ಬೀದಿ ನಾಯಿಗಳ ಕಾಟಕ್ಕೆ ಬೆಚ್ಚಿಬಿದ್ದ ವಾಣಿಜ್ಯ ನಗರಿ ಹುಬ್ಬಳ್ಳಿಯ ಜನ
ಹುಬ್ಬಳ್ಳಿ, ನವೆಂಬರ್, 26: ನಗರದೆಲ್ಲೆಡೆ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಜನಸಾಮಾನ್ಯರು ಒಬ್ಬೊಂಟಿಯಾಗಿ ಓಡಾಡುವುದು ಕಷ್ಟಕರವಾಗಿದೆ. ಬೀದಿಗಳಲ್ಲಿ ತಿರುಗಾಡುತ್ತಿರುವ ಬೀದಿ ನಾಯಿಗಳ ಹಿಂಡು ವಾಹನ ಸವಾರರ ಮೇಲೆ ದಾಳಿ ಮಾಡುತ್ತವೆ. ಕೆಲ ನಾಯಿಗಳು ಬೈಕ್, ಕಾರುಗಳ ಹಿಂದೆ ಓಡಿ ಬರುತ್ತಿರುವ ಪರಿಣಾಮ ವಾಹನ ಸವಾರರಿಗೆ ನಡುಕ ಶುರುವಾಗಿದೆ. ಬೀದಿ ನಾಯಿಗಳ ಹಾವಳಿಯಿಂದ ರಸ್ತೆಯಲ್ಲಿ ಚಿಕ್ಕ ಮಕ್ಕಳು, ವಯೋವೃದ್ಧರು ಸಂಚಾರ ಮಾಡಲು ಹಿಂದೇಟು ಹಾಕುವಂತಾಗಿದೆ. ರಾತ್ರಿ ವೇಳೆ ವಾರ್ಡ್, ಕಾಲೊನಿ ನಿವಾಸಿಗಳ ನಿದ್ದೆಗೆಡಿಸುತ್ತಿರುವ ಬಿಡಾಡಿ ನಾಯಿಗಳ ಉಪಟಳ ಹೆಚ್ಚಾಗಿದೆ.
ನಗರದ ಕೊಪ್ಪಿಕರ ರಸ್ತೆಯಲ್ಲಿ ಇಬ್ಬರು ಯುವಕರ ಮೇಲೆ ಬೀದಿ ನಾಯಿಗಳು ದಾಳಿ ಮಾಡಿವೆ. ಬೀದಿ ನಾಯಿ ದಾಳಿ ಮಾಡುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ನಿನ್ನೆ ಬೆಳಗಿನ ಜಾವ ಇಬ್ಬರು ಯುವಕರನ್ನು ಬೆನ್ನುಹತ್ತಿ ದಾಳಿ ಮಾಡಿದೆ. ನಾಯಿ ದಾಳಿಯಿಂದ ಬೆಚ್ಚಿ ಬಿದ್ದ ಯವಕರು ತಪ್ಪಿಸಿಕೊಳ್ಳಲು ಯತ್ನಿಸಿದ್ದೂ ಕೂಡ ದಾಳಿ ಮಾಡಿ ಕಚ್ಚಿದೆ. ನಾಯಿಯಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ಯುವಕರು ಕೆಳಗೆ ಬಿದ್ದಿರುವ ವಿಡಿಯೋ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ವಾರದಲ್ಲಿ ಒಂದು ಕಡೆಯಾದರೂ ನಾಯಿಗಳ ಉಪಟಳದಿಂದ ನಾಗರಿಕರು ಬೇಸತ್ತಿದ್ದಾರೆ. ಇನ್ನು ನಾಯಿ ಕಡಿತದಿಂದ ಗಾಯಗೊಂಡವರು ಇನ್ನು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬೀದಿ ನಾಯಿಗಳ ಹಾವಳಿಗೆ ಹುಬ್ಬಳ್ಳಿ ಜನ ತತ್ತರ
