ಸೆ. 26ಕ್ಕೆ ಹುಬ್ಬಳ್ಳಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಆಗಮನ; ಹೇಗಿದೆ ತಯಾರಿ? ಇಲ್ಲಿದೆ ವಿವರ
ಹುಬ್ಬಳ್ಳಿ, ಸೆಪ್ಟೆಂಬರ್, 21: ವಾಣಿಜ್ಯ ನಗರಿ ಹುಬ್ಬಳ್ಳಿಗೆ ಸೆಪ್ಟೆಂಬರ್ 26ರಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಆಗಮಿಸಲಿದ್ದು, ಅವರನ್ನು ಅಭಿನಂದಿಸಲು ನಗರದಲ್ಲಿ ಈಗಿನಿಂದಲೇ ಸಕಲ ಸಿದ್ಧತೆಯನ್ನು ಮಾಡಿಕೊಳ್ಳಲಾಗಿದೆ.
ಸುಮಾರು ಮೂರುವರೆ ದಶಕಗಳ ಬಳಿಕ ರಾಷ್ಟ್ರಪತಿ ಅವರಿಗೆ ಪೌರ ಸನ್ಮಾನ ಮಾಡಲು ವೇದಿಕೆಯನ್ನು ಸಜ್ಜುಗೊಳಿಸಿದ್ದಾರೆ. ಎರಡನೇ ಬಾರಿಗೆ ರಾಷ್ಟ್ರದ ಪ್ರಥಮ ಪ್ರಜೆಗೆ ಪೌರಸನ್ಮಾನ ಮಾಡಲು ಹುಬ್ಬಳ್ಳ- ಧಾರವಾಡ ಮಹಾನಗರ ಪಾಲಿಕೆ ಸಿದ್ಧತೆಯನ್ನು ಮಾಡಿಕೊಂಡಿದೆ.
ವಾಣಿಜ್ಯ ನಗರಿ ಹುಬ್ಬಳ್ಳಿಗೆ ಭೇಟಿ ನೀಡಲಿರುವ ರಾಷ್ಟ್ರಪತಿ ದ್ರೌಪದಿ ಮುರ್ಮು
ಸೆಪ್ಟೆಂಬರ್ 26ರಂದು ಆಗಮಿಸಲಿರುವ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಗೌರವ ಸಲ್ಲಿಸಲು ದೇಶಪಾಂಡೆ ನಗರದ ಕರ್ನಾಟಕ ಜಿಮಖಾನಾ ಕ್ಲಬ್ ಶೃಂಗಾರಗೊಳ್ಳುತ್ತಿದೆ. ರಾಜ್ಯ-ದೇಶ, ವಿದೇಶಗಳ ಅತ್ಯುನ್ನತ ಸ್ಥಾನದಲ್ಲಿದ್ದವರು, ಮೇರು ಕಲಾವಿದರು, ಯೋಧರು, ಸಾಧಕರಿಗೆ ಮಹಾನಗರ ಪಾಲಿಕೆ ಪೌರಸನ್ಮಾನ ಕೈಗೊಳ್ಳುತ್ತದೆ. ಪಾಲಿಕೆ ಅಸ್ತಿತ್ವಕ್ಕೆ ಬಂದು 60 ವರ್ಷಗಳಾಗಿದ್ದು, ಹಲವು ಗಣ್ಯರು, ಕಲಾವಿದರು, ಸಾಧಕರಿಗೆ ಪೌರಸನ್ಮಾನ ಸಲ್ಲಿಸುತ್ತಾ ಬಂದಿದೆ. ಇದೀಗ ದೇಶದ ಎರಡನೇ ಮಹಿಳಾ ಮತ್ತು ಬುಡಕಟ್ಟು ಸಮುದಾಯದಿಂದ ಮೊದಲ ರಾಷ್ಟ್ರಪತಿ ಆಗಿರುವ ದ್ರೌಪದಿ ಮುರ್ಮು ಅವರಿಗೆ ಪೌರ ಸನ್ಮಾನ ಮಾಡಲು ಪಾಲಿಕೆ ಸಜ್ಜಾಗಿದೆ.
