'ಮಹದಾಯಿ ನೀರು ಕರ್ನಾಟಕಕ್ಕೆ ಕೊಡುವ ಪ್ರಶ್ನೆಯಿಲ್ಲ ಎಂದಿದ್ದ ಸೋನಿಯಾ'
ಹುಬ್ಬಳ್ಳಿ, ಜುಲೈ 19: ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಅವರು ಗೋವಾಕ್ಕೆ ಹೋದ ಸಂದರ್ಭದಲ್ಲಿ ಮಹದಾಯಿ ನದಿಯಿಂದ ಕರ್ನಾಟಕಕ್ಕೆ ಒಂದು ಹನಿ ನೀರು ಕೊಡುವ ಪ್ರಶ್ನೆಯೇ ಇಲ್ಲ. ಮಹದಾಯಿ ನದಿ ತಿರುವು ಯೋಜನೆಯನ್ನು ಕಾಂಗ್ರೆಸ್ ಒಪ್ಪುವುದಿಲ್ಲ ಎಂದು ಹೇಳಿರುವುದಾಗಿ ವಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಬುಧವಾರ ಹೇಳಿದ್ದಾರೆ.
ಸೋನಿಯಾ ಗಾಂಧಿ ಹಾಗೆ ಹೇಳಿರುವ ಕಾರಣದಿಂದ ಅಲ್ಲಿನ ವಿರೋಧ ಪಕ್ಷ ಪದೇ ಪದೇ ತನ್ನ ನಿಲುವನ್ನು ಬದಲಿಸುತ್ತಿದೆ ಎಂದು ಶೆಟ್ಟರ್ ಆರೋಪಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಗೋವಾದ ವಿರೋಧ ಪಕ್ಷಗಳ ನಾಯಕರ ಮನವೊಲಿಸಬೇಕು. ಮಾತುಕತೆ ಮೂಲಕ ನದಿ ವಿವಾದ ಬಗೆಹರಿಸಲು ಮೊದಲು ಅಲ್ಲಿನ ವಿರೋಧ ಪಕ್ಷಗಳನ್ನು ಒಪ್ಪಿಸಬೇಕು ಎಂದು ಅವರು ಹೇಳಿದರು.
ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನ್ಯಾಯಾಧೀಕರಣದ ಹೊರಗೆ ಮಹದಾಯಿ ವಿವಾದ ಬಗೆಹರಿಯಬೇಕು. ಆದರೆ ಇದನ್ನೇ ಮುಂದಿಟ್ಟುಕೊಂಡು ಕಾಂಗ್ರೆಸ್ ರಾಜಕೀಯ ಮಾಡಬಾರದು ಎಂದು ತಾಕೀತು ಮಾಡಿದರು.
ಜನರ ಗಮನ ಬೇರೆಡೆಗೆ ಸೆಳೆಯಲು ತಂತ್ರ
ಪರಪ್ಪನ ಅಗ್ರಹಾರದಲ್ಲಿ ನಡೆದ ಅಕ್ರಮವನ್ನು ಮರೆಮಾಚಲು ಮುಂದಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಜನರ ಗಮನ ಬೇರೆಡೆಗೆ ಸೆಳೆಯಲು ಈಗ ಧ್ವಜದ ನಾಟಕ ಆರಂಭಿಸಿದ್ದಾರೆ ಎಂದು ಜಗದೀಶ ಶೆಟ್ಟರ್ ಆರೋಪಿಸಿದರು.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಅಧಿಕಾರಿಗಳು ಮನಬಂದಂತೆ ಮಾಡುತ್ತಿದ್ದಾರೆ. ಇವೆಲ್ಲವನ್ನೂ ಮರೆಮಾಚಲು ಜನರ ಭಾವನಾತ್ಮಕ ವಿಷಯವಾಗಿರುವ ಧ್ವಜ ರಚನೆ ಕುರಿತು ವಿವಾದ ಹುಟ್ಟುಹಾಕಿದ್ದಾರೆ ಎಂದು ಕಿಡಿಕಾರಿದರು.
ರಾಜ್ಯಕ್ಕೆ ಪ್ರತ್ಯೇಕ ಧ್ವಜದ ಅಗತ್ಯವಿಲ್ಲ ಎಂದ ಶೆಟ್ಟರ್, ಹೀಗೆ ರಾಜ್ಯಕ್ಕೆ ಪ್ರತ್ಯೇಕ ಧ್ವಜ ರಚನೆಯಾದರೆ, ಮುಂದೆ ಜಿಲ್ಲೆಗೊಂದು ಧ್ವಜ ಬೇಕು ಎಂಬ ಬೇಡಿಕೆ ಬಂದರೂ ಅಚ್ಚರಿ ಇಲ್ಲ. ಇದರಿಂದ ಧ್ವಜ ಸಂಹಿತೆಗೆ ಬೆಲೆ ಇಲ್ಲದಂತಾಗುತ್ತದೆ. ದೇಶಕ್ಕೆ ಒಂದೇ ಧ್ವಜ ಸಾಕು ಎಂದು ಪ್ರತಿಪಾದಿಸಿದರು.












Click it and Unblock the Notifications