ಮೊದಲು ಭಾರತದಲ್ಲಿನ ಅಲ್ಪಸಂಖ್ಯಾತರ ಬಗ್ಗೆ ಯೋಚಿಸಿ; ಓವೈಸಿ
ಹೈದರಾಬಾದ್, ಆಗಸ್ಟ್ 20: ಅಫ್ಘಾನಿಸ್ತಾನದ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್ ಓವೈಸಿ, ಮೊದಲು ಭಾರತದಲ್ಲಿ ವಾಸಿಸಿರುವ ಅಲ್ಪಸಂಖ್ಯಾತರ ಮೇಲೆ ಗಮನ ಹರಿಸಿ ಎಂದು ಹೇಳಿದರು.
ತಾಲಿಬಾನ್ನ ಇಸ್ಲಾಮಿಕ್ ಎಮಿರೇಟ್ ಆಫ್ ಅಫ್ಘಾನಿಸ್ತಾನ ಸ್ಥಾಪನೆ ಮುಂದುವರೆಸುತ್ತಿರುವ ಕಾರಣ, ಅಫ್ಘಾನಿಸ್ತಾನದಲ್ಲಿನ ಹಿಂದೂ ಹಾಗೂ ಸಿಖ್ಖರಿಗೆ ಆಶ್ರಯ ನೀಡಲು ಭಾರತ ಇಟ್ಟಿರುವ ಪ್ರಸ್ತಾಪದ ಕುರಿತು ಓವೈಸಿ ಟೀಕಿಸಿದ್ದಾರೆ.

'ವರದಿ ಪ್ರಕಾರ, ಭಾರತದಲ್ಲಿ ಪ್ರತಿ ಒಂಬತ್ತು ಹೆಣ್ಣು ಮಕ್ಕಳಲ್ಲಿ ಒಂದು ಮಗುವು ಐದು ವರ್ಷಕ್ಕಿಂತ ಒಳಗೇ ಸಾವನ್ನಪ್ಪುತ್ತಿದೆ. ಮಹಿಳೆಯರ ವಿರುದ್ಧ ಇಲ್ಲಿ ದೌರ್ಜನ್ಯ ಹಾಗೂ ಅಪರಾಧಗಳು ಹೆಚ್ಚಿವೆ. ಆದರೆ ಕೇಂದ್ರ ಇಲ್ಲಿಯದನ್ನು ಬಿಟ್ಟು ಅಫ್ಘಾನಿಸ್ತಾನದ ಮಹಿಳೆಯರಿಗೆ ಏನಾಗುತ್ತಿದೆ ಎಂದು ಚಿಂತೆ ಮಾಡುತ್ತಿದೆ. ಇಲ್ಲಿ ಹಾಗಾಗುತ್ತಿಲ್ಲವೇ?' ಎಂದು ಪ್ರಶ್ನಿಸಿದ್ದಾರೆ.
ಅಫ್ಘಾನಿಸ್ತಾನವನ್ನು ತಾಲಿಬಾನ್ ಸ್ವಾಧೀನಪಡಿಸಿಕೊಂಡಿದ್ದರಿಂದ ಪಾಕಿಸ್ತಾನಕ್ಕೆ ಹೆಚ್ಚು ಲಾಭವಿದೆ. ಐಎಸ್ಐ ಭಾರತದ ಶತ್ರು. ಉಗ್ರ ಸಂಘಟನೆ ಐಎಸ್ಐ ತಾಲಿಬಾನ್ ನಿಯಂತ್ರಿಸುತ್ತದೆ ಮತ್ತು ಅದನ್ನು ಕೈಗೊಂಬೆಯಂತೆ ಬಳಸುತ್ತದೆ ಎಂಬುದನ್ನು ನೀವು ನೆನಪಿನಲ್ಲಿಟ್ಟುಕೊಳ್ಳಬೇಕು' ಎಂದು ಎಚ್ಚರಿಕೆ ನೀಡಿದ್ದಾರೆ.
ಕಳೆದ ವಾರ ಅಫ್ಘಾನಿಸ್ತಾನ ಬಿಕ್ಕಟ್ಟಿನ ಕುರಿತು ಅಸಾದುದ್ದೀನ್ ಓವೈಸಿ ಪ್ರತಿಕ್ರಿಯೆ ನೀಡಿದ್ದರು. "ಭಾರತ ತಾಲಿಬಾನ್ ಜೊತೆ ಬೇಗ ಮಾತುಕತೆ ನಡೆಸಬೇಕಿತ್ತು," ಎಂದಿದ್ದರು. "ಭಾರತವು ತಾಲಿಬಾನ್ ಜೊತೆ ಅನೌಪಚಾರಿಕ ಅಥವಾ ಔಪಚಾರಿಕ ಮಾತುಕತೆಯನ್ನು ಆರಂಭಿಸಬೇಕಿತ್ತು. ನಾವು ಸಮಯವನ್ನು ಕಳೆದುಕೊಂಡಿದ್ದೇವೆ. ಕಳೆದ ಏಳು ವರ್ಷಗಳಿಂದ ಮೋದಿ ಸರ್ಕಾರ ಏನಾಗುತ್ತಿದೆ ಎಂಬುದನ್ನು ತಿಳಿಯುವುದರಲ್ಲಿ ವಿಫಲವಾಗಿದೆ," ಎಂದು ಟೀಕಿಸಿದ್ದರು.
