ಹುಬ್ಬಳ್ಳಿ ಸೆಂಟ್ರಲ್; ಲಿಂಗಾಯತರು ಶೆಟ್ಟರ್ ಕಡೆ ಹೋಗದಂತೆ ತಡೆಯಲು ವಿಜಯ ಸಂಕೇಶ್ವರರನ್ನು ಕಣಕ್ಕೆ ತಂದ ಪ್ರಲ್ಹಾದ್ ಜೋಶಿ!
ಹುಬ್ಬಳ್ಳಿ, ಮೇ. 05: ಬಿಜೆಪಿಯಲ್ಲಿ ಈಗ ಎಲ್ಲಾ ನಾಯಕರನ್ನು ಅತಿ ಹೆಚ್ಚಾಗಿ ಕಾಡುತ್ತಿರುವುದು ಮಾಜಿ ಸಿಎಂ ಜಗದೀಶ್ ಶೆಟ್ಟರ್. ಟಿಕೆಟ್ ಸಿಗದ ಕಾರಣ ಪಕ್ಷ ತೊರೆದು ಕಾಂಗ್ರೆಸ್ ಕೈ ಹಿಡಿದಿರುವ ಅವರನ್ನು ಸೋಲಿಸಲೇ ಬೇಕು ಎಂದು ಎಲ್ಲರು ಪಣ ತೊಟ್ಟಿದ್ದಾರೆ. ಇದೇ ಹಿನ್ನೆಲೆಯಲ್ಲಿ ಹಲವು ನಾಯಕರು ಹುಬ್ಬಳ್ಳಿ ಸೆಂಟ್ರಲ್ ವಿಧಾನಸಭಾ ಕ್ಷೇತ್ರದಲ್ಲಿ ಅಬ್ಬರದ ಪ್ರಚಾರ ನಡೆಸುತ್ತಿದ್ದಾರೆ.
ಜಗದೀಶ್ ಶೆಟ್ಟರ್ ಬಿಜೆಪಿ ಬಿಟ್ಟು ಹೋದರೂ, ಬಿಜೆಪಿ ಅಭ್ಯರ್ಥಿಗಳ ಬೆನ್ನಿಗೆ ನಿಂತಿರುವ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ, ಅಬ್ಬರದ ಪ್ರಚಾರ ನಡೆಸಿ ಬಿಜೆಪಿ ಪರ ಮತಯಾಚನೆಯಲ್ಲಿ ತೊಡಗಿದ್ದಾರೆ. ಎದುರಿಗೆ ತಮ್ಮ ಬಹುಕಾಲದ ಸ್ನೇಹಿತ ಜಗದೀಶ್ ಶೆಟ್ಟರ್ ಕಣದಲ್ಲಿ ನಿಂತಿದ್ದರೂ, ಪಕ್ಷದ ಪರ ಗಟ್ಟಿಯಾಗಿ ನಿಂತಿರುವ ಪ್ರಲ್ಹಾದ್ ಜೋಶಿ, ಹುಬ್ಬಳ್ಳಿ ಸೆಂಟ್ರಲ್ ನಲ್ಲಿ ಬಿಜೆಪಿ ಅಭ್ಯರ್ಥಿ ಮಹೇಶ್ ಟೆಂಗಿನಕಾಯಿಯನ್ನು ಗೆಲ್ಲಿಸಲು ರಣತಂತ್ರ ರೂಪಿಸಿದ್ದಾರೆ.

ಹುಬ್ಬಳ್ಳಿ ಸೆಂಟ್ರಲ್ ಕ್ಷೇತ್ರದಲ್ಲಿ ಬಿಜೆಪಿ ಬತ್ತಳಿಕೆಯಿಂದ ಲಿಂಗಾಯತ ಮತಗಳು ಹೊರ ಬೀಳದಂತೆ ನೋಡಿಕೊಳ್ಳಲು ಎಚ್ಚರಿಕೆ ವಹಿಸಿರುವ ಪ್ರಲ್ಹಾದ್ ಜೋಶಿ, ವಿಜಯ್ ಸಂಕೇಶ್ವರ್ ಅವರ ಸಹಕಾರ ಪಡೆದಿದ್ದಾರೆ. ಹುಬ್ಬಳ್ಳಿ ಸೇರಿದಂತೆ ರಾಜ್ಯದ ಲಿಂಗಾಯತ ಸಮುದಾಯದಲ್ಲಿ ಪ್ರಮುಖ ಮುಖಂಡರಲ್ಲೊಬ್ಬರಾಗಿ ಪ್ರಭಾವ ಹೊಂದಿರುವ ಉದ್ಯಮಿಯೂ ಆಗಿರುವ ವಿಜಯ ಸಂಕೇಶ್ವರ ಬಿಜೆಪಿಗೆ ಬೆಂಬಲಿಸುವಂತೆ ಕರೆ ನೀಡಿದ್ದಾರೆ.
ಉದ್ಯಮಿ ವಿಜಯ ಸಂಕೇಶ್ವರ್ ಜೊತೆ ಹುಬ್ಬಳ್ಳಿಯಲ್ಲಿ ಕೈಗಾರಿಕೋದ್ಯಮಿಗಳು ಸಭೆ ನಡೆಸಿ ಬಿಜೆಪಿ ಅಭ್ಯರ್ಥಿ ಬೆಂಬಲಿಸುವಂತೆ ಪ್ರಲ್ಹಾದ್ ಜೋಶಿ ಮನವಿ ಮಾಡಿದ್ದಾರೆ. ಸಭೆಯಲ್ಲಿ ಮಾತನಾಡಿದ ವಿಜಯ ಸಂಕೇಶ್ವರ ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಿಸಿ ಮೋದಿಯವರಿಗೆ ಇನ್ನೂ ಹೆಚ್ಚಿನ ಶಕ್ತಿ ನೀಡುವಲ್ಲಿ ಎಲ್ಲರು ಕೈ ಜೋಡಿಸಬೇಕು ಎಂದು ಮನವಿ ಮಾಡಿದ್ದಾರೆ.

