ದಕ್ಷಿಣ ಭಾರತದ ಮತ್ತೊಂದು ರಾಜ್ಯದ ಮೇಲಿ ಕಣ್ಣಿಟ್ಟ ಬಿಜೆಪಿ
ಹೈದರಾಬಾದ್, ಜೂನ್ 8: ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್ ಎಸ್) ಭದ್ರಕೋಟೆಯಾಗಿರುವ ಹೈದರಾಬಾದ್ನಲ್ಲಿ ಜುಲೈ 2 ಮತ್ತು 3ರಂದು ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ಆಯೋಜಿಸಿದೆ.
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಸಭೆ ಕುರಿತು ಪ್ರಕಟಣೆ ಹೊರಡಿಸಿದ್ದಾರೆ. ಜುಲೈ 2 ರಂದು ಸಂಜೆ 4 ಗಂಟೆಗೆ ಸಭೆ ಪ್ರಾರಂಭವಾಗಲಿದೆ, ಜುಲೈ 3 ರಂದು ಸಂಜೆ 5 ಗಂಟೆಗೆ ಮುಕ್ತಾಯವಾಗಲಿದೆ.
ಲೋಕಸಭಾ ಚುನಾವಣೆ ವೇಳೆಗೆ ತೃತೀಯರಂಗ ಸ್ಥಾಪನೆ?
ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ನೇತೃತ್ವದಲ್ಲಿ ಸಭೆ ನಡೆಯಲಿದೆ. ಎರಡು ದಿನಗಳ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಪಕ್ಷದ ಎಲ್ಲಾ ಪ್ರಮುಖ ನಾಯಕರು ಭಾಗವಹಿಸಲಿದ್ದಾರೆ.
2022ರ ಅಂತ್ಯದಲ್ಲಿ ಹಿಮಾಚಲ ಪ್ರದೇಶ ಮತ್ತು ಗುಜರಾತ್ನಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಎರಡೂ ರಾಜ್ಯಗಳ ಚುನಾವಣೆಯ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಲಿದೆ. ಸಂಘಟನೆ, ಪಕ್ಷದ ಗೆಲುವಿಗಾಗಿ ಕಾರ್ಯತಂತ್ರ ರೂಪಿಸುವ ಕುರಿತು ಮಹತ್ವದ ತೀರ್ಮಾನ ತೆಗೆದುಕೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ.
ಟಿಆರ್ಎಸ್ ಸರ್ಕಾರದ ಆಡಳಿತ ಟೀಕಿಸಿದ ರಾಹುಲ್ ಗಾಂಧಿ
2021ರ ನವೆಂಬರ್ನಲ್ಲಿ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಯ ಕೊನೆಯ ಸಭೆ ನವದೆಹಲಿಯಲ್ಲಿ ನಡೆದಿತ್ತು. ಉತ್ತರ ಪ್ರದೇಶ ಸೇರಿದಂತೆ ಐದು ರಾಜ್ಯಗಳಲ್ಲಿ ಚುನಾವಣೆಗೆ ಮೊದಲು ಸಭೆ ನಡಸಲಾಗಿತ್ತು. ನಂತರ ಪಂಚರಾಜ್ಯಗಳ ಚುನಾವಣೆಯಲ್ಲಿ ಪಂಜಾಬ್ ಹೊರತು ಪಡಿಸಿ ಉಳಿದ ರಾಜ್ಯಗಳಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿತ್ತು.
ಮುಂದಿನ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಕೆಸಿಆರ್ ಸರ್ಕಾರವನ್ನು ಸೋಲಿಸುವ ಗುರಿಯನ್ನು ಬಿಜೆಪಿ ಹೊಂದಿದೆ. ಆದ್ದರಿಂದಲೇ ಟಿಆರ್ಎಸ್ ಭದ್ರಕೋಟೆಯಾಗಿರುವ ತೆಲಂಗಾಣವನ್ನು ಸಭೆಗೆ ಬಿಜೆಪಿ ಉದ್ದೇಶಪೂರ್ವಕವಾಗಿ ಆಯ್ಕೆ ಮಾಡಿದೆ.
