ಪ್ರವಾಹ ಸಂತ್ರಸ್ತರಲ್ಲಿ ಕೊರೊನಾ ವೈರಸ್ ಪಾಸಿಟಿವ್
ಹೈದರಾಬಾದ್, ಅಕ್ಟೋಬರ್ 19: ದೇಶದ ಅನೇಕ ಭಾಗಗಳಲ್ಲಿ ಮಳೆ ಅಬ್ಬರ ಮುಂದುವರಿದಿದ್ದು, ಒಂದೆಡೆ ಪ್ರವಾಹ ಇನ್ನೊಂದೆಡೆ ಕೋವಿಡ್ ಭಯದ ನಡುವೆ ಜನರು ಮತ್ತಷ್ಟು ತತ್ತರಿಸಿದ್ದಾರೆ.
ಹೈದರಾಬಾದ್ನ ಜಿಎಚ್ಎಂಸಿ ಪ್ರದೇಶದಲ್ಲಿ ಕಳೆದ ಕೆಲವು ದಿನಗಳಿಂದ ಸ್ಥಾಪಿಸಲಾಗಿರುವ ನೆರೆ ಸಂತ್ರಸ್ತರ ಪರಿಹಾರ ಮತ್ತು ರಕ್ಷಣಾ ಶಿಬಿರಗಳಲ್ಲಿ ರಕ್ಷಣೆ ಪಡೆದಿರುವ 19 ಮಂದಿಯಲ್ಲಿ ಕೊರೊನಾ ವೈರಸ್ ಪಾಸಿಟಿವ್ ಕಂಡುಬಂದಿದೆ.
ಪ್ರವಾಹದಲ್ಲಿ ಸಿಲುಕಿದ್ದ ವ್ಯಕ್ತಿ ಕರೆ ಮಾಡಿ ಸ್ನೇಹಿತನ ಬಳಿ ಆಡಿದ ಕೊನೆಯ ಮಾತು
ಜಿಎಚ್ಎಂಎಸ್ನಲ್ಲಿ ಈ ರೀತಿಯ 165 ಶಿಬಿರಗಳಿದ್ದು, ಕೋವಿಡ್ಗೆ ಸಂಬಂಧಿಸಿದ ವಿವಿಧ ಬಗೆಯ ಲಕ್ಷಣಗಳನ್ನು ಹೊಂದಿರುವ 2,000ಕ್ಕೂ ಅಧಿಕ ನೆರೆ ಸಂತ್ರಸ್ತರನ್ನು ಪರೀಕ್ಷೆಗೆ ಒಳಪಡಿಸಲಾಗಿದೆ.
ಕೋವಿಡ್ ಪಾಸಿಟಿವ್ ಕಂಡುಬಂದ ಎಲ್ಲ ಸಂತ್ರಸ್ತರನ್ನೂ ಸಮೀಪದ ಸರ್ಕಾರಿ ಆಸ್ಪತ್ರೆಗಳಿಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಇದುವರೆಗೂ 16,000ಕ್ಕೂ ಹೆಚ್ಚು ಮಂದಿಯನ್ನು ತಪಾಸಣೆಗೆ ಒಳಪಡಿಸಲಾಗಿದ್ದು, ಅವರ ಆರೋಗ್ಯ, ಚಿಕಿತ್ಸೆ ಮತ್ತು ಔಷಧಗಳ ಪೂರೈಕೆಗೆ ಆರೋಗ್ಯ ಶಿಬಿರಗಳನ್ನು ಸ್ಥಾಪಿಸಲಾಗಿದೆ ಎಂದು ಆರೋಗ್ಯ ಸಚಿವ ಎತಲಾ ರಾಜೇಂದರ್ ತಿಳಿಸಿದ್ದಾರೆ.
ಆರೋಗ್ಯ ಶಿಬಿರಗಳ ಜತೆಗೆ ಸರ್ಕಾರವು ದಿನದ 24ಗಂಟೆ ಕಾರ್ಯ ನಿರ್ವಹಿಸುವ ಸಂಚಾರಿ ಆರೋಗ್ಯ ಕೇಂದ್ರಗಳನ್ನು ಕೂಡ ಆರಂಭಿಸಿದ್ದು, ಈ ತಂಡಗಳು ಪ್ರವಾಹ ಸಂತ್ರಸ್ತ ಪ್ರದೇಶಗಳಲ್ಲಿನ ಜನರಿಗೆ ನೆರವು ನೀಡುತ್ತಿವೆ.
ಸುಂದರ ಚಾರ್ಮಿನಾರ್ಗೆ ಮಳೆಯ ನೀರೇ ಕನ್ನಡಿ
Recommended Video
ರಕ್ಷಣಾ ಕೇಂದ್ರಗಳಲ್ಲಿನ ಪ್ರತಿಯೊಬ್ಬರಿಗೂ ಮಾಸ್ಕ್ ಮತ್ತು ಸ್ಯಾನಿಟೈಸರ್ಗಳನ್ನು ನೀಡಲಾಗುತ್ತಿದೆ. ಜತೆಗೆ ಕುಡಿಯುವ ನೀರನ್ನು ಪೂರೈಸಲಾಗುತ್ತಿದೆ. ನೀರಿನಿಂದ ಹರಡುವ ಕಾಯಿಲೆಯ ಬಗ್ಗೆ ಪ್ರತಿಯೊಬ್ಬರೂ ಎಚ್ಚರಿಕೆಯಿಂದ ಇರಬೇಕು. ಪ್ರವಾಹದ ಕಾರಣ ಬೇರೆ ರೀತಿಯ ಕಾಯಿಲೆಗಳು ಹರಡುವ ಅಪಾಯವಿರುವುದರಿಂದ ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಸಚಿವರು ಹೇಳಿದ್ದಾರೆ.