ಲೋಕಾಯುಕ್ತಕ್ಕೆ ಅಗತ್ಯ ಸಿಬ್ಬಂದಿ ಕೊಡಿ; ಸಂತೋಷ್ ಹೆಗ್ಡೆ
ಧಾರವಾಡ, ಸೆಪ್ಟೆಂಬರ್, 11; ಲೋಕಾಯುಕ್ತಕ್ಕೆ ಮಾತ್ರ ಈಗ ಭಷ್ಟಾಚಾರ ಪ್ರಕರಗಣ ವಿಚಾರಣೆ ಮಾಡುವ ಅಧಿಕಾರ ಇದ್ದು, ಲೋಕಾಯುಕ್ತ ಇಲಾಖೆಗೆ ಅಗತ್ಯ ಸೌಲಭ್ಯಗಳನ್ನು ನೀಡಬೇಕು ಎಂದು ಧಾರವಾಡದಲ್ಲಿ ನಿವೃತ್ತ ಲೋಕಾಯುಕ್ತ ನ್ಯಾ. ಸಂತೋಷ್ ಹೆಗ್ಡೆ ಹೇಳಿದರು.
ನಗರದಲ್ಲಿ ಈ ಬಗ್ಗೆ ಮಾತನಾಡಿದ ಅವರು, ಲೋಕಾಯುಕ್ತ ಪುನಃ ಅಧಿಕಾರ ಬಂದಿದ್ದು, ಒಳ್ಳೆಯ ನಿರ್ಧಾರ ಆಗಿದೆ. ಲೋಕಾಯುಕ್ತಕ್ಕೆ ಸರ್ಕಾರ ಸೂಕ್ತ ಸಿಬ್ಬಂದಿ ನಿಯೋಜಿಸಬೇಕು. ಸೂಕ್ತ ಸಿಬ್ಬಂದಿ ಕೊಟ್ಟರೆ ಸರ್ಕಾರಕ್ಕೆ ನಾನು ಸಲಾಂ ಹೇಳುತ್ತೇನೆ. ಈಗಾಗಲೇ ಅನೇಕ ಕೊರತೆಗಳ ನಡುವೆಯೂ ಲೋಕಾಯುಕ್ತ ಕೆಲಸ ಮಾಡುತಿದೆ. ಅದ್ದರಿಂದ ಲೋಕಾಯುಕ್ತಕ್ಕೆ ಸರ್ಕಾರ ಬೇಕಾದ ಸಿಬ್ಬಂದಿಯನ್ನು ಕೊಡಬೇಕು ಎಂದರು.
ನಮ್ಮಲ್ಲಿ ಭ್ರಷ್ಟರಿಗೆ 7 ವರ್ಷ ಶಿಕ್ಷೆಯಿದೆ, ಅದಕ್ಕಾಗಿ 50 ವರ್ಷ ಕಾಯಬೇಕು: ಸಂತೋಷ್ ಹೆಗ್ಡೆ
ಕೆಲವು ಲೋಕಾಯುಕ್ತ ಕಾಯ್ದೆಗಳಿಗೆ ತಿದ್ದುಪಡಿ ಆಗಬೇಕು. ಈ ಹಿಂದೆ ಇದ್ದ ಅಧಿಕಾರಗಳನ್ನು ಪುನಃ ಮರಳಿ ಅವರನ್ನು ಅಧಿಕಾರಕ್ಕೆ ತರಬೇಕು. ಆದರೆ ಯಾವುದೇ ಕಾರಣಕ್ಕೂ ನಾನು ಪುನಃ ಲೋಕಾಯುಕ್ತಕ್ಕೆ ಬರುವುದಿಲ್ಲ. ಈಗಾಗಲೇ ನಾನು ಐದು ವರ್ಷ ಕರ್ತವ್ಯ ನಿಭಾಯಿಸಿದ್ದೇನೆ. ನನಗೆ ಈಗ 83 ವರ್ಷ ವಯಸ್ಸಾಯಿತು ಎಂದರು.
