Pralhad Joshi Met Jagadish Shettar: ಬಿಜೆಪಿಯಲ್ಲಿ ರಾಜಕೀಯ ಬೆಳವಣಿಗೆ, ಜಗದೀಶ್ ಶೆಟ್ಟರ್ ಮನೆಗೆ ಪ್ರಲ್ಹಾದ್ ಜೋಶಿ
ಹುಬ್ಬಳ್ಳಿ, ಏಪ್ರಿಲ್ 15: ರಾಜ್ಯದಲ್ಲಿ ಮತ್ತೆ ಆಡಳಿತಕ್ಕೆ ಬರಲು ತೀವ್ರ ಕಸರತ್ತು ನಡೆಸುತ್ತಿರುವ ಬಿಜೆಪಿ ಸರ್ಕಾರಕ್ಕೆ ಅವರದ್ದೇ ಪಕ್ಷದ ಹಿರಿಯ ನಾಯಕರು ಮತ್ತು ಶಾಸಕರೇ ಕಂಟಕವಾಗುತ್ತಿದ್ದಾರೆ. ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ್ ಸವದಿ ಕಾಂಗ್ರೆಸ್ ಸೇರ್ಪಡೆಯಾಗಿದ್ದು, ಮುಂದಿನ ಸರತಿ ಸಾಲಿನಲ್ಲಿ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಪಕ್ಷ ತೊರೆಯಲು ಕಾಯುತ್ತಿದ್ದಾರೆ.
ಈ ಆತಂಕದಲ್ಲಿಯೇ ಟಿಕೆಟ್ ಘೋಷಣೆಯಾಗದ ಕಾರಣ ಪಕ್ಷದ ವಿರುದ್ಧ ತಿರುಗಿ ಬಿದ್ದಿರುವ ಮಾಜಿ ಸಿಎಂ ಅವರನ್ನು ಮನವೊಲಿಸುವ ಎಲ್ಲಾ ಕೆಲಸಗಳು ನಡೆಯುತ್ತಿವೆ. ಹುಬ್ಬಳ್ಳಿಯಲ್ಲಿ ದಿಢೀರ್ ರಾಜಕೀಯ ಬೆಳವಣಿಗೆಗಳು ನಡೆಯುತ್ತಿದ್ದು, ರಾಜಕೀಯ ಅಖಾಡಕ್ಕೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಇಳಿದಿದ್ದಾರೆ. ಬಿಜೆಪಿ ಹಿರಿಯ ನಾಯಕ ಜಗದೀಶ್ ಶೆಟ್ಟರ್ ಮನೆಗೆ ಹೋಗಿರುವ ಅವರು ಸಂಧಾನ ಸಭೆ ನಡೆಸಿದ್ದಾರೆ.

ಬಿಜೆಪಿಯಿಂದ ಟಿಕೆಟ್ ಸಿಗುವುದು ಅನುಮಾನವಾಗಿರುವ ಹಿನ್ನೆಲೆಯಲ್ಲಿ ಹಾಲಿ ಶಾಸಕರಾದ ಜಗದೀಶ್ ಶೆಟ್ಟರ್ ಬಿಜೆಪಿ ಹೈಕಮಾಂಡ್ ಮೇಲೆ ಕೋಪಗೊಂಡಿದ್ದಾರೆ. ಶುಕ್ರವಾರವಷ್ಟೇ ಟಿಕೆಟ್ ಘೋಷಣೆಯಾಗಬೇಕು ಇಲ್ಲದಿದ್ದರೇ ನಾನು ಬೇರೆ ರೀತಿಯಲ್ಲಿ ಯೋಚನೆ ಮಾಡುತ್ತೇನೆ ಎಂದು ಪಕ್ಷದ ನಾಯಕರಿಗೆ ಖಡಕ್ ಸೂಚನೆ ನೀಡಿದ್ದರು. ಇದರ ಬೆನ್ನಲ್ಲೇ ಹುಬ್ಬಳ್ಳಿಯಲ್ಲಿರುವ ಜಗದೀಶ್ ಶೆಟ್ಟರ್ ನಿವಾಸಕ್ಕೆ ಶನಿವಾರ ಬೆಳಗ್ಗೆ ಭೇಟಿ ನೀಡಿದ ಕೇಂದ್ರ ಕಲ್ಲಿದ್ದಲು ಸಚಿವ ಪ್ರಲ್ಹಾದ್ ಜೋಶಿ ಮಾತುಕತೆ ನಡೆಸಿದ್ದಾರೆ.
ಈಗಾಗಲೇ ವಿಧಾನಸಭಾ ಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳ ಎರಡು ಪಟ್ಟಿಗಳನ್ನು ಬಿಡುಗಡೆ ಮಾಡಿದೆ. ಆದರೆ, ಎರಡು ಪಟ್ಟಿಯಲ್ಲಿಯೂ ಜಗದೀಶ್ ಶೆಟ್ಟರ್ ಹಾಗೂ ಅವರ ಕ್ಷೇತ್ರದ ಹೆಸರು ಇಲ್ಲ. ಮುಂಬರುವ ಬಿಜೆಪಿಯ ಮೂರನೇ ಪಟ್ಟಿಯಲ್ಲೂ ಟಿಕೆಟ್ ಘೋಷಣೆಯಾಗದೆ ಇದ್ದರೆ ಶೆಟ್ಟರ್ ಅವರು ಪಕ್ಷೇತರರಾಗಿ ಸ್ಪರ್ಧಿಸಲಿದ್ದಾರೆ ಎಂಬ ವದಂತಿಗಳು ಹಬ್ಬಿವೆ.
ಶುಕ್ರವಾರ ಮಾಧ್ಯಮಗಳ ಜೊತೆ ಮಾತನಾಡಿದ ಜಗದೀಶ್ ಶೆಟ್ಟರ್, "ನಾನು ಪಾಸಿಟಿವ್ ಆಗಿ ಯೋಚನೆ ಮಾಡ್ತೀನಿ. ಈಗಲೂ ಟಿಕೆಟ್ ಸಿಗುವ ಆಶಾಭಾವ ಹೊಂದಿದ್ದೇನೆ. ಇವತ್ತಿಗೆ ಎರಡು ದಿನ ಆಯ್ತು. ನಾಳೆ ಘೋಷಣೆ ಆಗದೆ ಹೋದರೆ ನಾನು ಬೇರೆ ಯೋಚನೆ ಮಾಡುತ್ತೇನೆ. ಅಭಿಮಾನಿಗಳ ಸಭೆ ಮಾಡಿ ಅಂತಿಮ ತೀರ್ಮಾನ ತೆಗೆದುಕೊಳ್ಳುತ್ತೇನೆ" ಎಂದಿದ್ದರು.

