ಗ್ರೇಟರ್ ಹೈದರಾಬಾದ್ ಚುನಾವಣೆ: ವಿರೋಧಿಗಳಿಗೆ ಬಿಜೆಪಿ ಕಳುಹಿಸಿದ ಬಲವಾದ ಸಂದೇಶ ಒಂದಾ ಎರಡಾ..
ಗಲ್ಲಿ ಚುನಾವಣೆಯೊಂದರ ಚುನಾವಣಾ ಪ್ರಚಾರಕ್ಕೆ ಬಿಜೆಪಿಯ ದೊಡ್ಡ ತಲೆಗಳೆಲ್ಲಾ ಇಳಿಯುತ್ತಾರೆಂದರೆ ಅದರ ಹಿಂದಿನ ಮರ್ಮವೇನು ಎನ್ನುವುದನ್ನು ಸ್ಪಷ್ಟವಾಗಿ ಅರಿಯದೇ ಹೋದವರು ಎಂದರೆ ಅದು ತೆಲಂಗಾಣ ರಾಷ್ಟ್ರೀಯ ಸಮಿತಿಯ ಅಧ್ಯಕ್ಷ ಕಮ್ ಸಿಎಂ ಕೆಸಿಆರ್.
ಹೌದು, ಬಿಜೆಪಿ ಅಬ್ಬರದ ಪ್ರಚಾರ ನಡೆಸಿದರೂ, ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಕಾರ್ಪೋರೇಷನ್ ನ ಮೇಯರ್ ಪದವಿ ಬಿಜೆಪಿಗೆ ಸಿಗದೇ ಇರಬಹುದು. ಆದರೆ, ಈ ಚುನಾವಣೆಯ ಫಲಿತಾಂಶ ಟಿಆರ್ ಎಸ್ ಮತ್ತು ಓವೈಸಿ ಸಹೋದರರ ನೇತೃತ್ವದ ಎಐಎಂಐಎಂ ಬಲವಾದ ಸಂದೇಶ ತಲುಪಿಸುವಲ್ಲಿ ಬಿಜೆಪಿ ಯಶಸ್ವಿಯಾಗಿದೆ.
ಹಿಂದೊಮ್ಮೆ, ಅಮಿತ್ ಶಾ ಸಂದರ್ಶನದಲ್ಲಿ ಮಾತೊಂದನ್ನು ಹೇಳಿದ್ದರು. ಚುನಾವಣೆ ಅಂದರೆ ಚುನಾವಣೆ, ಅದು ಪಂಚಾಯತ್ ಚುನಾವಣೆ ಇರಬಹುದು, ಪಾರ್ಲಿಮೆಂಟ್ ಇಲೆಕ್ಷನ್ ಇರಬಹುದು. ಕಣಕ್ಕೆ ಇಳಿಯಲು ನಿರ್ಧರಿಸಿದರೆ, ನಮ್ಮೆಲ್ಲಾ ಶಕ್ತಿಯಿಂದ ಚುನಾವಣೆ ಗೆಲ್ಲಲು ಪ್ರಯತ್ನ ಮಾಡುತ್ತೇವೆ ಎಂದು.
ಬಿಜೆಪಿ, ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮುವಲ್ಲಿ ಸ್ವಲ್ಪದರಲ್ಲೇ ಎಡವಿದೆ. ಆದರೆ, ಈ ಚುನಾವಣೆಯ ಮೂಲಕ ಬಿಜೆಪಿ ಹೈದರಾಬಾದ್ ಪಾಲಿಕೆ ವ್ಯಾಪ್ತಿಯಲ್ಲಿ ಸ್ಪಷ್ಟವಾಗಿ ತನ್ನ ಚಾಪನ್ನು ಮೂಡಿಸಿದೆ. ಇದು ಮುಂದಿನ ಅಸೆಂಬ್ಲಿ ಚುನಾವಣೆಗೆ ಬಿಜಿಪಿ ಇಟ್ಟಿರುವ ಹೆಜ್ಜೆ ಎಂದೇ ವ್ಯಾಖ್ಯಾನಿಸಲಾಗುತ್ತಿದೆ.

ಮುನ್ಸಿಪಲ್ ಕಾರ್ಪೋರೇಶನ್ ಚುನಾವಣೆ
ಲೋಕಲ್ ಪಾಲಿಟಿಕ್ಸ್ ಎಂದೇ ಕರೆಯಲ್ಪಡುವ ಮುನ್ಸಿಪಲ್ ಕಾರ್ಪೋರೇಶನ್ ಚುನಾವಣೆಯೊಂದನ್ನು ಬಿಜೆಪಿ ಸೀರಿಯಸ್ಸಾಗಿ ತೆಗೆದುಕೊಂಡಿತು. ಇದಕ್ಕೆ ಕಾರಣ ಇಲ್ಲದಿಲ್ಲ. ತನ್ನ ನೆಲೆಯನ್ನು ತೆಲಂಗಾಣದಲ್ಲೂ ವೃದ್ದಿಸಿಕೊಳ್ಲಬಹುದು ಎನ್ನುವ ಗ್ರೌಂಡ್ ರಿಪೋರ್ಟ್ ಬಿಜೆಪಿಗೆ ಸಿಕ್ಕಿದ್ದು. ಹಾಗಾಗಿ, ಗ್ರೇಟರ್ ಹೈದರಾಬಾದ್ ಚುನಾವಣೆಯಲ್ಲಿ ತಮ್ಮ ಶಕ್ತಿ ಪ್ರದರ್ಶನದೊಂದಿಗೆ ಬಿಜೆಪಿ ಪ್ರಚಾರದ ಕಣಕ್ಕಿಳಿಯಿತು.

