ಎಂಎಲ್ಸಿ ಬಸವರಾಜ ಹೊರಟ್ಟಿಗೆ ಸೈನಿಕನಿಂದ ಜೀವ ಬೆದರಿಕೆ
ಹುಬ್ಬಳ್ಳಿ, ಜೂನ್ 26: ಜೆಡಿಎಸ್ ಮುಖಂಡ, ವಿಧಾನಸಭಾ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಅವರಿಗೆ ಸೈನಿಕನೊಬ್ಬ ಜೀವ ಬೆದರಿಕೆ ಹಾಕಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಘಟನೆ ಜೂನ್ 14 ರಂದು ನಡೆದಿದ್ದು, ಬಸವರಾಜ ಹೊರಟ್ಟಿ ಅವರು ಹುಬ್ಬಳ್ಳಿಯಿಂದ ಬೆಂಗಳೂರಿಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದಾಗ, ಜೊತೆಯಲ್ಲಿ ಪ್ರಯಾಣಿಸುತ್ತಿದ್ದ ಸೈನಿಕನೋರ್ವ ಜೀವ ಬೆದರಿಕೆ ಹಾಕಿದ್ದಾನೆ.
ಬಸವರಾಜಹೊರಟ್ಟಿ ಅವರು ಮೊಬೈಲ್ನಲ್ಲಿ ವಿಡಿಯೋ ಒಂದನ್ನು ನೋಡುತ್ತಿದ್ದರು. ಈ ಸಮಯ ಅದೇ ಬೋಗಿಯಲ್ಲಿ ಪ್ರಯಾಣಿಸುತ್ತಿದ್ದ ಸೈನಿಕ, ಒರಟಾಗಿ ಬಸವರಾಜ ಹೊರಟ್ಟಿ ಅವರಿಗೆ ಮೊಬೈಲ್ ಆಫ್ ಮಾಡುವಂತೆ ಹೇಳಿದ್ದಾನೆ, ಹೊರಟ್ಟಿ ಅವರು ಸೈನಿಕನ ಹೆಸರು, ವಿಳಾಸ ಕೇಳಿದಾಗ, 'ನಿನ್ನಂತಹಾ ರಾಜಕಾರಣಿಗಳನ್ನು ಬಹಳ ನೋಡಿದ್ದೇನೆ, ಹೆಚ್ಚು ಮಾತನಾಡಿದರೆ ಶೂಟ್ ಮಾಡ್ತೇನೆ' ಎಂದು ಹೆದರಿಸಿದ್ದಾನೆ.

ಹೊರಟ್ಟಿ ಅವರ ಜೊತೆ ಪ್ರಯಾಣಿಸುತ್ತಿದ್ದ ನಿವೃತ್ತ ಕೆಎಎಸ್ ಅಧಿಕಾರಿ ಭೀಮಸೇನ್ ರಾವ್ ಶಿಂಧೆ ಹಾಗೂ ಗಜಾನನ ರೇಮನಿ ಅವರು ಸೈನಿಕನಿಗೆ ಬುದ್ಧಿವಾದ ಹೇಳಲು ಹೋದಾಗ ಅವರ ಮೇಲೂ ಎರಗಿದ ಸೈನಿಕ ಅವಾಚ್ಯ ಶಬ್ದಗಳಿಂದ ಅವರನ್ನು ಬೈದಿದ್ದಾನೆ.
ಹುಬ್ಬಳ್ಳಿ ರೈಲ್ವೆ ನಿಲ್ದಾಣದಲ್ಲಿ ಸೈನಿಕ ರೈಲು ಇಳಿದು ಹೋಗಿದ್ದಾನೆ, ಬಸವರಾಜ ಹೊರಟ್ಟಿ ಅವರು ಘಟನೆ ಬಗ್ಗೆ ಜೂನ್ 18 ರಂದು ರೈಲ್ವೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಜೂನ್ 15,16 ರಂದು ತಮಗೆ ಬಾಗಲಕೋಟೆಯಲ್ಲಿ ಕಾರ್ಯಕ್ರಮಗಳಿದ್ದ ಕಾರಣ ದೂರು ನೀಡುವುದು ತಡವಾಗಿದೆ ಎಂದು ಹೊರಟ್ಟಿ ಹೇಳಿದ್ದಾರೆ.
ಸೈನಿಕನ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದು, ಸೈನಿಕನ ಹೆಸರು ರೋಹಿತ್ ಪಟ್ಟೇದ್ ಮರಾಠಾ ಎಂದು ಗೊತ್ತಾಗಿದ್ದು, ಆತ ಬೆಳಗಾವಿಯ ರೆಜಿಮೆಂಟಿನವರು ಎಂಬುದು ಗೊತ್ತಾಗಿದೆ.












Click it and Unblock the Notifications