ಸೆ.26ರಂದು ಹುಬ್ಬಳ್ಳಿಗೆ ಆಗಮಿಸಲಿರುವ ಮುರ್ಮು
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ವಿಶೇಷ ಮುತುವರ್ಜಿಯೊಂದಿಗೆ ರಾಷ್ಟ್ರಪತಿಯವರಿಗೆ ಪೌರಸನ್ಮಾನವನ್ನು ಮಾಡಲು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ತಯಾರಾಗಿದೆ. ಐಐಐಟಿ ಉದ್ಘಾಟನೆಗೆ ರಾಷ್ಟ್ರಪತಿ ಅವರು ಸೆಪ್ಟೆಂಬರ್ 26ರಂದು ಹುಬ್ಬಳ್ಳಿಗೆ ಆಗಮಿಸುತ್ತಿದ್ದಾರೆ. ಅಂದು ಬೆಳಗ್ಗೆ 11 ಗಂಟೆಗೆ ಪೌರಸನ್ಮಾನ ಕಾರ್ಯಕ್ರಮ ನಡೆಯಲಿದೆ. 1986-87ರಲ್ಲಿ ಗ್ಯಾನಿ ಜೈಲ್ಸಿಂಗ್ ಅವರು ಹುಬ್ಬಳ್ಳಿಗೆ ಆಗಮಿಸಿದ್ದಾಗ ಪಾಲಿಕೆಯಿಂದ ಪೌರಸನ್ಮಾನ ಮಾಡಲಾಗಿತ್ತು. ಇದೀಗ ಸುಮಾರು 35 ವರ್ಷಗಳ ನಂತರ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಪೌರಸನ್ಮಾನ ಕೈಗೊಳ್ಳಲಾಗುತ್ತಿದೆ.
ಬೆಂಗಳೂರಿನಿಂದ ಓಡಾಡಲಿದೆ ವಂದೇ ಭಾರತ್ ವಿಶೇಷ ರೈಲು, ಎಲ್ಲಿಂದ ಎಲ್ಲಿಗೆ ಪ್ರಯಾಣ ತಿಳಿಯಿರಿ
ರಾಷ್ಟ್ರಪತಿ ಅವರ ಸ್ವಾಗತಕ್ಕೆ ಭರ್ಜರಿ ಸಿದ್ಧತೆ
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಿಂದ ರಸ್ತೆ ಸ್ವಚ್ಛತೆ ಸೇರಿದಂತೆ ಹಲವು ತಯಾರಿ ಕಾರ್ಯಗಳು ಭರದಿಂದ ಸಾಗಿವೆ. ಗೋಕುಲ ರಸ್ತೆ ಸ್ವಚ್ಛಗೊಳಿಸುವ, ಪೇಂಟಿಂಗ್ ಮೂಲಕ ಅಂದಗೊಳಿಸುವ ಕಾರ್ಯ ಒಂದೆಡೆ ಆದರೆ, ಮತ್ತೊಂದೆಡೆ ಪೌರಸನ್ಮಾನ ನಡೆಯುವ ದೇಶಪಾಂಡೆ ನಗರದ ಮೈದಾನ ಬಳಿಯ ರಾಜಕಾಲುವೆ ಸ್ವಚ್ಛತೆ, ಇನ್ನಿತರ ದುರಸ್ಥಿ ಕಾರ್ಯಗಳು ನಡೆಯುತ್ತಿವೆ.
