ಮಳೆ ಬಂದರೆ ಶವರ್ ಆಗುತ್ತದೆ ಗುಡೇನಕಟ್ಟಿ ಮಾರ್ಗದ ಈ ಏಕೈಕ ಬಸ್!
ಹುಬ್ಬಳ್ಳಿ, ಅಕ್ಟೋಬರ್ 10: ಉತ್ತರ ಕರ್ನಾಟಕದಲ್ಲಿ ಮಳೆ ಬಂತೆಂದರೆ ಸಾಕು ಈ ಬಸ್ ನಲ್ಲಿ ಪ್ರಯಾಣಿಸುವವರು ಮೈ ನೆನೆಸಿಕೊಳ್ಳಲು ರೆಡಿಯಾಗಲೇಬೇಕು. ಅರೆ, ಮಳೆಗೂ, ಬಸ್ಸಿಗೂ ಎಲ್ಲಿಂದೆಲ್ಲಿಯ ಸಂಬಂಧ ಎಂದು ಯೋಚಿಸುತ್ತಿದ್ದೀರಾ?
ಹೌದು, ವಾಣಿಜ್ಯ ನಗರಿ ಹುಬ್ಬಳ್ಳಿ ಗುಡೇನಕಟ್ಟಿ ಮಾರ್ಗದ ಈ ಸಾರಿಗೆ ಸಂಸ್ಥೆಯ ಬಸ್ ನ ಮಾಳಿಗೆ ಮಳೆ ಬಂತೆಂದರೆ ಸಾಕು, ಶವರ್ ನಂತೆ ಆಗುತ್ತದೆ. ಸೋರಲು ಆರಂಭಿಸುತ್ತದೆ. ಮಳೆ ಬರುತ್ತಿದ್ದಂತೆ ಬಸ್ ನಲ್ಲಿನ ಪ್ರಯಾಣಿಕರಿಗೆ ನೀರಿನ ಸಿಂಚನವಾಗುತ್ತದೆ. ಮಳೆ ಸ್ವಲ್ಪ ಹೆಚ್ಚಾದರೆ ಹಿಂಬದಿ ಕೂತವರಿಗೆ ಸಂಪೂರ್ಣ ಸ್ನಾನವೂ ಆಗುತ್ತದೆ.
ಅಷ್ಟೇ ಅಲ್ಲ, ಹುಬ್ಬಳ್ಳಿ ಗುಡೇನಕಟ್ಟಿ ಮಾರ್ಗದ ಏಕೈಕ ಬಸ್ ಇದು. ಕಳೆದ ವರ್ಷವೂ ಮಳೆ ಬಂದಾಗ ಇದೇ ರೀತಿ ಸೋರುತ್ತಿತ್ತು. ಅದರ ಹಿಂದಿನ ವರ್ಷವೂ ಈ ಬಸ್ ಕಥೆ ಹೀಗೇ ಇತ್ತು. ಎರಡು ವರ್ಷಗಳಿಂದ ಇಲ್ಲಿನ ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳು ಈ ಸೋರುತ್ತಿರುವ ಬಸ್ ನಲ್ಲೇ ಮೈ ನೆನೆಸಿಕೊಂಡು ಪ್ರಯಾಣ ಮಾಡುತ್ತಿದ್ದಾರೆ. ಆದರೆ ಇಷ್ಟೆಲ್ಲಾ ಆದರೂ ಬಸ್ ರಿಪೇರಿ ಮಾಡುವ ಅಥವಾ ಹೊಸ ಬಸ್ ನೀಡುವ ಯಾವ ಕ್ರಮವನ್ನೂ ಇದುವರೆಗು ಯಾರೂ ಕೈಗೊಂಡಿಲ್ಲ ಎನ್ನುವುದೇ ಅಚ್ಚರಿ.

ಸರ್ಕಾರ ಕೋಟ್ಯಾಂತರ ರೂಪಾಯಿಯನ್ನು ವಾಯವ್ಯ ರಸ್ತೆ ಸಾರಿಗೆ ಸಂಸ್ಥೆಗೆ ಬಿಡುಗಡೆ ಮಾಡುತ್ತದೆ. ಆದರೆ ಉತ್ತರ ಕರ್ಣಾಟಕದ ಗ್ರಾಮೀಣ ಭಾಗದ ಈ ಬಸ್ ಗಳ ಸ್ಥಿತಿ ನೋಡಿದರೆ, ಬಿಡುಗಡೆಯಾದ ಹಣ ಎಲ್ಲಿಗೆ ಹೋಗುತ್ತಿದೆ ಎಂಬ ಪ್ರಶ್ನೆಯೂ ಮೂಡುತ್ತದೆ. ಸಾರಿಗೆ ಸಂಸ್ಥೆ ವಿರುದ್ಧ ಜನ ಎಷ್ಟೇ ಆಕ್ರೋಶ ವ್ಯಕ್ತಪಡಿಸಿದರೂ ಅದನ್ನು ಕೇಳುವವರೂ ಇಲ್ಲದಂತಾಗಿದೆ. ಸಾರಿಗೆ ಸಂಸ್ಥೆಯನ್ನು ಶಪಿಸಿಕೊಂಡೇ ಬಸ್ ಏರಬೇಕಾದ ಜನಗಳ ಪರಿಸ್ಥಿತಿಯೂ ಬದಲಾಗಿಲ್ಲ.












Click it and Unblock the Notifications