ಹುಬ್ಬಳ್ಳಿಯಲ್ಲಿ ಎಎಪಿ ಅಭ್ಯರ್ಥಿಗಳ ಪರ ಪ್ರಚಾರಕ್ಕಿಳಿದ ಪಂಜಾಬ್ ಸಿಎಂ ಭಗವಂತ್ ಮಾನ್
ಹುಬ್ಬಳ್ಳಿ, ಏಪ್ರಿಲ್, 18: ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಕೇಂದ್ರ ನಾಯಕರು ರಾಜ್ಯಕ್ಕೆ ಆಗಮಿಸಿ ತಮ್ಮ ಅಭ್ಯರ್ಥಿಗಳ ಪರ ಪ್ರಚಾರ ಮಾಡಲು ಆರಂಭಿಸಿದ್ದಾರೆ. ಅದೇ ರೀತಿ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಸಿಂಗ್ ಮಾನ್ ಇಂದು ಹುಬ್ಬಳ್ಳಿ, ರೋಣ, ತೇರದಾಳ ಮತಕ್ಷೇತ್ರಗಳಿಗೆ ಆಗಮಿಸಿ ತಮ್ಮ ಅಭ್ಯರ್ಥಿಗಳ ಪರ ಭರ್ಜರಿ ಪ್ರಚಾರ ಮಾಡಿ ಗಮನ ಸೆಳೆದರು.
ಪಂಜಾಬ್ ಸಿಎಂ ಭಗವಾನ್ ಸಿಂಗ್ ಅವರು ರೋಣ ಮತಕ್ಷೇತ್ರದಲ್ಲಿ ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಆನೇಕಲ್ ದೊಡ್ಡಯ್ಯ ಅವರೊಂದಿಗೆ ಭರ್ಜರಿ ರೋಡ್ ಶೋ ಮಾಡಿ ಗಮನ ಸೆಳೆದರು.

ಬುಟ್ಟಿಯಲ್ಲಿ 10 ಸಾವಿರ ನಾಣ್ಯ ತಂದಿಟ್ಟ ಎಎಪಿ ಅಭ್ಯರ್ಥಿ
ಇನ್ನು ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆ 2023ರ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿರುವ ಆಮ್ ಆದ್ಮಿ ಪಕ್ಷ ಈಗಾಗಲೇ ರಾಜ್ಯದ ಬಹುತೇಕ ಭಾಗಗಳಲ್ಲಿ ಭರ್ಜರಿ ಪ್ರಚಾರ ನಡೆಸುತ್ತಿದೆ. ಆಮ್ ಆದ್ಮಿ ಪಕ್ಷಕ್ಕೆ ಇತ್ತೀಚಿಗಷ್ಟೇ ರಾಷ್ಟ್ರೀಯ ಪಕ್ಷ ಮಾನ್ಯತೆ ನೀಡಿ ಕೇಂದ್ರ ಚುನಾವಣಾ ಆಯೋಗವು ಆದೇಶ ಹೊರಡಿಸಿತ್ತು. ಹೀಗಾಗಿ ಆಪ್ ಅಭ್ಯರ್ಥಿಗಳು ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ.
ಈ ಬಾರಿ ರಾಜ್ಯದಲ್ಲಿ ಅದೃಷ್ಟ ಪರೀಕ್ಷೆಗಿಳಿದಿರುವ ಆಮ್ ಆದ್ಮಿ ಪಕ್ಷ ಈಗಾಗಲೇ ನೂರಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು, ಈಗಾಗಲೇ ನಾಮಪತ್ರ ಸಲ್ಲಿಕೆ ಕೂಡ ನಡೆಯುತ್ತಿದೆ. ರಾಣೇಬೆನ್ನೂರು ಆಮ್ ಆದ್ಮಿ ಪಕ್ಷದ ಅಭ್ಯರ್ಥಿಯ ನಾಮಪತ್ರ ಸಲ್ಲಿಕೆ ವೇಳೆ ಅಪರೂಪದ ಘಟನೆ ಇತ್ತೀಚೆಗಷ್ಟೇ ನಡೆದಿದೆ.
ನಾಮಪತ್ರ ಸಲ್ಲಿಕೆ ವೇಳೆ ಠೇವಣಿ ಇಡಲು ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಬುಟ್ಟಿಯಲ್ಲಿ ರಾಶಿ ರಾಶಿ ನಾಣ್ಯಗಳನ್ನು ತಂದು ಚುನಾವಣಾ ಅಧಿಕಾರಿಗಳ ಮುಂದಿಟ್ಟಿದ್ದರು. ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ತಂದಿಟ್ಟ ಅವಾಂತರಕ್ಕೆ ಹಾವೇರಿ ಜಿಲ್ಲೆಯ ರಾಣೇಬೆನ್ನೂರಿನ ಚುನಾವಣಾ ಅಧಿಕಾರಿಗಳು ಸುಸ್ತಾಗಿದ್ದಾರೆ. ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಹನುಮಂತಪ್ಪ ಕಬ್ಬಾರ ಎಂಬಾತ ಇತ್ತೀಚೆಗಷ್ಟೇ ನಾಮಪತ್ರ ಸಲ್ಲಿಸಿದರು. ಈ ವೇಳೆ ಠೇವಣಿ ಇಡಲು ಹನುಮಂತಪ್ಪ ಕಬ್ಬಾರ ತಾವು ಕೂಡಿಟ್ಟ ನಾಣ್ಯಗಳನ್ನು ತೆಗೆದುಕೊಂಡು ಬಂದಿದ್ದರು.