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಧಾರವಾಡ ಜಿಲ್ಲೆಗೆ ಭೇಟಿ ನೀಡುತ್ತಿರುವ ಐದನೇ ರಾಷ್ಟ್ರಪತಿ ಆಗಲಿದ್ದಾರೆ. ಈ ಮೊದಲು ದೇಶದ ಎರಡನೇ ರಾಷ್ಟ್ರಪತಿ ಸರ್ವಪಲ್ಲಿ ರಾಧಾಕೃಷ್ಣನ್, ಗ್ಯಾನಿ ಜೈಲ್ ಸಿಂಗ್, ಡಾ.ಅಬ್ದುಲ್ ಕಲಾಂ, ಪ್ರಣವ್ ಮುಖರ್ಜಿ ಅವರು ಆಗಮಿಸಿದ್ದರು. ಇದೀಗ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಆಗಮಿಸುತ್ತಿದ್ದಾರೆ.
ಗಣ್ಯರ ಸನ್ಮಾನಕ್ಕೆ ಸಿದ್ಧವಾಗಿದ್ದ ವೇದಿಕೆಗಳು
1986-87ರಲ್ಲಿ ಗ್ಯಾನಿ ಜೈಲ್ಸಿಂಗ್ ಅವರು ಧಾರವಾಡದ ಕೃಷಿ ವಿಶ್ವ ವಿದ್ಯಾಲಯಕ್ಕೆ ಆಗಮಿಸಿದ್ದಾಗ ಅವರಿಗೆ ಇಲ್ಲಿನ ರೈಲ್ವೇ ಮೈದಾನದಲ್ಲಿ ಪೌರ ಸನ್ಮಾನ ಕೈಗೊಳ್ಳಲಾಗಿತ್ತು. ಪಿ.ಎಚ್. ಪವಾರ್ ಮಹಾಪೌರರಾಗಿದ್ದರು. ಎಸ್.ಆರ್.ಬೊಮ್ಮಾಯಿ ಸೇರಿದಂತೆ ಅನೇಕ ನಾಯಕರು ಪಾಲ್ಗೊಂಡಿದ್ದರು. ಆ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಆರಂಭಗೊಂಡು ರಜತಮಹೋತ್ಸವ ಸಂಭ್ರಮದಲ್ಲಿತ್ತು. ಎಚ್.ಡಿ. ದೇವೇಗೌಡ ಅವರು ಪ್ರಧಾನಿ ಆಗಿದ್ದಾಗ ಅವರಿಗೂ ಸಹ ಪಾಲಿಕೆಯಿಂದ ಪೌರಸನ್ಮಾನ ಕೈಗೊಳ್ಳಲಾಗಿತ್ತು. ಅವರಿಗೆ ಗೋಲ್ಡನ್ ಕೀ ನೀಡುವ ಮೂಲಕ ಸ್ವಾಗತ ಕೋರಲಾಗಿತ್ತು. 1997ರಲ್ಲಿ ಡಾ.ರಾಜ್ಕುಮಾರ್ ಅವರಿಗೂ ಪೌರಸನ್ಮಾನ ಕೈಗೊಳ್ಳಲಾಗಿತ್ತು. ಇಲ್ಲಿನ ನೆಹರು ಮೈದಾನದಲ್ಲಿ ನಡೆದ ಪೌರಸನ್ಮಾನಕ್ಕೆ ಜನಸಾಗರವೇ ನೆರೆದಿತ್ತು. ಆಗ ಡಾ.ಪಾಂಡುರಂಗ ಪಾಟೀಲರು ಮಹಾಪೌರರಾಗಿದ್ದರು. ಅದೇ ರೀತಿ ಹಿಂದೂಸ್ತಾನಿ ಗಾಯಕಿ ಡಾ.ಗಂಗೂಬಾಯಿ ಹಾನಗಲ್ಲ ಅವರಿಗೆ ಪದ್ಮವಿಭೂಷಣ ಪ್ರಶಸ್ತಿ ಬಂದ ಸಂದರ್ಭದಲ್ಲೂ ಅವರಿಗೆ ಪೌರಸನ್ಮಾನ ಕೈಗೊಳ್ಳಲಾಗಿತ್ತು.
