15 ದಿನ ಕಾದು ನೋಡಿ ಎಲ್ಲವನ್ನೂ ಹೇಳುವೆ: ಕುತೂಹಲ ಹೆಚ್ಚಿಸಿದ ಪ್ರದೀಪ್ ಶೆಟ್ಟರ್ ಹೇಳಿಕೆ
ಹುಬ್ಬಳ್ಳಿ, ಸೆಪ್ಟೆಂಬರ್ 04 : ಭಾರತೀಯ ಜನತಾ ಪಕ್ಷದಲ್ಲಿ ಲಿಂಗಾಯತ ನಾಯಕರಿಗೆ ಅನ್ಯಾಯವಾಗುತ್ತಿದೆ ಎಂದು ಭಾನುವಾರ ಹೇಳಿಕೆ ನೀಡಿದ್ದ ಬಿಜೆಪಿ ವಿಧಾನ ಪರಿಷತ್ ಸದಸ್ಯ ಪ್ರದೀಪ್ ಶೆಟ್ಟರ್ ಸೋಮವಾರ ಭಾರತೀಯ ಜನತಾ ಪಕ್ಷದ ಪಕ್ಷದ ಕಚೇರಿಗೆ ಭೇಟಿ ನೀಡಿದ್ದಾರೆ.
ಬಳಿಕ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶೀಘ್ರದಲ್ಲೇ ಲಿಂಗಾಯತ ನಾಯಕರಿಗೆ ಆಗುತ್ತಿರುವ ಅನ್ಯಾಯದ ಬಗ್ಗೆ ಬಹಿರಂಗಪಡಿಸುತ್ತೇನೆ ಎಂದರು. ಅಲ್ಲದೇ ನಿನ್ನೆ ನಾನು ನೀಡಿದ ಹೇಳಿಕೆ ನಂತರ ಪಕ್ಷದ ಕೆಲವು ನಾಯಕರು ನನ್ನ ಜೊತೆ ಮಾತನಾಡಿದ್ದಾರೆ. ಹೀಗಾಗಿ ಇಂದು ಪಕ್ಷದ ಕೆಲ ಕಾರ್ಯಕ್ರಮಗಳಿಗೆ ಕರೆ ನೀಡಿದ್ದರು ಎಂದರು.

ಇನ್ನು ಬೇರೆಯವರು ಧಾರವಾಡ ಗ್ರಾಮಾಂತರ ಜಿಲ್ಲಾಧ್ಯಕ್ಷರ ಮೂಲಕ ಖಂಡನೀಯ ಪತ್ರ ಬರೆಸಿದ್ದಾರೆ. ಜಿಲ್ಲಾಧ್ಯಕ್ಷರ ಖಂಡನೀಯ ಪತ್ರ ಅವರು ಬರೆದದ್ದಲ್ಲ. ಬದಲಾಗಿ ಅವರ ಕಡೆಯಿಂದ ಯಾರೋ ಬರೆಸಿದ್ದಾರೆ. ಜಿಲ್ಲಾಧ್ಯಕ್ಷ ಬಸವರಾಜ ಕುಂದಗೋಳಮಠ ಅವರಲ್ಲಿಯೂ ಸಾಕಷ್ಟು ಅಸಮಾಧಾನ ಇದೆ. ಆದರೆ ಅವರು ತೋಡಿಕೊಂಡಿಲ್ಲ. ಈ ಬಾರಿ ಜಿಲ್ಲಾಧ್ಯಕ್ಷ ಕುಂದಗೋಳ ಮಠ ಅವರಿಗೂ ಟಿಕೆಟ್ ತಪ್ಪಿಸಿದ್ದಾರೆ ಎಂದರು.
ಬಿಜೆಪಿ ಮುಖಂಡರು ಲಿಂಗಾಯತ ಮುಖಂಡರನ್ನೇ ಟಾರ್ಗೇಟ್ ಮಾಡುತ್ತಿದ್ದಾರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಪ್ರದೀಪ್ ಶೆಟ್ಟರ್, ಲಿಂಗಾಯತ ನಾಯಕರಿಗೆ ಆಗುತ್ತಿರುವ ಅನ್ಯಾಯದ ಕುರಿತು ಶೀಘ್ರವೇ ಬಹಿರಂಗಪಡಿಸಲಿದ್ದೇನೆ. ಇನ್ನೂ ಹದಿನೈದು ದಿನ ಕಾದು ನೋಡಿ ಎಲ್ಲವೂ ಸರಿಹೋಗುತ್ತವೆ ಎಂದು ಹೇಳುವ ಮೂಲಕ ಪ್ರದೀಪ್ ಶೆಟ್ಟರ್ ಹೊಸ ಸಂಚಲನ ಮೂಡಿಸಿದ್ದಾರೆ.