"ಈಗ ತಾಲಿಬಾನ್ ಅಫ್ಘಾನಿಸ್ತಾನದ ಸಂಪೂರ್ಣ ನಿಯಂತ್ರಣ ಪಡೆದಿದೆ. ಆದರೆ ಭಾರತವು ಅವರೊಂದಿಗೆ ಯಾವುದೇ ಸಂವಹನ ಅಥವಾ ಮಾತುಕತೆ ನಡೆಸಿಲ್ಲ. ಭಾರತವು ತಾಲಿಬಾನ್ ಜೊತೆ ಮಾತುಕತೆ ನಡೆಸಬೇಕು ಎಂದು ಎಲ್ಲ ಅಂತಾರಾಷ್ಟ್ರೀಯ ಭದ್ರತಾ ತಜ್ಞರು ಸೂಚಿಸಿದ್ದಾರೆ," ಎಂದು ಉಲ್ಲೇಖ ಮಾಡಿದ್ದರು.
ಈ ವಾರದ ಆರಂಭದಲ್ಲಿ ಪ್ರಧಾನಿ ಮೋದಿ, ಅಫ್ಘಾನಿಸ್ತಾನದಲ್ಲಿರುವ ನಮ್ಮ ನಾಗರಿಕರನ್ನು ರಕ್ಷಿಸುವುದಲ್ಲದೇ ಭಾರತಕ್ಕೆ ಬರಲು ಬಯಸುವ ಸಿಖ್ಖರು ಹಾಗೂ ಹಿಂದೂ ಅಲ್ಪಸಂಖ್ಯಾತರಿಗೆ ಆಶ್ರಯ ನೀಡಬೇಕು ಎಂದು ಸರ್ಕಾರದ ಹಿರಿಯ ಅಧಿಕಾರಿಗಳಿಗೆ ಸೂಚಿಸಿದ್ದರು. ಸಹಾಯಕ್ಕಾಗಿ ಭಾರತದೆಡೆಗೆ ನಿರೀಕ್ಷೆಯಿಟ್ಟುಕೊಂಡಿರುವ ಅಫ್ಘಾನ್ ಸಹೋದರ ಸಹೋದರಿಯರಿಗೆ ನಾವು ನಮ್ಮಿಂದ ಸಾಧ್ಯವಿರುವ ಎಲ್ಲಾ ಸಹಾಯ ಒದಗಿಸಬೇಕು ಎಂದು ಹೇಳಿದ್ದರು.
ಭಾರತಕ್ಕ ಬರಲು ಬಯಸುವ ಅಫ್ಘನ್ನರಿಗ ಭಾರತ ತುರ್ತು ಇ-ವೀಸಾ ಸೇವೆಯನ್ನು ತೆರೆದಿದೆ. ಭಾರತಕ್ಕಾಗಿ ಕಾರ್ಯ ನಿರ್ವಹಿಸಿದ ಅಫ್ಘಾನ್ ಅಧಿಕಾರಿಗಲು, ನಾಗರಿಕ ಸಮಾಜದ ಸದಸ್ಯರು ಹಾಗೂ ಪತ್ರಕರ್ತರಿಗೆ ವೀಸಾ ನೀಡುವ ಗುರಿಯನ್ನು ಭಾರತ ಹೊಂದಿದೆ ಎಂದು ತಿಳಿಸಿದರು.
ಅಫ್ಘಾನಿಸ್ತಾನದಿಂದ ವಾಪಸಾತಿ ಪ್ರಕ್ರಿಯೆಗೆ 24x7 ವಿಶೇಷ ಅಫ್ಘಾನಿಸ್ತಾನ ಸೆಲ್ ತೆರೆಯಲಾಗಿದೆ. ಸುಮಾರು 1650 ಭಾರತೀಯರು ಸ್ವದೇಶಕ್ಕೆ ವಾಪಸಾಗಲು ವಿನಂತಿಸಿದ್ದಾರೆ. ಆಗಸ್ಟ್ 15ರ ಮೊದಲು ಭಾರತಕ್ಕೆ ಮರಳಲು 1500 ವಿನಂತಿಗಳು ದೊರೆತಿವೆ ಎಂದು ಹೇಳಿದ್ದರು.
20 ವರ್ಷಗಳ ನಂತರ ಅಫ್ಘಾನ್ನಿಂದ ಅಮೆರಿಕ ತನ್ನ ಸೇನಾ ಪಡೆಯನ್ನು ಹಿಂದಕ್ಕೆ ಕರೆಸಿಕೊಳ್ಳುತ್ತಿದ್ದಂತೆ ತಾಲಿಬಾನಿಗಳು ಆಕ್ರಮಣ ಮಾಡಿ ಅಫ್ಘಾನಿಸ್ತಾನನ್ನು ವಶಪಡಿಸಿಕೊಂಡಿದ್ದಾರೆ. ಅಫ್ಘಾನಿಸ್ತಾನದಲ್ಲಿ ಕಳೆದ ಕೆಲವು ತಿಂಗಳಿಂದ, ಅಂದರೆ ಅಮೆರಿಕ ಮಿಲಿಟರಿ ಹೊರ ಹೋಗಲು ತೀರ್ಮಾನಿಸಿದ ಬಳಿಕ, ತಾಲಿಬಾನ್ ಉಗ್ರರ ಅಟ್ಟಹಾಸ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇತ್ತು. ಇದೀಗ ಅಫ್ಘಾನಿಸ್ತಾನವನ್ನು ಸಂಪೂರ್ಣ ವಶಪಡಿಸಿಕೊಂಡಿದ್ದಾರೆ.












Click it and Unblock the Notifications