ಹುಬ್ಬಳ್ಳಿ: ಇಬ್ಬರು ಹೆದ್ದಾರಿ ದರೋಡೆಕೋರರ ಬಂಧನ
ಹುಬ್ಬಳ್ಳಿ, ಜೂನ್ 27 : ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಪಾಳೆ ಗ್ರಾಮದ ಸರ್ವಿಸ್ ರಸ್ತೆಯಲ್ಲಿ ವಾಹನಗಳನ್ನು ಅಡ್ಡಗಟ್ಟಿ ದರೋಡೆ ಮಾಡಲು ಯತ್ನಿಸುತ್ತಿದ್ದ ಇಬ್ಬರನ್ನು ಹುಬ್ಬಳ್ಳಿ ಗ್ರಾಮೀಣ ಠಾಣೆ ಪೊಲೀಸರು ಬಂಧಿಸಿದ್ದು, ಮೂವರು ಪರಾರಿಯಾಗಿದ್ದಾರೆ.
ಇಲ್ಲಿನ ಇಂದಿರಾನಗರದ ಬಂಕಾಪುರ ಚೌಕದ ನಿವಾಸಿ ಮುತ್ತುರಾಜ್ ಟಗರಗುಂಟಿ, ಬಿಡ್ನಾಳ್ ಗ್ರಾಮದ ಪ್ರವೀಣ್ ಬಂಧಿತರು. ಕುಂದಗೋಳ ತಾಲೂಕಿನ ಶಕೀರ್ ಸಾಬ್ ಹಳೇಮನಿ, ಬಿಸ್ನಾಳ್ ನ ಮಂಜು ನಾಗಪ್ಪ ಮಾದರ ಹಾಗೂ ಮಾಲತೇಶ್ ಪರಾರಿಯಾಗಿದ್ದಾರೆ.
ಆರೋಪಿಗಳು ಸೋಮವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಪಾಳೆ ಗ್ರಾಮದ ಬಳಿಯ ಸರ್ವಿಸ್ ರಸ್ತೆಯಲ್ಲಿ ಕಾರಿನಲ್ಲಿ ಮಾರಕಾಸ್ತ್ರಗಳನ್ನು ಇಟ್ಟುಕೊಂಡು ದರೋಡೆಗೆ ಯತ್ನಿಸುತ್ತಿದ್ದರು.
ಈ ವೇಳೆ ದಾಳಿ ನಡೆಸಿದ ಪೊಲೀಸರು ಆರೋಪಿಗಳಿಬ್ಬರನ್ನು ಬಂಧಿಸಿದ್ದಾರೆ. ದಾಳಿ ವೇಳೆ ಮೂವರು ಪರಾರಿಯಾಗಿದ್ದಾರೆ. ಬಂಧಿತರಿಂದ ಚಾಕು, ಕಟರ್, ಕಾರದಪುಡಿ, ಕೈ ಗ್ಲೌಸ್ ಸೇರಿದಂತೆ ಕಾರನ್ನು ವಶಕ್ಕೆ ಪಡೆಯಲಾಗಿದೆ. ಈ ಬಗ್ಗೆ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.