'ಕೂಪನ್ ಭಾಗ್ಯಕ್ಕಾಗಿ ಅಲೆದಾಡಿ ಅಲೆದಾಡಿ ಸಾಕಾಗೇತಿ'!
ಹುಬ್ಬಳ್ಳಿ, ಆಗಸ್ಟ್, 8 : ಪಡಿತರದಾರರಿಗೆ ಸಿದ್ಧರಾಮಯ್ಯ ಸರಕಾರ ಜಾರಿಗೊಳಿಸಿರುವ ರೇಷನ್ ಮತ್ತು ಸೀಮೆ ಎಣ್ಣೆ 'ಕೂಪನ್ ಭಾಗ್ಯ' ಸೂಕ್ತವಾಗಿ ಲಭ್ಯವಾಗುತ್ತಿಲ್ಲವೆಂದು ನಾಗರಿಕರು ಸ್ಥಳೀಯ ಆಹಾರ ಇಲಾಖೆ ಕಚೇರಿಗೆ ಮುತ್ತಿಗೆ ಹಾಕಿ ಸೋಮವಾರ ಪ್ರತಿಭಟಿಸಿದರು.
'ಕಾಂಗ್ರೆಸ್ ಸರಕಾರ ಮಾಡಿರುವ ಕೂಪನ್ ಭಾಗ್ಯಕ್ಕಾಗಿ ಅಡ್ಡಾಡಿ ಅಡ್ಡಾಡಿ ಸಾಕಾಗಿದೆ' ಎಂದು ಆರೋಪಿಸಿದ ಪ್ರತಿಭಟನಾಕಾರರು, ನಗರದ ಲ್ಯಾಮಿಂಗ್ಟನ್ ರಸ್ತೆಯಲ್ಲಿರುವ ಆಹಾರ ಇಲಾಖೆ ಕಚೇರಿ ಬಳಿ ನೂರಾರು ಸಂಖ್ಯೆಯಲ್ಲಿ ಆಗಮಿಸಿದ್ದರು.[ಹುಬ್ಬಳ್ಳಿ ಕೋರ್ಟ್ ನಲ್ಲಿ ಜನತೆಯ ದಂಗು ಬಡಿಸಿದ ವೈರ್]

ಕಚೇರಿಗೆ ಮುತ್ತಿಗೆ ಹಾಕಿದ ಪ್ರತಿಭಟನಾಕಾರರು, ಈ ಹಿಂದಿನ ತಿಂಗಳಿನಿಂದ ಪಡಿತರ ವಿತರಿಸಲು ಕೂಪನ್ ನೀಡುವುದಾಗಿ ರಾಜ್ಯ ಸರಕಾರ ಹೇಳಿತ್ತು. ಆದರೆ ಎಲ್ಲರಿಗೂ ಕೂಪನ್ ಲಭ್ಯವಾಗುತ್ತಿಲ್ಲ. ಕೂಪನ್ ಗಾಗಿ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ನಿತ್ಯ ಕೂಪನ್ ಗಾಗಿ ಪಾಳಿ ಹಚ್ಚುವುದೇ ದೊಡ್ಡ ಕೆಲಸವಾಗಿದೆ ಎಂದು ಆರೋಪಿಸಿದ ಪ್ರತಿಭಟನಾಕಾರರು ಆಹಾರ ಇಲಾಖೆಯ ಅಧಿಕಾರಿಯೊಂದಿಗೆ ವಾಗ್ವಾದಕ್ಕಿಳಿದರು.[ಭಾಸ್ಕರರಾವ್ ವಿರುದ್ಧ ಚಾರ್ಜ್ ಶೀಟ್, ಸ್ವಾಗತಿಸಿದ ಎಸ್.ಆರ್.ಹಿರೇಮಠ]

"ಬರೇ ಒಂದು ಕೂಪನ್ ಸಲುವಾಗಿ ಇಡೀ ದಿನ ಕಾಯಬೇಕು ಮತ್ತ ಬರೇಬರೇ ಬರಕೋತನ ಇರಬೇಕು. ಇಷ್ಟಲ್ಲದ, ಒಂದ್ಕಡೆ ಕೇಳಿದ್ರ ಮತ್ತೊಂದ್ಕಡೆ ಕಳಿಸ್ತಾರ, ಮತ್ತೊಂದ್ಕಡೆ ಕೇಳಿದ್ರ ಇನ್ನೊಂದ್ಕಡೆ ಕಳಿಸ್ತಾರ. ಹಿಂಗ ಅಲೆದಾಡಿ ಅಲೆದಾಡಿ ಸಾಕಾಗಿ ಹೋಗೇತಿ" ಎಂದು ಪ್ರತಿಭಟನಾಕಾರರೊಬ್ಬರು ಅಧಿಕಾರಿಗಳ ಮೇಲೆ ಹರಿಹಾಯ್ದರು.
ಕೆಲವೊಮ್ಮೆ ಹೆಬ್ಬೆಟ್ಟಿನ ಗುರುತು ಸರಿಯಾಗಿಲ್ಲ ಎಂದು ಓಡಾಡಿಸುತ್ತಾರೆ ಎಂದು ಆರೋಪಿಸಿದ ಪ್ರತಿಭಟನಾಕಾರರು, ನಂತರ ಸ್ಟೇಶನ್ ರಸ್ತೆಯನ್ನು ತಡೆ ಮಾಡಿ ಧರಣಿ ಆರಂಭಿಸಿದರು.[ನವಲಗುಂದ ಸಮಾವೇಶ, 100 ರೈತರಿಗೆ 2500 ಪೊಲೀಸರು!]

ಈ ಸಮಯದಲ್ಲಿ ಬಿಜೆಪಿಯ ಕೆಲ ಕಾರ್ಯಕರ್ತರು ತಮ್ಮ ಪಕ್ಷದ ಧ್ವಜ ಹಿಡಿದು ಪ್ರತಿಭಟನಾಕಾರರೊಂದಿಗೆ ಸೇರಿಕೊಂಡಾಗ ಪೊಲೀಸರು ಪರಿಸ್ಥಿತಿಯನ್ನು ಹತೋಟಿಗೆ ತರಲು ಹರಸಾಹಸಪಟ್ಟರು. ಈ ಸಮಯದಲ್ಲಿ ಪೊಲೀಸರು ಮತ್ತು ಪ್ರತಿಭಟನಾಕಾರ ನಡುವೆ ಕೂಡ ವಾಗ್ವಾದ ನಡೆಯಿತು.












Click it and Unblock the Notifications