ಯೋಗಿ ಮೂರುಸಾವಿರ ಮಠಕ್ಕೆ ಭೇಟಿ ನೀಡಿದ್ದು ಏಕೆ?
ಉತ್ತರ ಪ್ರದೇಶದ ಮುಖ್ಯಮಂತ್ರಿ, ಫೈರ್ ಬ್ರಾಂಡ್ ಪಾಲಿಟೀಷಿಯನ್ ಯೋಗಿ ಆದಿತ್ಯನಾಥ್ ಅವರು, ಕಾಂಗ್ರೆಸ್ ಕಣ್ಣು ಕೆಂಪಾಗುವಂತೆ ಭಾಷಣ ಮಾಡಿ ಹೋಗಿರುವುದು ಒಂದೆಡೆಯಾದರೆ, ಅವರು ಹುಬ್ಬಳ್ಳಿಯ ಮೂರುಸಾವಿರ ಮಠಕ್ಕೆ ಭೇಟಿ ನೀಡಿರುವುದು ಮತ್ತಷ್ಟು ಗುಸುಗುಸು ಚರ್ಚೆಗೆ ಗ್ರಾಸವಾಗಿದೆ.
ನಿಮಗೆ ಟಿಪ್ಪು ಸುಲ್ತಾನ್ ಆರಾಧಕರು ಬೇಕೋ, ಹನುಮಾನ್ ಆರಾಧಕರು ಬೇಕೋ? ಕರ್ನಾಟಕದ ವಿಜಯನಗರ ಹನುಮಾನ್ ದೇವರು ಜನಿಸಿದ ಸ್ಥಳ. ಕರ್ನಾಟಕ ಸರಕಾರ ಹನುಮನನ್ನು ಆರಾಧಿಸುವ ಬದಲು, ಟಿಪ್ಪು ಸುಲ್ತಾನ್ ಆರಾಧಿಸಲು ಹೊರಟಿದೆ. ಕರ್ನಾಟಕದ ಜನತೆ ಕಾಂಗ್ರೆಸ್ ಸರಕಾರವನ್ನು ಕಿತ್ತೊಗೆದರೆ, ಯಾರೂ ಟಿಪ್ಪುವಿನ ಆರಾಧನೆಗೆ ಮುಂದೆ ಬರುವುದಿಲ್ಲ ಎಂದು ಯೋಗಿ ಆದಿತ್ಯನಾಥ್ ಪ್ರಬಲವಾದಿ ಪ್ರತಿಪಾದಿಸಿದ್ದರು.
ಕಾಂಗ್ರೆಸ್ಸಿಗರು ಕೆರಳುವಂತೆ ಮಾಡಿದ್ದಲ್ಲದೆ, ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಕೆಟ್ಟುಹೋಗಿದೆ, ಅಭಿವೃದ್ಧಿಯಲ್ಲಿ ಹಿಂದೆ ಬಿದ್ದಿದೆ ಎಂದು ಹೇಳಿದ್ದಕ್ಕೆ, ಯೋಗಿ ಆದಿತ್ಯನಾಥ್ ಕರ್ನಾಟಕವನ್ನು ಅವಮಾನ ಮಾಡಿದ್ದಾರೆ ಅಂತ ಹುಯಿಲೆಬ್ಬಿಸಿದ್ದಾರೆ ಕಾಂಗ್ರೆಸ್ ನಾಯಕರು. ಆದರೆ, ಅದಕ್ಕೂ ಮೊದಲು ಯೋಗಿ ಅವರು ಮೂರುಸಾವಿರ ಮಠಕ್ಕೆ ಭೇಟಿ ನೀಡಿದ್ದರ ಹಿಂದೆ ಕೂಡ ರಾಜಕೀಯ ವಾಸನೆ ಬಡಿಯುತ್ತಿದೆ.
ಕರ್ನಾಟಕ ವಿಧಾನಸಭೆ ಚುನಾವಣೆಗೆ ಇನ್ನು ಕೇವಲ ನಾಲ್ಕು ತಿಂಗಳು ಬಾಕಿಯಿದೆ. ಮೂರು ಪಕ್ಷಗಳಿಂದ ಉತ್ತರ ಕರ್ನಾಟಕದಲ್ಲಿ ಭಾರೀ ಯಾತ್ರೆಗಳು ನಡೆಯುತ್ತಿವೆ. ಮತಗಳನ್ನು ಕಬಳಿಸಲು ಎಲ್ಲ ಪಕ್ಷಗಳೂ ನಾನಾ ವಿಧಾನಗಳನ್ನು ಅನುಸರಿಸುತ್ತಿವೆ. ಉತ್ತರ ಕರ್ನಾಟಕದಲ್ಲಿ ಲಿಂಗಾಯಿತ ಮತಗಳೇ ನಿರ್ಣಾಯಕ ಪಾತ್ರ ವಹಿಸಲಿವೆ. ಇನ್ನು ಯೋಗಿ ಭೇಟಿ ಮಹತ್ವ ಪಡೆಯದೆ ಇರುತ್ತದೆಯೆ?

