಯಾಲಯ ಮಂಗಳವಾರ ತೀರ್ಪು ನೀಡಿದೆ. ಎಲ್ಲಾ ತಪ್ಪಿತಸ್ಥರ ಶಿಕ್ಷೆಯ ಪ್ರಮಾಣವನ್ನು ನ್ಯಾಯಾಲಯವು ಡಿಸೆಂಬರ್ 19ರಂದು ಪ್ರಕಟಿಸಲಿದೆ. ಎಲ್ಲ ಆರೋಪಿಗಳು ಸದ್ಯಕ್ಕೆ ಚೆರ್ಲಪಲ್ಲಿ ಜೈಲಿನಲ್ಲಿದ್ದಾರೆ.[ಬಿರಿಯಾನಿಗೆ ಹೆಸರಾಗಿದ್ದ ಭಟ್ಕಳದಲ್ಲಿ ಉಗ್ರರು ಹುಟ್ಟಿದ್ದು ಹೇಗೆ?]
ಇಂಡಿಯನ್ ಮುಜಾಹಿದೀನ್ ಸಹ ಸಂಸ್ಥಾಪಕ ಯಾಸೀನ್ ಭಟ್ಕಳ, ಪಾಕಿಸ್ತಾನಿ ಪ್ರಜೆ ಜಿಯಾ-ಉರ್-ರಹಮಾನ್ ಅಲಿಯಾಸ್ ವಕಸ್, ಅಸಾದುಲ್ಲಾ ಅಖ್ತರ್ ಅಲಿಯಾಸ್ ಹಡ್ಡಿ, ತಹಸೀನ್ ಅಖ್ತರ್ ಅಲಿಯಾಸ್ ಮೋನು ಮತ್ತು ಐಜಾಜ್ ಷೇಖ್ ಅವರ ವಿರುದ್ಧ ನ್ಯಾಯಾಲಯ ಎನ್ ಐಎ ದೋಷಾರೋಪ ಪಟ್ಟಿ ಸಲ್ಲಿಸಿತ್ತು.
ಈ ಪ್ರಕರಣದ ಮುಖ್ಯ ಆರೋಪಿ ಇಂಡಿಯನ್ ಮುಜಾಹಿದೀನ್ ಸಂಸ್ಥಾಪಕ ರಿಯಾಜ್ ಭಟ್ಕಳ ಇನ್ನೂ ಪತ್ತೆಯಾಗಿಲ್ಲ. 2013ರ ಫೆಬ್ರುವರಿ 21ರಂದು ಸಂಭವಿಸಿದ್ದ ಹೈದರಾಬಾದ್ ಸ್ಪೋಟದಲ್ಲಿ 17 ಮಂದಿ ಮೃತಪಟ್ಟಿದ್ದರು ಹಾಗೂ 119 ಮಂದಿ ತೀವ್ರವಾಗಿ ಗಾಯಗೊಂಡಿದ್ದರು.