ಹುಬ್ಬಳ್ಳಿ ಮಾತ್ರವಲ್ಲ ರಾಜ್ಯದ ಎಲ್ಲಾ ಜನರಲ್ಲಿ ನಾನು ಕೇಳಿಕೊಳ್ಳುತ್ತೇನೆ. ದೇಶ ಕಟ್ಟುವ ಕಾರ್ಯದಲ್ಲಿ ಯಾರೂ ಮನೆಯಲ್ಲಿ ಕುಳಿತುಕೊಳ್ಳಬಾರದು. ಎಲ್ಲರೂ ಬಂದು ಮತ ಹಾಕಿ. ಬಿಜೆಪಿ ಬೆಂಬಲಿಸಿ, ಮೋದಿ ಅವರ ಕೈ ಇನ್ನಷ್ಟು ಬಲಪಡಿಸಿ ಎಂದು ವಿಜಯ ಸಂಕೇಶ್ವರ ಹೇಳಿದ್ದಾರೆ.
ಹುಬ್ಬಳ್ಳಿ ಸೆಂಟ್ರಲ್ ನಲ್ಲಿ ತಮ್ಮ ಸಮುದಾಯದ ಮತಗಳು ನನ್ನ ಜೊತೆ ಬರಲಿದ್ದು, ಈ ನಿಟ್ಟಿನಲ್ಲಿ ಸಮುದಾಯದ ಮುಖಂಡರು ನನ್ನ ಪರ ಕೆಲಸ ಮಾಡಲಿದ್ದಾರೆ ಎಂಬ ವಿಶ್ವಾಸದಲ್ಲಿ ಜಗದೀಶ್ ಶೆಟ್ಟರ್ ಇದ್ದಾರೆ. ಆದರೆ, ಸಮುದಾಯದ ಮುಖಂಡರಲ್ಲಿ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರಷ್ಟೇ ಪ್ರಭಾವ ಹೊಂದಿರುವ ಸಂಕೇಶ್ವರ ಬಿಜೆಪಿ ಜೊತೆ ನಿಂತಿದ್ದಾರೆ. ಲಿಂಗಾಯತ ಪ್ರಭಾವಿ ಮಠಗಳ ಸ್ವಾಮೀಜಿಗಳ ಜೊತೆಯೂ ಉತ್ತಮ ಸಂಪರ್ಕ ಹೊಂದಿರುವ ವಿಜಯ ಸಂಕೇಶ್ವರ್, ಹುಬ್ಬಳ್ಳಿ ಸೆಂಟ್ರಲ್ ಕ್ಷೇತ್ರದಲ್ಲಿ ಬಿಜೆಪಿಗೆ ಡ್ಯಾಮೇಜ್ ಕಂಟ್ರೋಲರ್ ಆಗಿ ಕಾಣಿಸುತ್ತಿದ್ದಾರೆ.
ಇತ್ತ, ಸಭೆ ಬಳಿಕ ಸಚಿವ ಪ್ರಲ್ಹಾದ್ ಜೋಶಿ, ಬಿಜೆಪಿ ಅಭ್ಯರ್ಥಿ ಮಹೇಶ್ ಟೆಂಗಿನಕಾಯಿ ಪರ ಕಾಲ್ನಡಿಗೆ ಮೂಲಕ ಚುನಾವಣಾ ಪ್ರಚಾರ ನಡೆಸಿದ್ದಾರೆ. ಮನೆ ಮನೆಗೂ ತೆರಳಿ ಬಿಜೆಪಿಗೆ ಮತ ಚಲಾಯಿಸುವಂತೆ ಜನರಲ್ಲಿ ಮನವಿ ಮಾಡಿದ್ದಾರೆ. ನಿನ್ನೆಯಷ್ಟೇ ಹಾವೇರಿಯ ಶಿಗ್ಗಾಂವಿ ಸಿಎಂ ಬಸವರಾಜ ಬೊಮ್ಮಾಯಿ ಪರ ಪ್ರಲ್ಹಾದ್ ಜೋಶಿ ಮತಬೇಟೆ ನಡೆಸಿ ಗಮನ ಸೆಳೆದಿದ್ದರು.












Click it and Unblock the Notifications