ಮೋದಿಗೆ ಬರೀ ಮುಸ್ಲಿಂ ಹೆಂಡತಿಯರದ್ದೇ ಚಿಂತೆ: ಮತ್ತೆ ಮಾತು ಹರಿಯಬಿಟ್ಟ ಸಿಎಂ ಇಬ್ರಾಹಿಂ
ಹುಬ್ಬಳ್ಳಿ, ನ 2: ಸಾರ್ವಜನಿಕ ಸಭೆಯಿರಲಿ, ಪತ್ರಿಕಾಗೋಷ್ಠಿಯಿರಲಿ ಗಂಭೀರವಾಗಿ ಮಾತನಾಡಿದ ಉದಾಹರಣೆಯೇ ಕಮ್ಮಿಯಂತಿರುವ ಹಿನ್ನಲೆಯುಳ್ಳ ಕಾಂಗ್ರೆಸ್ ಮುಖಂಡ ಸಿ ಎಂ ಇಬ್ರಾಹಿಂ, ಶುಕ್ರವಾರ ಮತ್ತೊಂದು ವಿವಾದಕಾರಿ ಹೇಳಿಕೆಯನ್ನು ನೀಡಿದ್ದಾರೆ.
ಕೆಲವು ದಿನಗಳ ಹಿಂದೆ 'ಸಿದ್ದರಾಮಯ್ಯನವರಿಗೆ ಜನರ ಚಿಂತೆ, ಯಡಿಯೂರಪ್ಪನಿಗೆ ಶೋಭಕ್ಕನ ಚಿಂತೆ' ಎಂದು ಮಾತು ಹರಿಯಬಿಟ್ಟಿದ್ದ ಇಬ್ರಾಹಿಂ, ಈಗ ಪ್ರಧಾನಮಂತ್ರಿ ನರೇಂದ್ರ ಮೋದಿಯ ಬಗ್ಗೆ ಕೀಳುಮಟ್ಟದ ಮಾತನ್ನಾಡಿದ್ದಾರೆ.
ರಾಮ ಮಂದಿರ ಸಮಸ್ಯೆಯನ್ನು ಬಗೆಹರಿಸುವ ಇಚ್ಚೆ ಬಿಜೆಪಿಗೆ ಇಲ್ಲ. ಈ ವಿಷಯ ಜೀವಂತವಾಗಿರಬೇಕೆಂದು ಬಿಜೆಪಿ ಬಯಸುತ್ತದೆ. ಮೋದಿ ಸಾಹೇಬ್ರಿಗೆ ಮುಸ್ಲಿಂ ಹೆಂಡತಿಯರ ಬಗ್ಗೆ ಇರುವ ಚಿಂತೆ ರಾಮ ಮಂದಿರದ ಬಗ್ಗೆ ಇಲ್ಲ ಎಂದು ಇಬ್ರಾಹಿಂ ವ್ಯಂಗ್ಯವಾಡಿದ್ದಾರೆ.

ಹುಬ್ಬಳ್ಳಿಯ ಈದ್ಗಾ ಮೈದಾನದ ವಿಚಾರವನ್ನು ಇಟ್ಟುಕೊಂಡು ರಾಜಕೀಯ ಮಾಡಿದ್ದಾಯಿತು. ಈಗ ರಾಮ ಮಂದಿರದ ಸರದಿ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತೆ ರಾಮ ಮಂದಿರದ ವಿಚಾರವನ್ನು ಕೆದಕಲಿದೆ ಎಂದು ಇಬ್ರಾಹಿಂ ಲೇವಡಿ ಮಾಡಿದ್ದಾರೆ.
ಉತ್ತರಪ್ರದೇಶದಲ್ಲಿ ಗೋಪೂಜೆ ಮಾಡುವ ಬಿಜೆಪಿಯವರು ಗೋವಾದಲ್ಲಿ ಏನು ಮಾಡುತ್ತಿದ್ದಾರೆ ಎನ್ನುವುದನ್ನು ಅರಿಯದ ಮೂರ್ಖರು ಇಲ್ಲಿ ಯಾರೂ ಇಲ್ಲ. ಜನರನ್ನು ಇನ್ನೂ ಮಂಗ್ಯಾ ಮಾಡುವುದನ್ನು ಬಿಜೆಪಿ ಬಿಡಲಿ ಎಂದು ಇಬ್ರಾಹಿಂ ಹೇಳಿದ್ದಾರೆ.
ಉಪಚುನಾವಣೆಯ ಎಲ್ಲಾ ಐದು ಕ್ಷೇತ್ರಗಳನ್ನು ಮತ್ತು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ ಎಲ್ಲಾ 28ಕ್ಷೇತ್ರಗಳಲ್ಲಿ ಜೆಡಿಎಸ್-ಕಾಂಗ್ರೆಸ್ ಅಭ್ಯರ್ಥಿಗಳು ಗೆಲ್ಲುವುದು ನಿಶ್ಚಿತ ಎಂದು ಇಬ್ರಾಹಿಂ ಭರವಸೆಯ ಮಾತನ್ನಾಡಿದ್ದಾರೆ.












Click it and Unblock the Notifications