ಕಲಘಟಗಿ ಅತ್ಯಾಚಾರ ಆರೋಪಿ ವಿಷ ಸೇವಿಸಿ ಆತ್ಮಹತ್ಯೆ
ಹುಬ್ಬಳ್ಳಿ, ಆಗಸ್ಟ್, 27: ಗೋವಿನ ಜೋಳ ಹೊಲಕ್ಕೆ ಐದು ವರ್ಷದ ಬಾಲಕಿಯನ್ನು ಕರೆದುಕೊಂಡು ಹೋಗಿ, ಅತ್ಯಾಚಾರ ಎಸಗಿದ್ದ ಆರೋಪಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಸಮೀಪದ ಕಲಘಟಗಿ ತಾಲೂಕು ಸುತಗಟ್ಟಿ ಗ್ರಾಮದಲ್ಲಿ ನಡೆದಿದೆ. 60 ವರ್ಷ ವಯಸ್ಸಿನ ಬಸಪ್ಪ ಗುಂಡೂರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಅತ್ಯಾಚಾರ ಆರೋಪಿ.
ತನ್ನ ಮನೆಯ ಹತ್ತಿರದ ಬಾಲಕಿಯನ್ನು ಪಕ್ಕದ ಗೋವಿನ ಜೋಳಕ್ಕೆ ಕರೆದುಕೊಂಡು ಹೋಗಿದ್ದ ಬಸಪ್ಪ, ಆ.17 ರಂದು ಅತ್ಯಾಚಾರ ಎಸಗಿದ್ದ ಎಂದು ಆರೋಪಿಸಲಾಗಿತ್ತು. ಆ ನಂತರ ಬಾಲಕಿಯ ಆರೋಗ್ಯದಲ್ಲಿ ಏರುಪೇರಾಗಿತ್ತು, ಪಾಲಕರು ವೈದ್ಯರ ಬಳಿ ತಪಾಸಣೆಗೆ ಕರೆದುಕೊಂಡು ಹೋದಾಗ ಬಾಲಕಿಯ ಮೇಲೆ ಅತ್ಯಾಚಾರ ಎಸಗಿರುವುದು ತಿಳಿದು ಬಂದಿತ್ತು. ನಂತರ ಬಾಲಕಿಯೇ ಸ್ವತಃ ಬಸಪ್ಪ ಅತ್ಯಾಚಾರ ಎಸಗಿದ ವಿಷಯವನ್ನು ತಿಳಿಸಿದ್ದಳು.[ಹುಬ್ಬಳ್ಳಿ: ನಾಲ್ವರು ಕೊಲೆ ಆರೋಪಿಗಳ ಬಂಧನ]
ಈ ಕುರಿತು ಬಾಲಕಿಯ ಪೋಷಕರು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಈ ವಿಷಯ ತಿಳಿದ ಬಸಪ್ಪ ತನ್ನ ಮನೆಯಲ್ಲಿ ವಿಷ ಸೇವಿಸಿದ್ದ. ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯೆ ಆತ ಕೊನೆಯುಸಿರೆಳೆದಿದ್ದಾನೆ. ಬಾಲಕಿ ತೀವ್ರವಾಗಿ ಅಸ್ವಸ್ಥಗೊಂಡಿದ್ದು, ಹುಬ್ಬಳ್ಳಿಯ ಕಿಮ್ಸ್ ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.