ಲಿಂಗಾಯತ ನಾಯಕರ ಕಡೆಗಣನೆಗೆ ಪ್ರಮುಖ ಕಾರಣ ಯಾರು ಎನ್ನುವುದನ್ನು ರಹಸ್ಯವಾಗಿಟ್ಟ ಪ್ರದೀಪ್ ಶೆಟ್ಟರ್, ಹದಿನೈದು ದಿನಗಳ ನಂತರ ಪಕ್ಷದ ನಾಯಕರೇ ಇದನ್ನು ಸರಿಪಡಿಸುತ್ತಾರೆ. ಹಾಗೇನಾದರೂ ಸರಿಪಡಿಸದೇ ಹೋದಲ್ಲಿ 15 ದಿನಗಳ ನಂತರ ಕಾದು ನೋಡಿ ಎಂದು ಹೇಳುವ ಮೂಲಕ ಕುತೂಹಲ ಮೂಡಿಸಿದ್ದಾರೆ.
ಲಿಂಗಾಯತ ನಾಯಕರಿಗೆ ನಾಯಕತ್ವ ನೀಡಿದರೆ ಮಾತ್ರ ಬಿಜೆಪಿ ಗೆಲ್ಲಲು ಸಾಧ್ಯ
ಇನ್ನು ಭಾನುವಾರ ತಮ್ಮದೇ ಪಕ್ಷದ ವಿರುದ್ಧ ಅಸಮಾಧಾನ ಹೊರಹಾಕಿದ್ದ ಪ್ರದೀಪ್ ಶೆಟ್ಟರ್, ರಾಜ್ಯದಲ್ಲಿ ಲಿಂಗಾಯತ ನಾಯಕರಿಗೆ ಆಗುತ್ತಿರುವ ಬಗ್ಗೆ ರಾಷ್ಟ್ರೀಯ ನಾಯಕರ ಗಮನಕ್ಕೆ ತರುತ್ತೇವೆ ಎಂದು ಹೇಳಿದ್ದರು. ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಸಿದರು. ಬಿಜೆಪಿಯಲ್ಲಿ ಇರುವುದೇ ಅಲ್ಪ ಸ್ವಲ್ಪ ಲಿಂಗಾಯತ ನಾಯಕರು. ಅವರನ್ನು ಅವೈಡ್ ಮಾಡಿದರೆ ಬಿಜೆಪಿ ಕೆಟ್ಟ ಸ್ಥಿತಿಗೆ ಹೋಗುತ್ತದೆ. ರಾಜ್ಯದ ಬಿಜೆಪಿ ಉಸ್ತುವಾರಿಗಳು ಬದಲಾಗಬೇಕು. ಹಾಗೇ ಲಿಂಗಾಯತ ನಾಯಕರಿಗೆ ನಾಯಕತ್ವ ನೀಡಿದರೆ ಮಾತ್ರ ಬಿಜೆಪಿ ಗೆಲ್ಲಲು ಸಾಧ್ಯ. ಲೋಕಸಭೆ ಚುನಾವಣೆಗೆ ವೀರಶೈವ ಲಿಂಗಾಯತರಿಗೆ ಹೆಚ್ಚು ಸ್ಥಾನ ಕೊಡಿ ಎಂದಿದ್ದರು.












Click it and Unblock the Notifications