ಪ್ರಚಾರದಲ್ಲಿ ಬಿಜೆಪಿ ಘಟಾನುಗಟಿಗಳು
ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಕೇಂದ್ರ ಗೃಹಸಚಿವ ಅಮಿತ್ ಶಾ, ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್, ಯುವಮೋರ್ಚಾದ ಅಧ್ಯಕ್ಷ ತೇಜಸ್ವಿ ಸೂರ್ಯ ಪ್ರಚಾರಕ್ಕೆ ಧುಮುಕಿದರು. ಓವೈಸಿ ಸಹೋದರರು ಮುಸ್ಲಿಂ ಮತಬ್ಯಾಂಕ್ ಅನ್ನೇ ಟಾರ್ಗೆಟ್ ಮಾಡುವುದು ಗೊತ್ತಿರುವುದರಿಂದ, ಬಿಜೆಪಿ ಹಿಂದುತ್ವ, ರಾಷ್ಟ್ರೀಯತೆಯ ಹಿಂದೆ ಬಿತ್ತು. ಹೈದರಾಬಾದ್ ನಗರದ ಹೆಸರನ್ನು ಭಾಗ್ಯನಗರವನ್ನಾಗಿ ಮಾಡುವುದಾಗಿ ಘೋಷಿಸಿತು.

ಬಿಜೆಪಿ ರೋಡ್ ಶೋಗಳಿಗೆ ಜನರು ಉತ್ತಮವಾಗಿ ಸ್ಪಂದಿಸಿದರು
ಬಿಜೆಪಿ ರೋಡ್ ಶೋಗಳಿಗೆ ಜನರು ಉತ್ತಮವಾಗಿ ಸ್ಪಂದಿಸಿದರು. ಬಿಜೆಪಿ ಇಲ್ಲಿ ಏನು ಮಾಡಲು ಸಾಧ್ಯ ಎಂದು ಉದಾಸೀನತೆ ತೋರಿದ ಕೆಸಿಆರ್ ಗೆ ಬಿಜೆಪಿ ನಿರೀಕ್ಷಿಸಲೂ ಸಾಧ್ಯವಾಗದಂತಹ ಏಟು ನೀಡಿತು. ಏಕೆಂದರೆ, ಓವೈಸಿ ತಮ್ಮ ಪ್ರಾಬಲ್ಯದ ಕ್ಷೇತ್ರಗಳಲ್ಲಿ ಹಿಡಿತ ಸಾಧಿಸುವುದನ್ನು ಮುಂದುವರಿಸಿದ್ದಾರೆ. ಹಾಗಾಗಿ, ಬಿಜೆಪಿಗೆ ಸಿಕ್ಕಿರುವ ಮತಗಳೆಲ್ಲಾ ಟಿಆರ್ ಎಸ್ ಅಥವಾ ಕಾಂಗ್ರೆಸ್ಸಿನದ್ದು.

ಗ್ರೇಟರ್ ಹೈದರಾಬಾದ್ ಚುನಾವಣೆ: ಬಿಜೆಪಿ ಕಳುಹಿಸಿದ ಸಂದೇಶ ಒಂದಾ ಎರಡಾ
ಕಳೆದ ಚುನಾವಣೆಯಲ್ಲಿ ಎಲ್ಲೋ ನಾಲ್ಕು ಸ್ಥಾನವನ್ನು ಗೆದ್ದಿದ್ದ ಬಿಜೆಪಿ ಈ ಚುನಾವಣೆಯಲ್ಲಿ ಒಂದು ಹಂತಕ್ಕೆ ಅಧಿಕಾರದತ್ತ ದಾಪುಗಾಲು ಹಾಕಿತ್ತು. ಕೊನೆಗೆ, ಓವೈಸಿ ಪಕ್ಷವನ್ನು ಹಿಂದಿಕ್ಕಿ ಬಿಜೆಪಿ 48 ಸ್ಥಾನವನ್ನು ಪಡೆಯುವ ಮೂಲಕ ಎರಡನೇ ಸ್ಥಾನದಲ್ಲಿದೆ. ಇಲ್ಲಿ ಟಿಆರ್ ಎಸ್ ಮತ್ತು ಬಿಜೆಪಿಗಿರುವ ಅಂತರವೆಂದರೆ ಕೇವಲ ಏಳು ಸ್ಥಾನ. ಒಟ್ಟಿನಲ್ಲಿ, ಬಿಜೆಪಿ ಈ ಚುನಾವಣೆಯ ಮೂಲಕ, ಟಿಆರ್ ಎಸ್ ಮತ್ತು ಎಐಎಂಐಎಂ ಪಕ್ಷಗಳಿಗೆ ಬಲವಾದ ಸಂದೇಶವನ್ನು ರವಾನಿಸಿದೆ.












Click it and Unblock the Notifications