ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸತ್ಯಂ ಮಹಾ ಅಕ್ರಮ : ಮಾರ್ಚ್ 9ರಂದು ತೀರ್ಪು

By Kiran B Hegde
|
Google Oneindia Kannada News

ಹೈದರಾಬಾದ್, ಡಿ. 23: ಆರು ವರ್ಷಗಳ ಹಿಂದೆ ಭಾರತದಲ್ಲಿ ಕೋಲಾಹಲ ಸೃಷ್ಟಿಸಿದ್ದ ಸತ್ಯಂ ಕಂಪ್ಯೂಟರ್ ಸರ್ವೀಸ್ ಲಿ. (ಎಸ್‌ಸಿಎಸ್ಎಲ್) ನ ಬಹುಕೋಟಿ ಮೌಲ್ಯದ ಲೆಕ್ಕ ಅಪರಾಧದ ಆರೋಪಿಗಳಿಗೆ 2015ರ ಮಾರ್ಚ್ 9ರಂದು ಶಿಕ್ಷೆ ಘೋಷಿಸುವುದಾಗಿ ವಿಶೇಷ ನ್ಯಾಯಾಲಯ ತಿಳಿಸಿದೆ.

ಮಂಗಳವಾರ ಪ್ರಕರಣದ ಅಂತಿಮ ವಿಚಾರಣೆ ನಡೆಸಿದ ವಿಶೇಷ ನ್ಯಾಯಾಧೀಶ ಬಿವಿಎಲ್ ಚಕ್ರವರ್ತಿ, "ಈ ಪ್ರಕರಣವನ್ನು ಸಂಪೂರ್ಣ ಅಧ್ಯಯನ ಮಾಡಿ ತೀರ್ಪು ಬರೆಯಲು ನನಗೆ ಕನಿಷ್ಠ 2-3 ವಾರವಾದರೂ ಬೇಕು" ಎಂದರು.

ಸಿಬಿಐ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಕೆ. ಸುರೇಂದರ್ ಮಾಧ್ಯಮಗಳೊಂದಿಗೆ ಮಾತನಾಡಿ, "ಸತ್ಯಂ ಪ್ರಕರಣದ ತೀರ್ಪನ್ನು ನ್ಯಾಯಾಧೀಶರು ಮಾರ್ಚ್ 9ಕ್ಕೆ ಪ್ರಕಟಿಸಲಿದ್ದಾರೆ" ಎಂದು ತಿಳಿಸಿದರು. [ಟೆಕ್ ಎಂ ಮಹೀಂದ್ರಾ ವಿಲೀನ : ಸತ್ಯಂ ಷೇರು ಜಿಗಿತ]

ಸತ್ಯಂ ಕಂಪ್ಯೂಟರ್‌ನ ಸಂಸ್ಥಾಪಕ ಮತ್ತು ಅಧ್ಯಕ್ಷ ಬಿ ರಾಮಲಿಂಗ ರಾಜು, ಸಹೋದರ, ಮಾಜಿ ವ್ಯವಸ್ಥಾಪಕ ನಿರ್ದೇಶಕ ಬಿ ರಾಮ ರಾಜು, ಮಾಜಿ ಮುಖ್ಯ ಆರ್ಥಿಕ ಅಧಿಕಾರಿ ವಡ್ಲಮಣಿ ಶ್ರೀನಿವಾಸ್ ಮತ್ತು ಇತರ ಆರೋಪಿಗಳು ನ್ಯಾಯಾಲಯದಲ್ಲಿ ಹಾಜರಿದ್ದರು.

satyam

ಭಾರತ ಕಂಡ ಅತಿದೊಡ್ಡ ಅಕ್ರಮ : ಆರು ವರ್ಷಗಳ ಹಿಂದೆ 2009ರ ಜನವರಿ 7ರಂದು ಹೊರಬಂದಿದ್ದ ಸತ್ಯಂ ಕಂಪ್ಯೂಟರ್ಸ್ ಅಕ್ರಮವು ಲೆಕ್ಕಪತ್ರ ವಿಭಾಗದಲ್ಲಿ ಭಾರತ ಇದುವರೆಗೆ ಕಂಡ ಅತಿದೊಡ್ಡ ಅಪರಾಧ ಪ್ರಕರಣವಾಗಿದೆ.

ಸತ್ಯಂ ಕಂಪ್ಯೂಟರ್‌ನ ಅಕ್ರಮ ಬಯಲಿಗೆ ಬಂದ ಎರಡು ದಿನಗಳ ನಂತರ ಆಂದ್ರಪ್ರದೇಶದಲ್ಲಿ ರಾಜು ಹಾಗೂ ಅವರ ಸಹೋದರ ರಾಮ ರಾಜು ಅವರನ್ನು ಬಂಧಿಸಲಾಗಿತ್ತು. ಪ್ರಕರಣದ ಪ್ರಮುಖ ಆರೋಪಿ ರಾಮಲಿಂಗ ರಾಜು ಅವರು ತಪ್ಪು ಲೆಕ್ಕ ತೋರಿಸಿ ಅಕ್ರಮ ಎಸಗಿರುವುದನ್ನು ಒಪ್ಪಿಕೊಂಡಿದ್ದರು.