ನಾಯಿಗಳ ದಾಳಿ ನಡೆದಾಗ ಮಾತ್ರ ದಿಢೀರ್ ಕ್ರಮದ ಭರವಸೆಯನ್ನು ಮಹಾನಗರ ಪಾಲಿಕೆ ನೀಡುತ್ತದೆ. ನಂತರ ಯಾವುದೇ ಸೂಕ್ತ ಕ್ರಮ ಜರುಗಿಸದೆ ಸುಮ್ಮನಾಗಿ ಬಿಡುತ್ತಾರೆ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗುಂಪು ಗುಂಪಾಗಿ ಸುತ್ತಾಡುವ ನಾಯಿಗಳು ದಾರಿಯಲ್ಲಿ ಸಂಚರಿಸುವ ವಾಹನ ಸವಾರರನ್ನು ಅಟ್ಟಿಸಿಕೊಂಡು ಹೋಗುತ್ತವೆ. ಕೆಲವು ವೇಳೆ ಶಾಲಾ ಮಕ್ಕಳ ಮೇಲೂ ದಾಳಿ ಮಾಡಿವೆ. ಒಂದು ನಾಯಿ ಬೊಗಳಿದರೆ ಸಾಕು ಅದರ ಹಿಂದೆಯೇ ಮತ್ತಷ್ಟು ಸೇರಿಕೊಳ್ಳುತ್ತವೆ. ಒಂದರ ಹಿಂದೆ ಒಂದರಂತೆ ಸುತ್ತುವರಿದು ಜನರ ಮೇಲೆ ಎಗುತ್ತಲೇ ಇವೆ. ಇನ್ನು ನಾಯಿ ದಾಳಿಯಿಂದ ತಪ್ಪಿಪಿಕೊಳ್ಳಲು ಹೋದ ದ್ವಿಚಕ್ರ ವಾಹನ ಸವಾರರು ಕೊನೆಗೆ ಬಿದ್ದು ಆಸ್ಪತ್ರೆ ಸೇರಿರುವ ಉದಾಹರಣೆಗಳೇ ಇವೆ.

ಬೀದಿ ನಾಯಿಗಳ ಸೆರೆಗೆ ಮುಂದಾದ ಪಾಲಿಕೆ
ಈ ಕುರಿತು ಧ್ವನಿ ಎತ್ತಿದ ಕೂಡಲೇ ಎಚ್ಚೆತ್ತ ಪಾಲಿಕೆಯವರು ಶ್ವಾನ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಕೇಶ್ವಾಪುರ, ಹಳೆ ಹುಬ್ಬಳ್ಳಿ ಮತ್ತಿತರ ಕಡೆ ಕಾರ್ಯಾಚರಣೆಗೆ ಮುಂದಾಗಿದ್ದು, ಬೀದಿನಾಯಿಗಳನ್ನು ಸೆರೆ ಹಿಡಿದಿದ್ದಾರೆ. ಸಂತಾನ ಹರಣ ಚಿಕಿತ್ಸೆಗೆ ನಗರದ ಹೊರ ವಲಯಕ್ಕೆ ತೆಗೆದುಕೊಂಡು ಹೋಗಿ ಬಿಟ್ಟು ಬಂದಿದ್ದಾರೆ. ಕೊಪ್ಪಿಕರ ರಸ್ತೆಯಲ್ಲಿ ಜನರ ಮೇಲೆ ಡೆಡ್ಲಿ ಅಟ್ಯಾಕ್ ಮಾಡಿದ್ದ ನಾಯಿಗಳು ಸಾರ್ವಜನಿಕರಲ್ಲಿ ಭೀತಿ ಮೂಡಿಸಿದ್ದು, ಇದರಿಂದ ನಗರ ನಿವಾಸಿಗಳು ಪಾಲಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಸಾರ್ವಜನಿಕರ ಆಕ್ರೋಶಕ್ಕೆ ಕೊನೆಗೂ ಮಣಿದ ಪಾಲಿಕೆ, ನಾಯಿಗಳ ಸೆರೆ ಕಾರ್ಯಾಚರಣೆಗೆ ಮುಂದಾಗಿದೆ. ನಾವು ಹೇಳುವ ಮೊದಲು ಯಾವುದೇ ಕ್ರಮಗಳನ್ನು ತೆಗೆದುಕೊಳ್ಳುವುದಿಲ್ಲ ಎಂದು ನಗರ ವಾಸಿಗಳು ಪಾಲಿಕೆ ವಿರುದ್ಧ ಆರೋಪ ಮಾಡಿದ್ದಾರೆ.