ಸುಮಾರು 10 ಸಾವಿರ ರೂಪಾಯಿ ನಾಣ್ಯಗಳನ್ನು ಬುಟ್ಟಿಯಲ್ಲಿ ತುಂಬಿಕೊಂಡು ಬಂದು ಚುನಾವಣಾ ಅಧಿಕಾರಿಗಳಿಗೆ ನೀಡಿದ್ದರು. ರಾಣೇಬೆನ್ನೂರಿನ ಚುನಾವಣಾಧಿಕಾರಿ ಇಬ್ರಾಹಿಂ ದೊಡ್ಡಮನಿ, ಅಭ್ಯರ್ಥಿ ಹನುಮಂತಪ್ಪ ಕಬ್ಬಾರ ತಂದ ಹಣವನ್ನು ಎಣಿಸುವಂತೆ ಅಧಿಕಾರಿಗಳಿಗೆ ತಿಳಿಸಿದ್ದರು. 10 ಸಾವಿರ ನಾಣ್ಯಗಳನ್ನು ಎಣಿಸಿದ ಚುನಾವಣಾ ಸಿಬ್ಬಂದಿ ಕೊನೆಗೆ ಒಟ್ಟು ಲೆಕ್ಕ ಹಾಕಿ 10 ಸಾವಿರ ನಾಣ್ಯಗಳನ್ನು ಸ್ಥಳೀಯ ಬ್ಯಾಂಕ್ಗೆ ನೀಡಿ ಅದರ ಬದಲಾಗಿ ನೋಟು ತೆಗೆದುಕೊಂಡು ಪಡೆದಿದ್ದರು
ಹನುಮಂತಪ್ಪ ಕಬ್ಬಾರ ರಾಣೇಬೆನ್ನೂರಿನ ರೈತ ಮುಖಂಡರಾಗಿದ್ದು, ಚುನಾವಣೆಗೆ ಪ್ರಚಾರಕ್ಕಾಗಿ 10 ಸಾವಿರ ನಾಣ್ಯಗಳನ್ನು ಬುಟ್ಟಿಯಲ್ಲಿ ತಂದಿದ್ದಾರೆ ಎನ್ನುವ ಮಾತುಗಳು ಕೇಳಿ ಬಂದಿದೆ.
ಎಎಪಿ ಪಕ್ಷದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ
ಇನ್ನು ಚಿತ್ರದುರ್ಗದಲ್ಲಿ ಆಮ್ ಆದ್ಮಿ ಪಕ್ಷದ ಅಭ್ಯರ್ಥಿಯಾಗಿ ಬಿ.ಇ.ಜಗದೀಶ್ ಅವರು ಅಪಾರ ಬೆಂಬಲಿಗರೊಂದಿಗೆ ನಾಮಪತ್ರ ಸಲ್ಲಿಸಿದ್ದರು. ನಗರದ ನೀಲಕಂಠೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಬಿ.ಇ.ಜಗದೀಶ್ ದಂಪತಿಗಳು ನಂತರ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ಹಾಗೂ ಜಗದೀಶ್ ಅಭಿಮಾನಿಗಳು ಮತ್ತು ಬೆಂಬಲಿಗರು ಹೆಚ್ಚಿನ ಸಂಖ್ಯೆಯಲ್ಲಿ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದು, ಪಕ್ಷದ ಗುರುತು ಪೊರಕೆಯನ್ನು ಹಿಡಿದ ಮಹಿಳೆಯರು ಮುಂದಿನ ಎಂಎಲ್ಎ ಜಗದೀಶ್ ಎಂಬ ಜಯ ಘೋಷಣೆ ಕೂಗಿದರು. ಮೆರವಣಿಗೆಯು ಬಿಡಿ ರಸ್ತೆಯ ಮೂಲಕ ಸಾಗಿ ಪ್ರವಾಸಿ ಮಂದಿರ ಮುಂಬಾಗದಲ್ಲಿರುವ ತಾಲ್ಲೂಕು ಕಚೇರಿಯನ್ನು ತಲುಪಿತು.
ಈ ವೇಳೆ ಜಗದೀಶ್ ಅವರಿಗೆ ಪತ್ನಿ ಶೀಲ, ಮಗ ಆಕಾಶ್, ವಿನಯ್ ಕುಮಾರ್, ಪಕ್ಷದ ಜಿಲ್ಲಾ ಕಾರ್ಯದರ್ಶಿ ತಿಪ್ಪೇಸ್ವಾಮಿ, ಗೂಳಿ ರವಿಕುಮಾರ್ ಲಿಂಗಾರಜು, ಶುಬಾಶ್, ರಾಜಪ್ಪ, ತಿಮ್ಮರೆಡ್ಡಿ ಹುಲ್ಲೂರು ಸೇರಿದಂತೆ ಆಮ್ ಆದ್ಮಿ ಪಕ್ಷದ ಇನ್ನಿತರೆ ಮುಖಂಡರು ಸಾಥ್ ನೀಡಿದರು.












Click it and Unblock the Notifications