ಯುವಜನೋತ್ಸವಕ್ಕೆ ಪ್ರಧಾನಿ ಚಾಲನೆ: ಕನಿಷ್ಠ 100 ವಿದ್ಯಾರ್ಥಿಗಳನ್ನು ಕರೆತರುವ ಸುತ್ತೋಲೆ ವಾಪಸ್
ಹುಬ್ಬಳ್ಳಿ, ಜನವರಿ 11: ಜನವರಿ 12 ರಂದು ಬಿಜೆಪಿಯಿಂದ ನಡೆಯಲಿರುವ 'ಯುವಜನೋತ್ಸವ' ಸಮಾರಂಭಕ್ಕೆ ಪದವಿ ಪೂರ್ವ ಕಾಲೇಜುಗಳಿಂದ ಕನಿಷ್ಠ 100 ವಿದ್ಯಾರ್ಥಿಗಳನ್ನು ಕರೆ ತರುವಂತೆ ನೀಡಿದ್ದ ಸುತ್ತೋಲೆಯನ್ನು ಮೇಲ್ವೀಚಾರಣೆ ಕಾರಣ ನೀಡಿ ರಾಜ್ಯ ಶಿಕ್ಷಣ ಇಲಾಖೆ ಹಿಂಪಡೆದಿದೆ.
ಬುಧವಾರ ಬೆಳಗ್ಗೆಯಷ್ಟೇ ಧಾರವಾಡದ ಪದವಿ ಪೂರ್ವ ಶಿಕ್ಷಣ ಇಲಾಖೆಯು ಹುಬ್ಬಳ್ಳಿ ಶಹರ ವ್ಯಾಪ್ತಿಯಲ್ಲಿನ ಎಲ್ಲ ಸರ್ಕಾರಿ, ಅನುದಾನಿತ, ಅನುದಾನ ರಹಿತ ಪದವಿ ಪೂರ್ವ ಕಾಲೇಜುಗಳ ಪ್ರಾಚಾರ್ಯರಿಗೆ ಪತ್ರ ಬರೆದಿತ್ತು. ಅದರಲ್ಲಿ ನಿಮ್ಮ ಕಾಲೇಜುಗಳ ಕನಿಷ್ಠ 100 ವಿದ್ಯಾರ್ಥಿಗಳನ್ನು ಯುವಜನೋತ್ಸವ ಸಮಾರಂಭಕ್ಕೆ ಸೂಚಿಸಿತ್ತು. ಆದರೆ ಪತ್ರ ಬರೆದು ಕೆಲವೇ ಗಂಟೆಗಳಲ್ಲಿ ಇಲಾಖೆ ಹಿಂಪಡೆದಿರುವುದಾಗಿ ತಿಳಿಸಿದೆ.

ಆಸಕ್ತಿ ಹೊಂದಿರುವ ವಿದ್ಯಾರ್ಥಿಗಳು ಮಾತ್ರ ಯುವಜನೋತ್ಸವ ಸಮಾರಂಭಕ್ಕೆ ಆಗಮಿಸಬಹುದು ಎಂದು ಶಿಕ್ಷಣ ಇಲಾಖೆ ತಿಳಿಸಿದೆ. ಈ ಹಿಂದೆ ನವೆಂಬರ್ನಲ್ಲಿ ಬೆಂಗಳೂರಿಗೆ ಭೇಟಿ ನೀಡಿದ್ದ ಪ್ರಧಾನಮಂತ್ರಿಗಳ ಸಮಾರಂಭಕ್ಕೆ ಹಾಜರಾಗುವಂತೆ ಆದೇಶಿಸಿದ್ದ ಶಿಕ್ಷಣ ಇಲಾಖೆ ಕೆಲವೇ ಗಂಟೆಗಳಲ್ಲಿ ಮತ್ತೆ ಹಿಂಪಡೆದಿತ್ತು.

ಹುಬ್ಬಳ್ಳಿಯ ರೈಲ್ವೆ ಮೈದಾನದಲ್ಲಿ ಗುರುವಾರ ಜರುಗಲಿರುವ ಏಳು ದಿನಗಳ ಅದ್ಧೂರಿ 'ಯುವಜನೋತ್ಸವ' ಸಮಾರಂಭವನ್ನು ಪ್ರಧಾನಿ ನರೇಂದ್ರ ಮೋದಿಯವರು ಉದ್ಘಾಟಿಸಲಿದ್ದಾರೆ. ಎಲ್ಲ ರಾಜ್ಯಗಳು ಯುವಜನರು ಸಮಾರಂಭಕ್ಕೆ ಆಗಮಿಸಲಿದ್ದಾರೆ. ಕಾರ್ಯಕ್ರಮ ಯುವ ಸಮೂಹಕ್ಕೆ ಪ್ರೇರಣೆಯಾಗಲಿದೆ ಎಂದು ರಾಜ್ಯ ಬಿಜೆಪಿ ಹೇಳಿದೆ. ಇದೇ ನಿಟ್ಟಿನಲ್ಲಿ ಧಾರವಾಡ ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕರು ಎಲ್ಲ ಸರ್ಕಾರಿ, ಅನುದಾನಿತ, ಅನುದಾನರಹಿತ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರಿಗೆ ಮಕ್ಕಳನ್ನು ಕರೆತರುವಂತೆ ಸೂಚಿಸಿದ್ದರು.












Click it and Unblock the Notifications