ತೆಲಂಗಾಣದಲ್ಲಿ ಅಧಿಕಾರಕ್ಕೆ ಬರಲು ಬಿಜೆಪಿ ಕಸರತ್ತು
ದಕ್ಷಿಣ ರಾಜ್ಯಗಳಲ್ಲಿ ಕರ್ನಾಟಕದಲ್ಲಿ ಹೊರತು ಪಡಿಸಿ ಬಿಜೆಪಿ ಅಸ್ತಿತ್ವ ಅಷ್ಟಕಷ್ಟೇ ಅದರಲ್ಲೂ ಕೇರಳ, ತಮಿಳುನಾಡು, ಆಂಧ್ರ ಪ್ರದೇಶ, ತೆಲಂಗಾಣದಲ್ಲಿ ಪ್ರಾದೇಶಿಕ ಪಕ್ಷಗಳದ್ದೇ ಪಾರುಪತ್ಯ, ಇಲ್ಲಿ ರಾಷ್ಟ್ರೀಯ ಪಕ್ಷಗಳು ನೆಲೆ ಕಂಡುಕೊಳ್ಳಲು ಹೆಣಗಾಡುತ್ತಿವೆ.
ದಕ್ಷಿಣ ಭಾರತದಲ್ಲಿ ಕರ್ನಾಟಕದಲ್ಲಿ ಮಾತ್ರ ಬಿಜೆಪಿ ಪ್ರಬಲವಾಗಿದೆ. ಮಾತ್ರವಲ್ಲದೇ ದಕ್ಷಿಣದ ತೆಲಂಗಾಣ ರಾಜ್ಯದ ಮೇಲೆ ಬಿಜೆಪಿ ಕಣ್ಣಿಟ್ಟಿದೆ. ಇತ್ತೀಚೆಗೆ ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್, ಪ್ರಧಾನಿ ಮೋದಿ ಭೇಟಿಯನ್ನು ಉದ್ದೇಶಪೂರ್ವಕವಾಗಿಯೇ ತಪ್ಪಿಸಿ ಬೆಂಗಳೂರಿಗೆ ಬಂದು ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡರನ್ನು ಭೇಟಿ ಮಾಡಿದ್ದರು.
ರಾಷ್ಟ್ರದಲ್ಲಿ ತೃತೀಯ ರಂಗ ರಚನೆಯ ಮುನ್ಸೂಚನೆಯನ್ನು ನೀಡಿದ್ದ ಕೆಸಿಆರ್, ಬಿಜೆಪಿ ಸರ್ಕಾರವನ್ನು ಟೀಕಿಸಿದ್ದರು. ತೆಲಂಗಾಣದ ಮೇಲೆ ಕಣ್ಣಿಟ್ಟಿರುವ ಬಿಜೆಪಿ ರಾಷ್ಟ್ರೀಯ ನಾಯಕರು ಪದೇ ಪದೇ ಅಲ್ಲಿಗೆ ಭೇಟಿ ನೀಡುತ್ತಿರುವುದು ಕೆಸಿಆರ್ ನಿದ್ದೆಗೆಡಿಸಿದೆ.
ಮುಂದಿನ ವರ್ಷ ಚುನಾವಣೆ
2023ರಲ್ಲಿ ತೆಲಂಗಾಣದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಆಡಳಿತಾರೂಢ ಕೆಸಿಆರ್ ಪಕ್ಷಕ್ಕೆ ಪೈಪೋಟಿ ಕೊಡಲು ಕಾಂಗ್ರೆಸ್, ಬಿಜೆಪಿ ಕೆಲಸ ಆರಂಭಿಸಿದೆ. ಅದರಲ್ಲೂ ತೆಲಂಗಾಣದಲ್ಲಿ ಮೇಲ್ನೋಟಕ್ಕೆ ಬಿಜೆಪಿ ಪರ ಅಲೆ ಇರುವಂತೆ ಕಾಣಿಸುತ್ತಿರುವುದು ಬಿಜೆಪಿಗೆ ಉತ್ಸಾಹ ತರಿಸಿದೆ.
ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ 155 ವಾರ್ಡ್ಗಳ ಪೈಕಿ 48 ವಾರ್ಡ್ಗಳಲ್ಲಿ ಬಿಜೆಪಿ ಜಯಗಳಿಸಿತ್ತು. ಇದು ಆಡಳಿತಾರೂಢ ಟಿಎಸ್ಆರ್ ಪಕ್ಷಕ್ಕೆ ಶಾಕ್ ನೀಡಿತ್ತು.
