ತಿರುಮಲ: ಭಕ್ತರನ್ನು ಹೆಗಲ ಮೇಲೆ ಹೊತ್ತು ಸಾಗಿದ ಕಾನ್ಸ್ಟೆಬಲ್ ಶೇಖ್ ಅರ್ಷದ್
ಹೈದರಾಬಾದ್, ಡಿಸೆಂಬರ್ 24: ತಿರುಪತಿ ಬೆಟ್ಟದಲ್ಲಿರುವ ವೆಂಕಟೇಶ್ವರ ದೇವಸ್ಥಾನಕ್ಕೆ ಕಾಲ್ನಡಿಗೆಯಲ್ಲಿ ಸಾಗಿದ್ದ ಭಕ್ತರನ್ನು ಕಾನ್ಸ್ಟೆಬಲ್ ಒಬ್ಬರು ತಮ್ಮ ಹೆಗಲ ಮೇಲೆ ಕೂರಿಸಿಕೊಂಡು ಸಾಗಿಸಿದ್ದಾರೆ. ಈ ಫೋಟೊಗಳು ವೈರಲ್ ಆಗಿದ್ದು, ವ್ಯಾಪಕ ಪ್ರಶಂಸೆಗೆ ಪಾತ್ರವಾಗಿದೆ.
ತಿರುಮಲದಲ್ಲಿ ಬೆಟ್ಟದಲ್ಲಿರುವ ದೇವಾಲಯಕ್ಕೆ ಕಾಲ್ನಡಿಗೆಯಲ್ಲಿ ಆರು ಕಿ.ಮೀ ನಡೆದ ಬಳಿಕ ಅಸ್ವಸ್ಥರಾದ ನಾಗೇಶ್ವರಮ್ಮ ಎಂಬ ವೃದ್ಧೆಯನ್ನು ಪೊಲೀಸ್ ಸ್ಪೆಷಲ್ ಪಾರ್ಟಿ ಕಾನ್ಸ್ಟೆಬಲ್ ಶೇಖ್ ಅರ್ಷದ್ ಅವರು ಹೆಗಲ ಮೇಲೆ ಕೂರಿಸಿಕೊಂಡು ದೇವಸ್ಥಾನ ತಲುಪಿಸಿದ್ದಾರೆ.
ನಂದಲೂರು ಮಂಡಳದ ಮಂಗಿ ನಾಗೇಶ್ವರಮ್ಮ (58) ಅವರು ತಿರುಮಲದ ಬೆಟ್ಟವನ್ನು ಕಾಲ್ನಡಿಗೆಯಲ್ಲಿ ಏರುತ್ತಿದ್ದರು. ಡಿಸೆಂಬರ್ 22ರಂದು ನಡಿಗೆ ಆರಂಭಿಸಿದ್ದರು. ಆದರೆ ಮಾರ್ಗಮಧ್ಯೆ ರಕ್ತದೊತ್ತಡ ಹೆಚ್ಚಾಗಿ ಅವರಿಗೆ ಮುಂದೆ ನಡೆಯಲು ಸಾಧ್ಯವಾಗಲಿಲ್ಲ. ಭಕ್ತರ ರಕ್ಷಣೆಗಾಗಿ ಅವರೊಂದಿಗೆ ಸಾಗುತ್ತಿದ್ದ ಕಡಪ ಜಿಲ್ಲಾ ವಿಶೇಷ ಪೊಲೀಸ್ ತಂಡವು ಮಹಿಳೆ ಅಸ್ವಸ್ಥರಾಗಿದ್ದನ್ನು ಗಮನಿಸಿತು.

ಭದ್ರತಾ ಕರ್ತವ್ಯದಲ್ಲಿದ್ದ ಕಾನ್ಸ್ಟೆಬಲ್ ಶೇಖ್ ಅರ್ಷದ್ ಕೂಡಲೇ ಆಕೆಯನ್ನು ಹೆಗಲ ಮೇಲೆ ಹೊತ್ತುಕೊಂಡು ಸುಮಾರು ಆರು ಕಿಮೀ ದಟ್ಟಾರಣ್ಯದ ಕಡಿದಾದ ರಸ್ತೆಗಳಲ್ಲಿ ಬೆಟ್ಟವನ್ನು ಹತ್ತಿ ಅಲ್ಲಿನ ಆಸ್ಪತ್ರೆಯಲ್ಲಿ ವೈದ್ಯಕೀಯ ಆರೈಕೆ ಕೊಡಿಸಿದರು. ಬಳಿಕ ಇದೇ ಅರ್ಷದ್ ಅವರು ನಾಗೇಶ್ವರ ರಾವ್ ಎಂಬುವವರನ್ನು ಕೂಡ ಹೆಗಲ ಮೇಲೆ ಹೊತ್ತುಕೊಂಡು ಮುಖ್ಯ ರಸ್ತೆಯವರೆಗೂ ಕರೆದುಕೊಂಡು ಬಂದು ವಾಹನ ಹತ್ತಿ ಆಸ್ಪತ್ರೆಗೆ ತೆರಳಲು ಅನುಕೂಲ ಮಾಡಿಕೊಟ್ಟರು.
ಶೇಖ್ ಅರ್ಷದ್ ಅವರ ಕಾರ್ಯ ಅಪಾರ ಮೆಚ್ಚುಗೆಗೆ ಪಾತ್ರವಾಗಿದೆ. ಹಿರಿಯ ಅಧಿಕಾರಿಗಳು ಮತ್ತು ಭಕ್ತರು ಅರ್ಷದ್ ಅವರ ಮಾನವೀಯತೆಯನ್ನು ಅಭಿನಂದಿಸಿದ್ದಾರೆ.
ಶುಕ್ರವಾರ ವೈಕುಂಠ ಏಕಾದಶಿ ಇರುವುದರಿಂದ ತಿರುಮಲದಲ್ಲಿರುವ ದೇವಸ್ಥಾನಕ್ಕೆ ಅಪಾರ ಸಂಖ್ಯೆಯಲ್ಲಿ ಭಕ್ತರು ತೆರಳುತ್ತಿದ್ದಾರೆ. ಆರು ಗಂಟೆ ಕಾಲ ಕಾಡಿನ ನಡುವೆ ಕಡಿದಾದ ಅರಣ್ಯ ಹಾದಿಯಲ್ಲಿ ಎರಡು ದಿನ ನಡೆಯಬೇಕಾಗುತ್ತದೆ.












Click it and Unblock the Notifications