ರಾಷ್ಟ್ರಪತಿ ಪೌರ ಸನ್ಮಾನಕ್ಕಾಗಿ ದೇಶಪಾಂಡೆ ನಗರದ ಮೈದಾನ ಸಜ್ಜುಗೊಳ್ಳುತ್ತಿದೆ. ಪಾಲಿಕೆ ಸುಮಾರು 5,000 ಆಹ್ವಾನ ಪತ್ರಿಕೆ ಮುದ್ರಣ ಮಾಡುತ್ತಿದ್ದು, 3,500ರಿಂದ 4,000 ಆಸನದ ವ್ಯವಸ್ಥೆಯನ್ನು ಮಾಡುತ್ತಿದೆ. 65 ನಿಮಿಷದವರೆಗೆ ಕಾರ್ಯಕ್ರಮ ನಡೆಯಲಿದೆ. ರಾಷ್ಟ್ರಪತಿ ಅವರಿಗೆ ಸದ್ಗುರು ಸಿದ್ಧಾರೂಢಸ್ವಾಮಿ ಅವರ 800-900 ಗ್ರಾಂ ತೂಕದ ಬೆಳ್ಳಿ ಮೂರ್ತಿ, ಪೌರಸನ್ಮಾನ ಪತ್ರ ನೀಡಲಾಗುತ್ತದೆ.
ವೇದಿಕೆ ಮೇಲೆ ಮಾತನಾಡುವವರ ಪಟ್ಟಿ
ವೇದಿಕೆ ಮೇಲೆ ರಾಷ್ಟ್ರಪತಿಯವರು ಸೇರಿದಂತೆ ಐವರಿಗೆ ಮಾತ್ರ ಮಾತನಾಡುವುದಕ್ಕೆ ಅವಕಾಶ ನೀಡಲು ನಿರ್ಧರಿಸಲಾಗಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರಿಗೆ ಮಾತನಾಡಲು ಮಹಾಪೌರ ಈರೇಶ್ ಅಂಚಟಗೇರಿ ಅವರು ನಿರ್ಧರಿಸಿದ್ದಾರೆ ಎನ್ನಲಾಗಿದೆ. ವೇದಿಕೆ ಮೇಲೆ ಎಷ್ಟು ಜನರು ಇರಬೇಕು, ಯಾರು ಮಾತನಾಡಬೇಕು, ಎಷ್ಟು ನಿಮಿಷ ಮಾತನಾಡಬೇಕು ಎಂಬುದರ ಬಗ್ಗೆ ರಾಷ್ಟ್ರಪತಿ ಭವನದಿಂದ ನಿರ್ಧಾರ ಹೊರಬೀಳಲಿದೆ.
ರಾಷ್ಟ್ರಪತಿ ಭವನದಿಂದ ಒಪ್ಪಿಗೆ ಬಂದ ನಂತರ ಆಹ್ವಾನ ಪತ್ರಿಕೆಯಲ್ಲಿ ಯಾರು ಇರುತ್ತಾರೆ ಎಂಬುದು ಸ್ಪಷ್ಟವಾಗಲಿದೆ. ಮಂಗಳವಾರ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ರಾಷ್ಟ್ರಪತಿ ಅವರನ್ನು ಭೇಟಿ ಆಗಲಿದ್ದಾರೆ. ಸೆಪ್ಟೆಂಬರ್ 22ರಂದು ಆಹ್ವಾನ ಪತ್ರಿಕೆ ಅಂತಿಮಗೊಳ್ಳುವ ವಿಶ್ವಾಸವಿದೆ. ಮಹಾನಗರ ಪಾಲಿಕೆ ಶಿಷ್ಟಾಚಾರದಂತೆ 28-32 ಜನರಿಗೆ ಅವಕಾಶ ಇದೆ. ರಾಷ್ಟ್ರಪತಿ ಅವರ ಹಿಂಬದಿ ಸಾಲಿನಲ್ಲಿ ಆಸನಗಳಿಗೆ ಅವಕಾಶ ನೀಡುವ ಸಾಧ್ಯತೆ ಇಲ್ಲ ಎನ್ನಲಾಗಿದೆ.