ನನ್ನ ಬಳಿ ಸಹಾಯಕ್ಕೆ ಬಂದರೆ ಸ್ಪಂದಿಸುವೆ; ನನಗೆ ಈಗ ಯಾವುದೇ ಅಧಿಕಾರ ಬೇಡ. ಯಾವ ಹುದ್ದೆ, ಅಧಿಕಾರಕ್ಕೆ ಕಾಯುವುದಿಲ್ಲ. ಈಗಾಗಲೇ ಸಾಕಷ್ಟು ಕೆಲಸ ಮಾಡಿದ್ದೇನೆ. ಆದರೆ ಲೋಕಾಯುಕ್ತ ತಿದ್ದುಪಡಿಗೆ ಸಲಹೆ ಕೇಳಿದರೆ ಕೊಡುತ್ತೇನೆ. ಯಾವುದೇ ಸಂದರ್ಭದಲ್ಲಿ ಸಹಾಯ ಕೇಳಿದರೂ ಇಲ್ಲ ಎನ್ನುವುದಿಲ್ಲ. ಸರ್ಕಾರದವರು ನನ್ನ ಸಹಾಯವನ್ನು ಕೇಳುವುದಿಲ್ಲ. ಒಂದು ವೇಳೆ ಕೇಳಿದರೆ ಖಂಡಿತವಾಗಿಯೂ ಸಹಾಯ ಮಾಡುತ್ತೇನೆ ಎಂದು ಸಂತೋಷ್ ಹೆಗಡೆ ಅವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ಹೈಕೋರ್ಟ್ ಆದೇಶದಂತೆ ಎಸಿಬಿ ರದ್ದುಗೊಳಿಸಿದ ಕರ್ನಾಟಕ ಸರ್ಕಾರ
ವೆಂಕಟಾಚಲಯ್ಯನ ಬಗ್ಗೆ ಸಂತೋಷ್ ಹೆಗ್ಡೆ ಹೇಳಿದ್ದೇನು?; 1983ರಲ್ಲಿ ಜನತಾ ಪಕ್ಷ ಲೋಕಾಯುಕ್ತವನ್ನು ಪ್ರಣಾಳಿಕೆಯಲ್ಲಿ ಸೇರಿಸಿತ್ತು. ಅಂದು ಬಲಿಷ್ಠವಾದ ಲೋಕಾಯುಕ್ತ ಸಂಸ್ಥೆ ಕಟ್ಟಿದ್ದರು. ಆದರೆ ಮೊದಲಿನ ಹತ್ತು ವರ್ಷ ಏನೂ ನಡೆದಿರಲಿಲ್ಲ. ಅಂದು ಎನ್. ವೆಂಕಟಾಚಲಯ್ಯ ಲೋಕಾಯುಕ್ತದ ಶಕ್ತಿಯನ್ನು ತೋರಿಸಿದ್ದರು. ನಂತರ ನಾನು ಯಾವುದೇ ಒತ್ತಡಕ್ಕೆ ಒಳಗಾಗದೇ ಅವರ ಕೆಲಸ ಮುಂದುವರೆಸಿಕೊಂಡು ಹೋಗಿದ್ದು, ಅದರ ಪರಿಣಾಮಗಳನ್ನು ಎದುರಿಸಿದ್ದೇವೆ.
ಹೀಗಾಗಿ ಲೋಕಾಯುಕ್ತ ಅಧಿಕಾರವನ್ನು ಕಿತ್ತುಕೊಂಡರು. ಲೋಕಾಯುಕ್ತವನ್ನು ದುರ್ಬಲಗೊಳಿಸುವ ಪ್ರಯತ್ನವನ್ನು ಮಾಡಿದ್ದರು, ಏಕಂದರೆ ಆ ಧೈರ್ಯ ಸರ್ಕಾರಕ್ಕೆ ಇರಲಿಲ್ಲ. ನಂತರ ದುರ್ಬಲಗೊಳಿಸುವ ಪ್ರಯತ್ನ ಮಾಡಿದರೂ ಕೂಡ ಅದು ಸಫಲವಾಗಲಿಲ್ಲ. ಆಗ ಭ್ರಷ್ಟ ಅಧಿಕಾರಿಗಳನ್ನೇ ಸರ್ಕಾರದವರು ತಂದಿಟ್ಟಿದ್ದರು. ಅದು ಆಗದೇ ಇದ್ದಾಗ ಎಸಿಬಿ ಕಟ್ಟಿದ್ದರು. ಭ್ರಷ್ಟಾಚಾರ ವಿರುದ್ಧ ಹೋರಾಟವನ್ನು ಅಂತ್ಯ ಮಾಡಲು ಎಸಿಬಿಯನ್ನು ಸೃಷ್ಟಿ ಮಾಡಿದ್ದರು. ಆದರೆ ಇದೂಗ ಎಸಿಬಿ ಹೋಗಿ ಪುನಃ ಲೋಕಾಯುಕ್ತ ಬಂದಿದೆ ಎಂದು ಸಂತೋಷ ವ್ಯಕ್ತಪಡಿಸಿದರು.
