ಒಡಿಶಾ ಗಡಿಯಲ್ಲಿ 18 ನಕ್ಸಲರ ಹತ್ಯೆ, ಹಲವರಿಗೆ ಗಾಯ
ಹೈದರಾಬಾದ್, ಅಕ್ಟೋಬರ್ 24: ಆಂಧ್ರ ಪ್ರದೇಶ ಪೊಲೀಸರ ಪ್ರಮುಖ ಕಾರ್ಯಾಚರಣೆಯೊಂದರಲ್ಲಿ ನಕ್ಸಲರು ಮೃತಪಟ್ಟಿದ್ದಾರೆ. ಆಂಧ್ರ ಹಾಗೂ ಒಡಿಶಾ ಗಡಿಯಲ್ಲಿ ನಡೆದ ಎನ್ ಕೌಂಟರ್ ನಲ್ಲಿ 18 ನಕ್ಸಲರು ಸಾವನ್ನಪ್ಪಿದ್ದಾರೆ. 4 ಎಕೆ 47, ಎರಡು ಸೆಲ್ಫ್ ಲೋಡಿಂಗ್ ರೈಫಲ್ಸ್ ಮತ್ತಿತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಒಡಿಶಾದ ಮಲ್ಕನ್ ಗಿರಿ ಜಿಲ್ಲೆಯ ಬೆಜ್ಜಂಗಿ ಪ್ರದೇಶದಲ್ಲಿ ಎನ್ ಕೌಂಟರ್ ನಡೆದಿದೆ,
ಈ ಪ್ರದೇಶದಲ್ಲಿ ನಕ್ಸಲರ ಚಟುವಟಿಕೆ ಹೆಚ್ಚಾಗಿತ್ತು. ಸೂಪರಿಂಟೆಂಡೆಂಟ್ ಅಫ್ ಪೊಲೀಸ್ ರಾಹುಲ್ ದೇವ್ ಶರ್ಮಾ ಅವರ ಪ್ರಕಾರ, ಎನ್ ಕೌಂಟರ್ ನಲ್ಲಿ ಕೆಲವು ಮುಖ್ಯ ನಕ್ಸಲ್ ನಾಯಕರನ್ನು ಕೊಲ್ಲಲಾಗಿದೆ. ಸಾವಿನ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ಕಲೆ ಹಾಕುತ್ತಿದ್ದೇವೆ ಎಂದು ಅವರು ತಿಳಿಸಿದ್ದಾರೆ.[ಎನ್ ಕೌಂಟರ್ ನಲ್ಲಿ ನಕ್ಸಲ್ ನಾಯಕ ನಯೀಮುದ್ದೀನ್ ಸಾವು]
ಈ ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯ ನಕ್ಸಲರ ಓಡಾಟವಿದೆ ಎಂಬ್ ಮಾಹಿತಿ ಸಿಕ್ಕಿದ್ದರಿಂದ ಕಾರ್ಯಾಚರಣೆ ಕೈಗೊಳ್ಳಲಾಗಿದೆ. ಪೊಲೀಸರ ತಂಡವು ಕಾರ್ಯಾಚರಣೆಗಾಗಿ ಸಿದ್ಧತೆ ನಡೆಸಿತ್ತು. ಹಲವು ನಕ್ಸಲೀಯರು ಗಾಯಗೊಂಡಿರುವ ವರದಿಯಾಗಿದೆ. ಈ ವೇಳೆ ಇಬ್ಬರು ಭದ್ರತಾ ಸಿಬ್ಬಂದಿಗೂ ಗಾಯಗಳಾಗಿವೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.[ಮಡಿಕೇರಿಯಲ್ಲಿ ನಕ್ಸಲ್ ಜಿಂದಾಬಾದ್ ಎಂದ ರೂಪೇಶ್]
ಇದೇ ರೀತಿಯ ಪೊಲೀಸ್ ಕಾರ್ಯಾಚರಣೆ ಸೆಪ್ಟೆಂಬರ್ 2013ರಲ್ಲಿ ನಡೆದಿತ್ತು. ನಿಷೇಧಿತ ಸಿಪಿಐನ (ಮಾವೋಯಿಸ್ಟ್) 13 ಪ್ರಮುಖ ನಾಯಕರನ್ನು ಎನ್ ಕೌಂಟರ್ ನಲ್ಲಿ ಕೊಲ್ಲಲಾಗಿತ್ತು.