ಉಪಚುನಾವಣೆಯಲ್ಲೂ ಗೆದ್ದಿದ್ದ ಬಿಜೆಪಿ
ಕರೀಂನಗರ ಲೋಕಸಭಾ ವ್ಯಾಪ್ತಿಗೆ ಬರುವ ಹುಜುರಾಬಾದ್ ಅಸೆಂಬ್ಲಿ ಕ್ಷೇತ್ರದ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಈಟಲ ರಾಜೇಂದರ್ ಗೆಲುವು ಸಾಧಿಸಿದ್ದರು. ಬಿಜೆಪಿ ಮತ್ತು ಟಿಆರ್ಎಸ್ ನಡುವಿನ ಜಿದ್ದಾಜಿದ್ದಿನ ಕಣವಾಗಿ ಮಾರ್ಪಟ್ಟಿದ್ದ ಈ ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಸಾಧಿಸಿತ್ತು.
2018ರ ಚುನಾವಣೆಯಲ್ಲಿ ನೋಟಾಗಿಂತಲೂ ಕಮ್ಮಿ ಮತ ಪಡೆದಿದ್ದ ಬಿಜಿಪಿ, ಕೇವಲ ಮೂರು ವರ್ಷಗಳಲ್ಲೇ ಭರ್ಜರಿ ಗೆಲುವು ಸಾಧಿಸುವ ಮೂಲಕ, 2023ರ ತೆಲಂಗಾಣ ಚುನಾವಣೆಯಲ್ಲಿ ತೀವ್ರ ಪೈಪೋಟಿ ನೀಡುವ ಸಂದೇಶ ರವಾನಿಸಿತ್ತು.
ಲೋಕಸಭೆ ಚುನಾವಣೆಗೂ ಈಗಿನಿಂದಲೇ ತಯಾರಿ
ಹೈದರಾಬಾದ್ನಲ್ಲಿ ನಡೆಯಲಿರುವ ಕಾರ್ಯಕಾರಿಣಿ ಸಭೆಯಲ್ಲಿ, ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಕೇಂದ್ರದಲ್ಲಿ ಮಾಡಿದ ಕೆಲಸವನ್ನು ಶ್ಲಾಘಿಸುವ ರಾಜಕೀಯ ಮತ್ತು ಆರ್ಥಿಕ ನಿರ್ಣಯಗಳನ್ನು ಪಕ್ಷವು ಅಂಗೀಕರಿಸಲಿದೆ.
ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು 2014 ಮತ್ತು 201ರ ಲೋಕಸಭಾ ಚುನಾವಣೆಯಲ್ಲಿ ದೊಡ್ಡ ಗೆಲುವು ಸಾಧಿಸುವ ಮೂಲಕ ಎಂಟು ವರ್ಷಗಳ ಅಧಿಕಾರದ ಅವಧಿ ಪೂರ್ಣಗೊಳಿಸಿದೆ.
2024ರ ಲೋಕಸಭಾ ಚುನಾವಣೆಯಲ್ಲಿ ಮತ್ತೆ ಪಕ್ಷವನ್ನು ಅಧಿಕಾರಕ್ಕೆ ತರಲು ಬಿಜೆಪಿ ಈಗಿನಿಂದಲೇ ತಯಾರಿ ಆರಂಭಿಸಿದೆ. ಬೂತ್ ಮಟ್ಟದಿಂದ ಪಕ್ಷ ಸಂಘಟನೆ ಮಾಡಲು ನಾಯಕರು ಕಸರತ್ತು ಆರಂಭಿಸಿದ್ದಾರೆ. ಅಭಿವೃದ್ಧಿ ಕಾರ್ಯಕ್ರಮದ ನೆಪದಲ್ಲಿ ಎಲ್ಲಾ ರಾಜ್ಯಗಳಿಗೆ ರಾಷ್ಟ್ರ ನಾಯಕರು ಭೇಟಿ ನೀಡುತ್ತಿದ್ದಾರೆ.
Recommended Video