ಲೋಕಾಯುಕ್ತಕ್ಕೆ ಕೇವಲ ಅಧಿಕಾರ ಕೊಟ್ಟರೆ ಸಾಲದು, ಬೇಕಾದ ಸಿಬ್ಬಂದಿಯನ್ನು ಕೊಡಲೇಬೆಕು. ಸಿಬ್ಬಂದಿ ಕೊಟ್ಟರೆ ಸರ್ಕಾರಕ್ಕೆ ಸಲಾಂ ಹೇಳುತ್ತೇನೆ ಎಂದು ಅವರು ಪುನರುಚ್ಛರಿಸಿದ್ದಾರೆ.
ಇದೊಂದು ಉತ್ತಮವಾದ ಆದೇಶವಾಗಿದೆ. ಸಾರ್ವಜನಿಕರ ಬೇಡಿಕೆಯೂ ಇದೇ ಆಗಿತ್ತು. ಎಲ್ಲಾ ರಾಜಕೀಯ ಪಕ್ಷಗಳು ಈ ಬಗ್ಗೆ ಸುಳ್ಳು ಭರವಸೆ ಕೊಟ್ಟಿದ್ದರು, ಆದರೆ ಯಾರೂ ಸ್ಪಂದಿಸಿರಲಿಲ್ಲ. ಇದೀಗ ಹೈಕೋರ್ಟ್ ಇಂತಹದೊಂದು ಮಹತ್ವದ ತೀರ್ಪು ನೀಡಿದೆ. ಈ ತೀರ್ಪನ್ನು ಜಾರಿಗೆ ತಂದರೆ ಸಮಾಜಕ್ಕೆ ಸಾಕಷ್ಟು ಅನುಕೂಲವಾಗಲಿದೆ ಎಂದಿದ್ದರು.
ಲೋಕಾಯುಕ್ತಕ್ಕೆ ಪರ್ಯಾಯವಾಗಿ ಎಸಿಬಿ ಹುಟ್ಟುಹಾಕುವ ಅವಶ್ಯಕತೆ ಇರಲಿಲ್ಲ. ಆದರೆ ಅದೊಂದು ನಾಟಕ ಆಗಿತ್ತು. ಲೋಕಾಯುಕ್ತ ಗಣಿ ವರದಿಯನ್ನು ಜಾರಿಗೆ ತಂದಿಲ್ಲ ಎಂದು ಅಂದು ವಿರೋಧ ಪಕ್ಷದಲ್ಲಿ ಇದ್ದ ಕಾಂಗ್ರೆಸ್ನವರು ಪ್ರತಿಭಟನೆ ಹಾಗೂ ಪಾದಯಾತ್ರೆ ಮಾಡಿದ್ದರು. ವಿಪರ್ಯಾಸ ಅಂದರೆ ಅವರು ಅಧಿಕಾರಕ್ಕೆ ಬಂದಾಗ ಅದನ್ನು ಜಾರಿಗೆ ತಂದಿಲ್ಲ ಎಂದರು.
ಇದೀಗ ಲೋಕಾಯುಕ್ತ ಜಾರಿಗೆ ಬಂದಿದ್ದು, ಲೋಕಾಯುಕ್ತಕ್ಕೆ ಅಗತ್ಯಕ್ಕೆ ಅನುಗುಣವಾಗಿ ಸಿಬ್ಬಂದಿಯನ್ನು ಒದಗಿಸಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.