ಷೇರುದಾರರಿಗೆ 14 ಸಾವಿರ ಕೋಟಿ ನಷ್ಟ : ಪ್ರಕರಣದ ತನಿಖೆಯನ್ನು 2009ರ ಫೆಬ್ರವರಿಯಲ್ಲಿ ಸಿಬಿಐಗೆ ವಹಿಸಲಾಗಿತ್ತು. ತನಿಖೆ ನಡೆಸಿದ ಸಿಬಿಐ ಸತ್ಯಂ ಕಂಪ್ಯೂಟರ್ ನಡೆಸಿದ ಅಕ್ರಮದಿಂದ ಷೇರುದಾರರಿಗೆ 14,000 ಕೋಟಿ ರೂ. ನಷ್ಟವಾಗಿದೆ ಎಂದು ಆರೋಪ ಪಟ್ಟಿ ದಾಖಲಿಸಿತ್ತು. ಪ್ರಕರಣದಲ್ಲಿ ಇಲ್ಲಿಯವರೆಗೆ ಸುಮಾರು 3,000 ದಾಖಲೆಗಳು ಹಾಗೂ 226 ಸಾಕ್ಷಿಗಳ ವಿಚಾರಣೆ ನಡೆಸಲಾಗಿದೆ. [ಸತ್ಯಂ ರಾಜು ಅವರ ಚಂದಮಾಮ ಕತೆ]

ನಂತರ ರಾಜು ಸೇರಿದಂತೆ ಎಲ್ಲ ಆರೋಪಿಗಳೂ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು. ಇದೇ ವರ್ಷ ಜನವರಿಯಲ್ಲಿ ರಾಜು ಅವರ ಪತ್ನಿ ನಂದಿನಿ ರಾಜು ಮತ್ತು ಮಕ್ಕಳಾದ ತೇಜಾ ರಾಜು ಹಾಗೂ ರಾಮ ರಾಜು ಸೇರಿದಂತೆ 21 ಇತರ ಸಂಬಂಧಿಕರ ಮೇಲೆ ಆರ್ಥಿಕ ಅಪರಾಧದಡಿ ಆರೋಪಪಟ್ಟಿ ದಾಖಲಾಗಿತ್ತು.

ಎರಡು ವಾರಗಳ ಹಿಂದಷ್ಟೇ ಗಂಭೀರ ಅಪರಾಧ ತನಿಖಾ ಕಚೇರಿ (ಎಸ್ಎಫ್ಐಓ) ಸಲ್ಲಿಸಿದ್ದ ದೂರಿನ ಹಿನ್ನೆಲೆಯಲ್ಲಿ ರಾಜು, ರಾಮರಾಜು, ವಡ್ಲಮಣಿ ಶ್ರೀನಿವಾಸ ಮತ್ತು ಮಾಜಿ ನಿರ್ದೇಶಕ ರಾಮ ಮೈನಾಂಪತಿ ಅವರಿಗೆ ಆರು ತಿಂಗಳ ಜೈಲು ಹಾಗೂ ದಂಡ ವಿಧಿಸಿ ಇದೇ ನ್ಯಾಯಾಲಯ ತೀರ್ಪು ನೀಡಿತ್ತು.

ಪ್ರಕರಣದ ಇತರ ಆರೋಪಿಗಳು : ಮಾಜಿ ಪಿಡಬ್ಲ್ಯೂಸಿ ಲೆಕ್ಕಪರಿಶೋಧಕರಾದ ಸುಬ್ರಮಣಿ ಗೋಪಾಲಕೃಷ್ಣನ್ ಮತ್ತು ಟಿ ಶ್ರೀನಿವಾಸ, ರಾಜು ಅವರ ಮತ್ತೋರ್ವ ಸಹೋದರ ಬಿ ಸೂರ್ಯನಾರಾಯಣ ರಾಜು, ಮಾಜಿ ಸಿಬ್ಬಂದಿ ಜಿ ರಾಮಕೃಷ್ಣ, ಡಿ ವೆಂಕಟಪತಿ ರಾಜು, ಶ್ರೀಶೈಲಂ ಹಾಗೂ ಸತ್ಯಂ ಮಾಜಿ ಆಂತರಿಕ ಮುಖ್ಯ ಲೆಕ್ಕಪರಿಶೋಧಕ ವಿ.ಎಸ್. ಪ್ರಭಾಕರ ಗುಪ್ತಾ.

English summary
A special court set 9th March, 2015 as the date for the verdict in the accounting fraud in erstwhile Satyam Computer Services Ltd. Around 3,000 documents were marked and as many as 226 witnesses were examined during the trial that began nearly six years ago.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X