ಬಿಜೆಪಿಯತ್ತ ಮುಖ ಮಾಡಿದ ಆಂಧ್ರದ ಮಾಜಿ ಸಿಎಂ
ಹೈದರಾಬಾದ್, ಜೂ.17: ಅಖಂಡ ಆಂಧ್ರ ವಿಭಜನೆ ಖಂಡಿಸಿ ಆಂಧ್ರಪ್ರದೇಶ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಇತ್ತಿದ್ದ ಕಿರಣ್ ಕುಮಾರ್ ರೆಡ್ಡಿ ಅವರು ಈಗ ಬಿಜೆಪಿಯತ್ತ ಮುಖ ಮಾಡಿದ್ದಾರೆ ಎಂಬ ಸುದ್ದಿ ಬಂದಿದೆ. ಕಾಂಗ್ರೆಸ್ ತೊರೆದ ಮೇಲೆ ಹೊಸ ಪ್ರಾದೇಶಿಕ ಪಕ್ಷ ಕಟ್ಟಿದ್ದ ಕಿರಣ್ ಅವರು ರಾಜಕೀಯ ಅಸ್ತಿತ್ವಕ್ಕಾಗಿ ಹೋರಾಟ ನಡೆಸಿದ್ದಾರೆ.
ಮುಖ್ಯಮಂತ್ರಿ ಸ್ಥಾನ ತೊರೆದ ಮೇಲೆ ಕಿರಣ್ ಕುಮಾರ್ ರೆಡ್ಡಿ ಅವರು ಹೊಸ ಪ್ರಾದೇಶಿಕ ಪಕ್ಷ ಕಟ್ಟಿದ್ದರು. ಆಂಧ್ರ ವಿಭಜನೆ ಬಳಿಕ ಕಾಂಗ್ರೆಸ್ ತೊರೆದಿದ್ದ ಕಿರಣ್ಕುಮಾರ್ ರೆಡ್ಡಿ ತಮ್ಮದೇ ನೇತೃತ್ವದ ಸಂಯುಕ್ತ ಆಂಧ್ರ ಪಕ್ಷವನ್ನು ಸ್ಥಾಪನೆ ಮಾಡಿದ್ದರು. ಆದರೆ, ಇತ್ತೀಚೆಗೆ ನಡೆದ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಯಲ್ಲಿ ಅವರ ಪಕ್ಷ ಹೇಳ ಹೆಸರಿಲ್ಲದಂತೆ ಹೀನಾಯವಾಗಿ ಸೋತು ಕಿರಣ್ಕುಮಾರ್ ರೆಡ್ಡಿ ರಾಜಕೀಯದಲ್ಲಿ ಮೂಲೆಗುಂಪಾಗಿದ್ದರು.
ಇದೀಗ ತಮ್ಮ ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳಲು ಮುಂದಾಗಿರುವ ಅವರು, ಬಿಜೆಪಿಯತ್ತ ಓರೆಗಣ್ಣಿನಿಂದ ನೋಡುತ್ತಿದ್ದಾರೆ. ತಮ್ಮ ರಾಜಕೀಯ ಜೀವನದುದ್ದಕ್ಕೂ ಬಿಜೆಪಿಯನ್ನು ವಿರೋಧಿಸಿಯೇ ರಾಜಕಾರಣ ಮಾಡಿದ್ದ ಕಿರಣ್ಕುಮಾರ್ ರೆಡ್ಡಿ, ಬದಲಾದ ಪರಿಸ್ಥಿತಿಯಲ್ಲಿ ಅಸ್ತಿತ್ವಕ್ಕಾಗಿಯೇ ಕಮಲ ಪಕ್ಷವನ್ನು ಅಪ್ಪಿಕೊಳ್ಳಲು ಮುಂದಾಗಿದ್ದಾರೆ.

