ರಾಹುಲ್ ಭೇಟಿ ಮಾಡಲಿದ್ದಾರೆ ಚಂದ್ರಬಾಬು ನಾಯ್ಡು, ಬಿಜೆಪಿಗೆ ತಲೆನೋವು?
ಹೈದರಾಬಾದ್, ಅಕ್ಟೋಬರ್ 31: ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ನಾಳೆ (ನವೆಂಬರ್ 01) ರಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಲಿದ್ದಾರೆ.
ಚಂದ್ರಬಾಬು ನಾಯ್ಡು ಹಾಗೂ ರಾಹುಲ್ ಭೇಟಿ ರಾಜಕೀಯ ಮಹತ್ವ ಪಡೆದುಕೊಂಡಿದ್ದು, ಲೋಕಸಭೆ ಚುನಾವಣೆಯಲ್ಲಿ ಎರಡೂ ಪಕ್ಷಗಳ ಮೈತ್ರಿ ಮಾತುಕತೆ ನಾಳೆ ನಡೆಯಲಿದೆ ಎಂದೇ ಹೇಳಲಾಗುತ್ತಿದೆ.
ಚಂದ್ರಬಾಬು ನಾಯ್ಡು ಅವರು ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿದ ನಂತರ ನ್ಯಾಷನಲ್ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಶರದ್ ಪವಾರ್, ಸಿಪಿಐ(ಎಂ)ನ ಸೀತಾರಾಮ್ ಯೆಚೂರಿ, ಜೆಕೆಎನ್ಸಿಯ ಫಾರೂಕ್ ಅಬ್ದುಲ್ಲಾ ಅವರನ್ನು ಸಹ ಭೇಟಿ ಮಾಡಲಿದ್ದಾರೆ.

ತೆಲಂಗಾಣ ವಿಧಾನಸಭೆ ಚುನಾವಣೆಯಲ್ಲಿ ಮೈತ್ರಿ?
ಈಗಾಗಲೇ ತೆಲಂಗಾಣ ವಿಧಾನಸಭೆ ಚುನಾವಣೆಯಲ್ಲಿ ಮೈತ್ರಿ ಬಗ್ಗೆ ಚಂದ್ರಬಾಬು ನಾಯ್ಡು ಅವರ ಟಿಡಿಪಿ ಮತ್ತು ಕಾಂಗ್ರೆಸ್ ಬಗ್ಗೆ ಮಾತುಕತೆ ನಡೆದಿದೆ ಎನ್ನಲಾಗಿದ್ದು, ನಾಳೆ ನಡೆಯಲಿರುವ ಭೇಟಿಯಲ್ಲಿ ಲೋಕಸಭೆ ಚುನಾವಣೆಯಲ್ಲಿ ಟಿಡಿಪಿ-ಕಾಂಗ್ರೆಸ್ ಮೈತ್ರಿ ಬಗ್ಗೆ ಮಾತುಕತೆ ನಡೆಯಲಿದೆ ಎನ್ನಲಾಗಿದೆ.

ಬಿಜೆಪಿ ಮೈತ್ರಿಯಿಂದ ಹೊರಬಂದಿರುವ ಟಿಡಿಪಿ
ಈ ಮೊದಲು ಬಿಜೆಪಿ ನೇತೃತ್ವದ ಎನ್ಡಿಎಯಲ್ಲಿದ್ದ ಟಿಡಿಪಿಯು ಇದೇ ವರ್ಷದ ಮಧ್ಯದಲ್ಲಿ ಮೈತ್ರಿಯಿಂದ ಹೊರಬಂದಿತು. ಆ ನಂತರ ಕಾಂಗ್ರೆಸ್ ಬೆಂಬಲದೊಂದಿಗೆ ಕೇಂದ್ರದ ಮೇಲೆ ಅವಿಶ್ವಾಸ ಗೊತ್ತುವಳಿಯನ್ನು ಸಹ ಮಂಡಿಸಿತ್ತು. ಆದರೆ ಈಗ ಬಿಜೆಪಿಯೇತರ ಪಕ್ಷಗಳನ್ನು ಒಟ್ಟುಮಾಡಲು ಚಂದ್ರಬಾಬು ನಾಯ್ಡು ಯತ್ನಿಸುತ್ತಿದ್ದಾರೆ.

ಹಲವು ಮುಖಂಡರ ಭೇಟಿ
ಚಂದ್ರಬಾಬು ನಾಯ್ಡು ಅವರು ಈಗಾಗಲೇ ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ ಅವರನ್ನು ಭೇಟಿ ಮಾಡಿದ್ದಾರೆ. ಜೆಡಿಎಸ್ನ ದೇವೇಗೌಡ ಅವರೊಂದಿಗೆ ಚರ್ಚಿಸಿದ್ದಾರೆ. ಟಿಎಂಸಿಯ ಮಮತಾ ಬ್ಯಾನರ್ಜಿ ಅವರೊಂದಿಗೆ ಮಾತುಕತೆ ಮುಗಿಸಿದ್ದಾರೆ. ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್ ಅವರೊಂದಿಗೆ ಚರ್ಚೆ ಮಾಡಿದ್ದಾರೆ.

ಬಿಜೆಪಿಗೆ ತಲೆನೋವು
ಉತ್ತರ ಭಾರತದಲ್ಲಿ ಕಡಿಮೆ ಆಗುವ ಬಿಜೆಪಿ ಸೀಟುಗಳನ್ನು ದಕ್ಷಿಣದಲ್ಲಿ ಗೆದ್ದು ಸಮತೋಲನ ಮಾಡಿಕೊಳ್ಳುವ ಬಿಜೆಪಿಯ ಯೋಜನೆಗೆ ಚಂದ್ರಬಾಬು ನಾಯ್ಡು ಅವರ ಮೈತ್ರಿ ಮಾತುಕತೆ ಹೊಡೆತ ನೀಡಲಿದೆ. ಬಿಜೆಪಿಯು ಕೆಸಿ ಚಂದ್ರಶೇಖರ ರಾವ್ ಅವರ ಟಿಎಸ್ಆರ್ ಪಕ್ಷದೊಂದಿಗೆ ಮೈತ್ರಿ ಸಾಧಿಸುವ ಯತ್ನ ನಡೆಸಿದೆಯಾದರೂ ಅದು ಪೂರ್ಣ ಫಲ ನೀಡಿದಂತೆ ಇಲ್ಲ.












Click it and Unblock the Notifications