ಪವನ್ ಕಲ್ಯಾಣ್ ಪಕ್ಷ ಸೇರಿದ ಖಡಕ್ ಅಧಿಕಾರಿ ವಿವಿ ಲಕ್ಷ್ಮಿನಾರಾಯಣ
ಹೈದರಾಬಾದ್, ಮಾರ್ಚ್ 17: ಸಿಬಿಐನ ಮಾಜಿ ಜಂಟಿ ನಿರ್ದೇಶಕ ವಿವಿ ಲಕ್ಷ್ಮಿ ನಾರಾಯಣ ಅವರು ತೆಲುಗಿನ ಪವರ್ ಸ್ಟಾರ್ ಪವನ್ ಕಲ್ಯಾಣ್ ಅವರ ಜನ ಸೇನಾ ಪಕ್ಷಕ್ಕೆ ಭಾನುವಾರದಾದಂದು ಅಧಿಕೃತವಾಗಿ ಸೇರ್ಪಡೆಯಾಗಿದ್ದಾರೆ. ಶ್ರೀಕೃಷ್ಣದೇವರಾಯ ವಿಶ್ವ ವಿದ್ಯಾಲಯದ ಮಾಜಿ ಉಪ ಕುಲಪತಿ ರಾಜಗೋಪಾಲ್ ಅವರು ಕೂಡಾ ಪವನ್ ಪಾರ್ಟಿ ಸೇರಿಕೊಂಡಿದ್ದಾರೆ.
ಖಡಕ್ ಅಧಿಕಾರಿ ಎಂದೇ ಹೆಸರಾಗಿದ್ದ ವಿವಿ ಲಕ್ಷ್ಮಿ ನಾರಾಯಣ ಅವರು ವಿವಿಎಲ್, ಗಾಲಿ ಜನಾರ್ದನ ರೆಡ್ಡಿ ಅಂಡ್ ಫ್ಯಾಮಿಲಿ ಒಎಂಸಿ ಅಕ್ರಮ ಗಣಿಗಾರಿಕೆ, ಜಗನ್ ಅಕ್ರಮ ಆಸ್ತಿ ಪ್ರಕರಣ, ಎಮ್ಮಾರ್ ಹಗರಣ, ಅದಕ್ಕೂ ಮೊದಲ ಭಾರತದ ಮಟ್ಟಿಗೆ ಅತಿ ದೊಡ್ಡ ಹಗರಣವಾದ ಸತ್ಯಂ ಕಂಪ್ಯೂಟರ್ಸ್ ಹಗರಣ ಸೇರಿದಂತೆ ಹಲವಾರು ಪ್ರಕರಣಗಳನ್ನು ಯಶಸ್ವಿಯಾಗಿ ತನಿಖೆ ನಡೆಸಿ, ಹಲವು ರಾಜಕಾರಣಿಗಳು ಮತ್ತು ಅಧಿಕಾರಿಗಳಿಗೆ ಸಿಂಹಸ್ವಪ್ನರಾಗಿದ್ದರು.
'ಪವನ್ ಕಲ್ಯಾಣ್ ಆಂಧ್ರ ಸಿಎಂ ಆಗುವುದನ್ನು ನೋಡುವಾಸೆ'
2018ರ ಏಪ್ರಿಲ್ ತಿಂಗಳಿನಲ್ಲಿ ಇಂಡಿಯನ್ ಪೊಲೀಸ್ ಸರ್ವೀಸ್ (ಐಪಿಎಸ್) ನಿಂದ ಸ್ವಯಂನಿವೃತ್ತಿ ಪಡೆದರು. ಗಾಲಿ ಜನಾರ್ದನ ರೆಡ್ಡಿ ಹಾಗೂ ಜಗನ್ ಮೋಹನ್ ರೆಡ್ಡಿ ಅವರನ್ನು ಬಂಧಿಸಿದ್ದರು.