ಯಾವುದೇ ಕಾರಣಕ್ಕೂ ಮತ್ತೆ ಕಾಂಗ್ರೆಸ್ ಸೇರುವ ಪ್ರಶ್ನೆಯೇ ಇಲ್ಲ. ಇನ್ನೇನಿದ್ದರೂ ಬಿಜೆಪಿ ಸೇರುವ ಬಗ್ಗೆ ಅವಕಾಶವನ್ನು ಮುಕ್ತವಾಗಿ ಇಟ್ಟುಕೊಳ್ಳಲಾಗಿದೆ. ಈ ಬಗ್ಗೆ ಈಗಾಗಲೇ ಹಿರಿಯ ನಾಯಕರೊಂದಿಗೆ ಒಂದು ಸುತ್ತಿನ ಮಾತುಕತೆ ನಡೆಸಲಾಗಿದೆ ಎಂದು ಕಿರಣ್ಕುಮಾರ್ ರೆಡ್ಡಿಯವರ ಆಪ್ತರೊಬ್ಬರು ತಿಳಿಸಿದ್ದಾರೆ.
ಕೇಂದ್ರದಲ್ಲಿ ಎನ್ಡಿಎ, ಆಂಧ್ರ ಪ್ರದೇಶದಲ್ಲಿ ಅದರ ಮೈತ್ರಿಕೂಟವಾದ ಟಿಡಿಪಿ ಅಧಿಕಾರದಲ್ಲಿರುವುದರಿಂದ ಬಿಜೆಪಿಯನ್ನೇ ಸೇರಲು ರೆಡ್ಡಿ ಉತ್ಸುಕತೆ ತೋರಿದ್ದಾರೆ. ಅಲ್ಲದೆ, ಸ್ವತಃ ಕಿರಣ್ಕುಮಾರ್ ರೆಡ್ಡಿಯವರ ಸಹೋದರರೊಬ್ಬರು ಪಕ್ಷ ಸೇರ್ಪಡೆಗೆ ವೇದಿಕೆ ಸಿದ್ಧಪಡಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.[ಕಿರಣ್ ರೆಡ್ಡಿಯಿಂದ ಹೊಸ ಪಕ್ಷ ಉದಯ]
ಈ ಬಗ್ಗೆ ಕಿರಣ್ಕುಮಾರ್ ರೆಡ್ಡಿಯವರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲವಾದರೂ ಅವರು ಬಿಜೆಪಿ ಸೇರುವುದು ಖಚಿತ ಎಂದು ಉನ್ನತ ಮೂಲಗಳು ಸ್ಪಷ್ಟಪಡಿಸಿವೆ.
ಆಂಧ್ರ ವಿಭಜನೆಯಾಗಲು ತೆಲುಗುದೇಶಂ ಪಾರ್ಟಿಯ ಚಂದ್ರಬಾಬು ನಾಯ್ಡು ಮೂಲ ಕಾರಣ ಎಂದು ಕಿರಣ್ ಕುಮಾರ್ ರೆಡ್ಡಿ ಆರೋಪಿಸಿದ್ದರು. ಕಿರಣ್ ರೆಡ್ಡಿ ಅವರ ತಂದೆ ದಿವಂಗತ ಅಮರನಾಥರೆಡ್ಡಿ ಅವರು ಟಿಡಿಪಿ ಅಧ್ಯಕ್ಷ ಚಂದ್ರಬಾಬು ನಾಯ್ಡು ಅವರಿಗೆ ರಾಜಕೀಯ ಗುರುವಾಗಬೇಕು. ಟಿಡಿಪಿ ವಿರುದ್ಧ ಹೋರಾಟ ಮಾಡಲು ಹೋಗಿ ಕಿರಣ್ ಕುಮಾರ್ ಅವರ ಪಕ್ಷ ಹಾಗೂ ಜಗನ್ ಅವರ ವೈಎಸ್ಸಾರ್ ಪಕ್ಷ ಇನ್ನಿಲ್ಲದ್ದಂತೆ ನೆಲಕಚ್ಚಿದ್ದು ಈಗ ಇತಿಹಾಸ.












Click it and Unblock the Notifications