ಶನಿವಾರ ತಮ್ಮ ಬೆಂಬಲಿಗರ ಸಭೆ ನಡೆಸುವುದಾಗಿ ತಿಳಿಸಿದ್ದ ಅವರು, "ವರಿಷ್ಠರನ್ನು ಭೇಟಿ ಮಾಡಿದ ಮೇಲೆ ಪಾಸಿಟಿವ್ ರೆಸ್ಪಾನ್ಸ್ ಮಾಡಿದ್ದಾರೆ. ನಾಳೆ 11 ವರೆಗೂ ನೋಡ್ತೀನಿ. ನಂತರ ಸಭೆ ಮಾಡಿ ತೀರ್ಮಾನ ತೆಗೆದುಕೊಳ್ಳುತ್ತೇನೆ. ಬೇರೆ ಜಿಲ್ಲೆಯಿಂದಲೂ ಜನ ಬರುತ್ತಿದಾರೆ. ನನಗೆ ಅಲ್ಲ ಇದು ಮತದಾರರಿಗೂ ಮಾಡಿದ ಅಪಮಾನ. ಹುಬ್ಬಳ್ಳಿ ಧಾರವಾಡಕ್ಕೆ ಸೀಮಿತ ಅಲ್ಲ. ರಾಜ್ಯದ ಎಲ್ಲ ಕಡೆ ಇಂದ ಕರೆ ಮಾಡುತ್ತಿದಾರೆ. ನಾನು ಕಾಡಿ ಬೇಡಿ ಟಿಕೆಟ್ ಕೇಳಲ್ಲ, ವರಿಷ್ಠರು ಫೋನ್ ಮಾಡಿದ ಕಾರಣ ದೆಹಲಿಗೆ ಹೋಗಿದ್ದೆ" ಎಂದಿದ್ದಾರೆ.
ಇನ್ನು, ಶುಕ್ರವಾರ ಜಗದೀಶ್ ಶೆಟ್ಟರ್ ಬಂಡಾಯದ ಬಗ್ಗೆ ಮಾತನಾಡಿದ್ದ ಪ್ರಲ್ಹಾದ್ ಜೋಶಿ, "ಈ ವಾರದ ಆರಂಭದಲ್ಲಿ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡುವ ಮೊದಲು ಬಿಜೆಪಿ ವರಿಷ್ಠರು, ಇತರರಿಗೆ ದಾರಿ ಮಾಡಿಕೊಡುವಂತೆ ಜಗದೀಶ್ ಶೆಟ್ಟರ್ಗೆ ಸೂಚಿಸಿದ್ದರು. ಅವರು ಕೊನೆಯ ಬಾರಿಗೆ ಸ್ಪರ್ಧಿಸಲು ಬಯಸುವುದಾಗಿ ತಿಳಿಸಿದ ಕಾರಣ ಅವರಿಗೆ ಟಿಕೆಟ್ ನೀಡುವ ಸಂಬಂಧ ಪಕ್ಷ ಚಿಂತಿಸುತ್ತಿದೆ" ಎಂದು ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಮಾತನಾಡಿದ್ದರು.












Click it and Unblock the Notifications