ಮೂರುಸಾವಿರ ಮಠದಲ್ಲಿ ಯೋಗಿಗೆ ಭರ್ಜರಿ ಸ್ವಾಗತ
ಯೋಗಿಯವರು ಹುಬ್ಬಳ್ಳಿಯ ಮೂರುಸಾವಿರ ಮಠಕ್ಕೆ ಭೇಟಿ ನೀಡಿದಾಗ ಭರ್ಜರಿ ಸ್ವಾಗತ ದೊರೆತಿತ್ತು. ಪೂರ್ಣಕುಂಭ ಹೊತ್ತ ಮುತ್ತೈದೆಯರು ಯೋಗಿ ಆದಿತ್ಯನಾಥ್ (ಮೂಲ ಹೆಸರು ಅಜಯ್ ಮೋಹನ್ ಬಿಷ್ಟ್) ಅವರನ್ನು ಸಾಂಪ್ರದಾಯಿಕವಾಗಿ ಸ್ವಾಗತಿಸಿದ್ದರು. ಅಲ್ಲಿ ಅವರು ಜಗದ್ಗುರು ಶ್ರೀ ಗುರುಸಿದ್ದೇಶ್ವರ ಮಹಾಶಿವಯೋಗಿಗಳ ಗದ್ದುಗೆ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.

ಭೇಟಿಯ ಉದ್ದೇಶ ಬೇರೆಯೇ ಇದೆ
ಮೂರುಸಾವಿರ ಮಠದ ಶ್ರೀಗಳಾದ ಗುರುಸಿದ್ದರಾಜ ಯೋಗೀಂದ್ರ ಮಹಾಸ್ವಾಮಿಗಳು ಯೋಗಿಯವರನ್ನು ಆತ್ಮೀಯವಾಗಿ ಬರಮಾಡಿಕೊಂಡರು. ಬಳಿಕ ಮೂರುಸಾವಿರ ಮಠದ ಮಹಾಸ್ವಾಮಿಗಳ ಜೊತೆಯಲ್ಲಿ ಸುಮಾರು 20 ನಿಮಿಷಗಳ ಕಾಲ ಯೋಗಿ ಆದಿತ್ಯನಾಥ ಮಾತುಕತೆ ನಡೆಸಿದರು. ಯೋಗಿಯವರು ಮೂರು ಸಾವಿರ ಮಠಕ್ಕೆ ಔಪಚಾರಿಕವಾಗಿ ಭೇಟಿ ನೀಡಿದ್ದರೂ, ಭೇಟಿಯ ಉದ್ದೇಶ ಬೇರೆಯೇ ಇದೆ ಎಂದು ಹೇಳಲಾಗುತ್ತಿದೆ.