ನಿವೃತ್ತಿ ಪಡೆದ ಬಳಿಕ ಆರೆಸ್ಸೆಸ್ ನಾಯಕರ ಜತೆಗೆ ಲಕ್ಷ್ಮಿ ನಾರಾಯಣ ಅವರ ಫೋಟೊಗಳು ಕಾಣಿಸಿಕೊಂಡಿದ್ದವು. ತೆಲಂಗಾಣದಲ್ಲಿ ಆರೆಸ್ಸೆಸ್, ಬಿಜೆಪಿ ಬಲಗೊಳಿಸಲು ಕೇಸರಿ ಪಕ್ಷ ಸೇರುತ್ತಾರೆ ಎಂಬ ಸುದ್ದಿ ಹಬ್ಬಿತ್ತು. ಆದರೆ, ಲಕ್ಷ್ಮಿ ನಾರಾಯಣ ಅವರ ಆಪ್ತರು ಸುದ್ದಿಯನ್ನು ಅಲ್ಲಗೆಳೆದಿದ್ದರು. 2018ರ ನವೆಂಬರ್ ನಲ್ಲಿ ಐಪಿಎಸ್ ಮಾಜಿ ಅಧಿಕಾರಿಗಳು ಹಾಗೂ ಸಮಾನ ಮನಸ್ಕರು ಸೇರಿಕೊಂಡು ಜನಧ್ವನಿ ಹೊಸ ಪಕ್ಷ ಸ್ಥಾಪಿಸುತ್ತಾರೆ ಎಂಬ ಸುದ್ದಿ ಹಬ್ಬಿತ್ತು. ಆದರೆ, ಯಾವುದೇ ಪಕ್ಷ ಸ್ಥಾಪನೆಯಾಗಲಿಲ್ಲ.
ಜನಸೇನಾ ಪ್ರಣಾಳಿಕೆ: ವಾರ್ಷಿಕ 10 ಲಕ್ಷ ಉದ್ಯೋಗ ಪವನ್ ಭರವಸೆ
1990ರ ಮಹಾರಾಷ್ಟ್ರ ಕೇಡರ್ ಗೆ ಸೇರಿದ ಖಡಕ್ ಐಪಿಎಸ್ ಅಧಿಕಾರಿ ಲಕ್ಷ್ಮಿನಾರಾಯಣ.ಮೂಲತಃ ಇಂಜಿನಿಯರ್ ಆದರೂ ಕಾನೂನನ್ನು ಚೆನ್ನಾಗಿ ಅರಿದು ಕುಡಿದಿದ್ದಾರೆ. ವಾರಂಗಲ್ ರೀಜನಲ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಮೆಕಾನಿಕಲ್ ಇಂಜಿನಿಯರಿಂಗ್ ನಲ್ಲಿ ಬಿಇ ಮಾಡಿದ್ದಾರೆ. ಬಿಇ ಮುಗಿಸುತ್ತಿದ್ದಂತೆ ಐಪಿಎಸ್ ಅಧಿಕಾರಿಯಾದರು. ಮಹಾರಾಷ್ಟ್ರದ ನಾಂದೇಡ್ ನಲ್ಲಿ ಎಸ್ ಪಿ ಯಾಗಿ ಸಾಕಷ್ಟು ಹೆಸರು ಗಳಿಸಿದರು. ಅಲ್ಲಿಂದ ಮುಂದೆ ಮಹಾರಾಷ್ಟ್ರ ಎಟಿಎಸ್ ತಂಡ ಸೇರಿದರು. 2006ರ ಜೂನ್ 12ರಂದು ಡಿಐಜಿಯಾಗಿ ಹೈದರಾಬಾದ್ ವಲಯಕ್ಕೆ ವರ್ಗವಾದರು. 2006ರಲ್ಲಿ ಪೊಲೀಸ್ ಪದಕವನ್ನು ಎದೆಗೇರಿಸಿಕೊಂಡರು.