ಬಾಬ್ರಿ ಮಸೀದಿಯಂತೆಯೇ ಟಿಪ್ಪು ಪ್ರತಿಮೆ ಧ್ವಂಸ ಮಾಡ್ತೇವೆ: ಹುಬ್ಬಳ್ಳಿಯಲ್ಲಿ ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ, ನವೆಂಬರ್, 11: ಮೈಸೂರಿನಲ್ಲಿ 100 ಅಡಿ ಎತ್ತರದ ಟಿಪ್ಪು ಪ್ರತಿಮೆ ಸ್ಥಾಪಿಸುತ್ತೇವೆ ಎಂದು ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ಹೇಳಿದ್ದರು. ಇದಕ್ಕೆ ಶ್ರೀರಾಮ ಸೇನಾ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹುಬ್ಬಳ್ಳಿಯಲ್ಲಿ ಪ್ರತಿಕ್ರಿಯಿಸಿದ್ದು, ಅದನ್ನು ಬಾಬ್ರಿ ಮಸೀದಿಯಂತೆ ಧ್ವಂಸ ಮಾಡಲಾಗುವುದು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈದ್ಗಾ ಮೈದಾನದಲ್ಲಿ ಹಮ್ಮಿಕೊಂಡಿದ್ದ ಕನಕದಾಸ ಜಯಂತಿಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, "ಟಿಪ್ಪು ಕರ್ನಾಟಕಕ್ಕೇ ಕಳಂಕ. ಮೈಸೂರು ಮಹಾರಾಜರಿಗೆ ಅವಮಾನ ಆಗುವಂತೆ ಅಲ್ಲಿಯೇ ಆಡಳಿತ ನಡೆಸಿದ್ದ. ಒಂದು ವೇಳೆ ಅವನ ಮೂರ್ತಿ ಪ್ರತಿಷ್ಠಾಪಿಸಿದ್ದೇ ಆದರೆ, ಅದನ್ನು ಒಡೆದು ಹಾಕುತ್ತೇ ವೆ. ಅವನ ಮೂರ್ತಿ ಪ್ರತಿಷ್ಠಾಪಿಸುವಂತಹ ಕೆಟ್ಟ ಕೆಲಸಕ್ಕೆ ಯಾರೂ ಕೈ ಹಾಕಬಾರದು. ಬದಲಾಗಿ ಸಂತ ಶಿಶುನಾಳ ಷರೀಫ್, ಅಬ್ದುಲ್ ಕಲಾಂ ಅಂತಹವರ ಮೂರ್ತಿ ಪ್ರತಿಷ್ಠಾಪಿಸಿ" ಎಂದು ಸಲಹೆ ನೀಡಿದರು.
ಟಿಪ್ಪು ಜಯಂತಿ ಆಚರಣೆ ಅಕ್ಷಮ್ಯ ಅಪರಾಧ
"ಸಾವಿರಾರು ಹಿಂದೂ ದೇವಾಲಯಗಳನ್ನು ಧ್ವಂಸ ಮಾಡಿದ ಹಾಗೂ ಹಿಂದೂಗಳನ್ನು ಇಸ್ಲಾಂಗೆ ಮತಾಂತರ ಮಾಡಿದ ಟಿಪ್ಪುವಿನ ಜಯಂತಿಯನ್ನು ಇಲ್ಲಿನ ಈದ್ಗಾ ಮೈದಾನದಲ್ಲಿ ಆಚರಿಸಿದ್ದು ಅಕ್ಷಮ್ಯ ಅಪರಾಧವಾಗಿದೆ. ಟಿಪ್ಪು ಜಯಂತಿ ಆಚರಿಸಿ ಮೈದಾನವನ್ನು ಅಪವಿತ್ರಗೊಳಿಸಲಾಗಿತ್ತು. ಇದೀಗ ನಾವು ಗೋಮೂತ್ರದಿಂದ ಶುದ್ಧ ಮಾಡಿ, ವಿಜೃಂಭಣೆಯಿಂದ ಕನಕ ಜಯಂತಿಯನ್ನು ಆಚರಿಸಿದ್ದೇವೆ. ರಾಜ್ಯದಲ್ಲಿ ಟಿಪ್ಪು ಜಯಂತಿ ಆಚರಿಸಬೇಕು ಎನ್ನುವುದು ನಿಂತಿದೆ. ಆದರೆ ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಟಿಪ್ಪು ಜಯಂತಿ ಆಚರಿಸಲು ಅನುಮತಿ ನೀಡಬೇಕು ಎಂದು ಮನವಿ ಮಾಡಿದ್ದ ಸಂಘಟನೆಯಲ್ಲಿಯೇ ಒಡಕು ಉಂಟಾಗಿತ್ತು. ಅವರಲ್ಲಿದ್ದ ಬಹುತೇಕರು ಬಂದಿಲ್ಲ, ಮುಸ್ಲಿಮರು ಸಹ ಬಂದಿಲ್ಲ. ಒಟ್ಟಿನಲ್ಲಿ ಟಿಪ್ಪು ಜಯಂತಿ ಆಚರಣೆ ವೈಫಲ್ಯ ಕಂಡಿದೆ" ಎಂದರು.

ಪಾಲಿಕೆ ವಿರೋಧ ಪಕ್ಷದ ನಾಯಕರು ಪಾಲಿಕೆ ಕಟ್ಟಡದಲ್ಲಿ ಟಿಪ್ಪು ಜಯಂತಿ ಆಚರಿಸಿದ್ದು ಸರಿಯಲ್ಲ. ಸರ್ಕಾರಿ ಕಚೇರಿಯಲ್ಲಿ ಜಯಂತಿ ಆಚರಿಸುವ ಕುರಿತು ಮೇಯರ್ ಅವರ ಮೇಲೆ ಕ್ರಮ ಕೈಗೊಂಡು, ಪ್ರಕರಣ ದಾಖಲಿಸಬೇಕು. ಇಲ್ಲದಿದ್ದರೆ ನಾವೇ ಪೊಲೀಸರಿಗೆ ದೂರು ನೀಡುತ್ತೇವೆ. 530 ವರ್ಷಗಳ ಹಿಂದೆ ಕನಕದಾಸರು ಹೇಳಿದ ವಿಚಾರ ಇಂದಿಗೂ ಪ್ರಸ್ತುತವಾಗಿದೆ. ಜಾತಿ, ಜಾತಿಗಳ ನಡುವೆ ಭಿನ್ನಾಭಿಪ್ರಾಯ ಮಾಡದೆ ಏಕತೆಯಲ್ಲಿ ಬಾಳಬೇಕು ಎಂದು ಹೇಳಿದ್ದರು. ಆದರೆ ಇಂದಿಗೂ ಜಾತಿ, ಜಾತಿಗಳ ನಡುವೆ ಒಡಕು ದ್ವೇಷ ಮಾತ್ರ ನಿಂತಿಲ್ಲ. ಅದನ್ನು ಹೋಗಲಾಡಿಸುವಲ್ಲಿ ನಾವೆಲ್ಲ ಒಂದಾಗಬೇಕಿದೆ ಎಂದು ತಿಳಿಸಿದರು.












Click it and Unblock the Notifications