ಬೀದಿ ನಾಯಿಗಳಿಗೆ ಬಲಿಯಾದ ಪುಟ್ಟ ಬಾಲಕ
ಈ ಹಿಂದೆಯೂ ಸಹ ಬೀದಿ ನಾಯಿಗಳ ಹಾವಳಿಯಿಂದ ಚಿತ್ರದುರ್ಗ ನಗರದ ಬಹುತೇಕ ಬಡಾವಣೆಯ ಜನರು ಹೆದರಿ ಮನೆಯಿಂದ ಹೊರಬರುವುದಕ್ಕೂ ಚಿಂತಿಸುವಂತಹ ವಾತಾವರಣ ನಿರ್ಮಾಣವಾಗಿತ್ತು. ಚಿತ್ರದುರ್ಗ ನಗರದ, ಐಯುಡಿಪಿ, ಸಾದಿಕ್ನಗರ, ಕೆಳಗೋಟೆ, ದೊಡ್ಡಪೇಟೆ, ಸರಸ್ವತಿ ಪುರಂ ಸೇರಿದಂತೆ ಇನ್ನಿತರ ಬಡಾವಣೆಯ ಜನರು ರಾತ್ರಿ ವೇಳೆ ತಮ್ಮ ಮನೆಗಳಿಗೆ ಹೋಗುವುದಕ್ಕೂ ಆತಂಕ ಪಡುವಂತಾಗಿತ್ತು. ರಸ್ತೆ ಮೇಲೆ ಬೈಕ್ ಹಾಗು ಕಾರ್ಗಳಲ್ಲಿ ಜನರು ಹೋದರೆ ಅವರ ಮೇಳು ಸಹ ಬೀದಿ ನಾಯಿಗಳು ದಾಳಿ ಮಾಡುತ್ತಿದ್ದವು.

ಅಧಿಕಾರಿಗಳಿಗೆ ಜನರಿಂದ ತರಾಟೆ
ಎಷ್ಟೇ ಬಾರಿ ಜನರು ಈ ಕುರಿತು ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಕೂಡ ಯಾವುದೇ ಪ್ರಯೋಜನ ಆಗಿರಲಿಲ್ಲ. ಇನ್ನು ನಗರದ ಬಳಿ ಇರುವ ಮೆದೇಹಳ್ಳಿ ವ್ಯಾಪ್ತಿಗೆ ಬರುವ ಬಿಳಿಕಲ್ಲು ನಾಯಕರಹಟ್ಟಿ ಬಡಾವಣೆಯಲ್ಲಿ ಒಂದೂವರೆ ವರ್ಷರದ ಬಾಲಕ ಯಶವಂತ್ ಎಂಬಾತನಿಗೆ ಬೀದಿ ನಾಯಿ ಕಡಿದಿತ್ತು. ಪರಿಣಾಮ ಎಷ್ಟು ಆಸ್ಪತ್ರೆಗಳನ್ನು ಅಲೆದರೂ ಕೂಡ ಕೊನೆಗೂ ಚಿಕಿತ್ಸ ಫಲಿಸದೇ ಮಗು ಕೊಲೆಯುಸಿರು ಎಳದ ದುರ್ಘಟನೆ ಒಂದು ಸಂಭವಿಸಿತ್ತು. ಬೀದಿ ನಾಯಿಗಳ ಹಾವಳಿ ನೆನ್ನೆ ಮೊನ್ನೆಯದಲ್ಲ, ಇದು ಹಿಂದಿನಿಂದಲೂ ಸಹ ನಗರದ ಪ್ರಮುಖ ಬಡಾವಣೆಗಳಲ್ಲಿ ನಡೆಯುತ್ತಲೇ ಇದೆ. ಈ ಕುರಿತು ಸ್ಥಳೀಯರು ಅನೇಕ ಬಾರಿ ನಗರಸಭೆ ಇಲಾಖೆಗೆ ಮನವಿ ಸಲ್ಲಿಸಿದ್ದರು. ಕೂಡಲೇ ಬೀದಿ ನಾಯಿಗಳನ್ನು ಸೆರೆಹಿಡಿದು ನಮಗೆ ನೆಮ್ಮದಿ ಕೊಡಿಸಿ ಎಂದು ಅಳಲು ತೋಡಿಕೊಂಡಿದ್ದರು. ಆದರೂ ಕೂಡ ಅಧಿಕಾರಿಗಳು ಮಾತ್ರ ಕೇರ್ ಮಡಿರಲಿಲ್ಲ. ಅಧಿಕಾರಿಗಳ ಬೇಜವಾಬ್ದಾರಿ ನಡೆಯಿಂದ ಇಂತಹ ಅನೇಕ ಘಟನೆಗಳಿಗೆ ಎಡೆಮಾಡಿಕೊಟ್ಟಂತಾಗಿತ್ತು. ಇನ್ನು ಗುಂಪು ಗುಂಪಾಗಿ ಬರುವ ಬೀದಿ ನಾಯಿಗಳು ಯಾವಾಗ ಜನರ ಮೇಲೆ ಎರಗುತ್ತವೆಯೋ ಎನ್ನುವ ಆತಂಕದ ವಾತಾವರಣ ನಿರ್ಮಾಣವಾಗಿತ್ತು.












Click it and Unblock the Notifications