ಮುಖ್ಯಮಂತ್ರಿಯಾದರೂ ಕಾವಿ ತ್ಯಜಿಸಿಲ್ಲ ಯೋಗಿ
ಭಾರತೀಯ ಜನತಾ ಪಕ್ಷದ ಹಿಂದೂತ್ವದ ಮುಖವಾಣಿಯಂತಿರುವ ಯೋಗಿ ಆದಿತ್ಯನಾಥ ಗೋರಖಪುರದ ಗೋರಖನಾಥ ದೇಗುಲದ ಮಹಾಂತ್ ಆಗಿದ್ದಾರೆ. ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ ಅವರು 2017ರ ಮಾರ್ಚ್ ನಲ್ಲಿ ಅಧಿಕಾರ ಸ್ವೀಕರಿಸಿದರೂ ಕಾವಿಯನ್ನು ತ್ಯಜಿಸಿಲ್ಲ. ಅವರು ಮುಖ್ಯಮಂತ್ರಿಯಾದ ನಂತರ ಕರ್ನಾಟಕದಲ್ಲಿ ಕೂಡ ಕೆಲ ಕಾವಿಧಾರಿ ಸ್ವಾಮೀಜಿಗಳು ರಾಜಕೀಯದ ಅಂಗಳದಲ್ಲಿ ಕಾಣಿಸಿಕೊಂಡಿದ್ದು ಸುಳ್ಳಲ್ಲ.

ಲಿಂಗಾಯಿತ ಹೋರಾಟದಲ್ಲಿ ಯೋಗೀಂದ್ರ ಶ್ರೀಗಳು
ವಿಷಯ ಏನೆಂದರೆ, ಮೂರುಸಾವಿರ ಮಠದ ಶ್ರೀಗಳಾದ ಗುರುಸಿದ್ದರಾಜಯೋಗೀಂದ್ರ ಮಹಾಸ್ವಾಮಿಗಳು ವೀರಶೈವ ಪರಂಪರೆಯನ್ನು ಅನುಸರಿಸುವ ಮಠಾಧಿಪತಿಗಳು. ಹೀಗಿದ್ದರೂ ಶ್ರೀಗಳು ಆಗಾಗ ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟದಲ್ಲಿ ಭಾಗವಹಿಸಿದ್ದಾರೆ. ಈಗ ಲಿಂಗಾಯತ ಪ್ರತ್ಯೇಕ ಧರ್ಮವಾಗಬೇಕೆಂದು ಹೋರಾಟ ಮಾಡುತ್ತಿರುವವರು ಕಾಂಗ್ರೆಸ್ ಧುರೀಣ ಎಂಬಿ ಪಾಟೀಲ ಅವರು.

ಭಾರೀ ಮಹತ್ವ ಪಡೆದುಕೊಂಡ ಯೋಗಿ ಭೇಟಿ
ಮೂರುಸಾವಿರ ಮಠದ ಶ್ರೀಗಳು ವೀರಶೈವ ಪರಂಪರೆಯವರಾಗಿದ್ದರೂ ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟದಲ್ಲಿ ಧುಮುಕಿರುವುದು ಸ್ಥಳೀಯ ಬಿಜೆಪಿ ನಾಯಕರ ಕಣ್ಣು ಕೆಂಪಾಗುವಂತೆಯೂ ಮಾಡಿತ್ತು. ಅಲ್ಲದೆ, ಉತ್ತರ ಕರ್ನಾಟಕದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಇರುವ ಲಿಂಗಾಯತ ಮತಗಳನ್ನು ಬಿಜೆಪಿ ಉಳಿಸಿಕೊಳ್ಳುವ ಅಗತ್ಯವೂ ಇದೆ. ಈ ಹಿನ್ನೆಲೆಯಲ್ಲಿ ಯೋಗಿ ಆದಿತ್ಯನಾಥ್ ಅವರು ಮೂರುಸಾವಿರ ಮಠಕ್ಕೆ ಭೇಟಿ ನೀಡಿದ್ದು ಭಾರೀ ಮಹತ್ವ ಪಡೆದುಕೊಂಡಿದೆ.












Click it and Unblock the Notifications