ಹುಬ್ಬಳ್ಳಿಯಲ್ಲಿ ಮುಂಜಾನೆ ಮಂಜಿನ ಕಾಟ, ಮಧ್ಯಾಹ್ನ ಬಿಸಿಲಿನ ಕಾಟ
ಇನ್ನೂ ಡಿಸೆಂಬರ್ ಬಂದಿಲ್ಲ ಆದರೂ ಹುಬ್ಬಳ್ಳಿಯಲ್ಲಿ ಮೈಕೊರೆಯುವ ಚಳಿ ಆರಮಭವಾಗಿದೆ. ಇನ್ನು ಮಧ್ಯಾಹ್ನದ ವೇಳೆ ತಲೆ ಸುಡುವ ಬಿಸಿಲು ಆರಂಭವಾಗುತ್ತದೆ. ಇದಿರಿಂದ ಹುಬ್ಬಳ್ಳಿಯ ಜನತೆ ತತ್ತರಿಸಿದ್ದಾರೆ.
ಹುಬ್ಬಳ್ಳಿ, ನವೆಂಬರ್, 18 : ಅಂತೂ ಇಂತೂ ಕಳೆದೆರಡು ದಿನಗಳ ಹಿಂದೆ ಮಳೆ ಭಾಗ್ಯ ಕಂಡಿದ್ದ ಹುಬ್ಬಳ್ಳಿಗರಿಗೆ ಈಗ ಮೈಕೊರೆಯುವ ಚಳಿಗಾಲದ ಸವಿ ಅನುಭವಿಸುವ ಸಮಯ ಬಂದಿದೆ.
ಹೌದು, ಮಧ್ಯಾಹ್ನ ಮಾತ್ರ ಮೈ ಚುರುಗುಟ್ಟುವ ಬಿಸಿಲು, ಸಂಜೆಯಾಗುತ್ತಿದ್ದಂತೆಯೇ ಮೈ ಥರಗುಟ್ಟುವ ಚಳಿ ಶುರುವಾವಾಗಿದೆ. ಮಧ್ಯಾಹ್ನದ ವೇಳೆಗೆ ಮಾತ್ರ ಗರಿಷ್ಠ ತಾಪಮಾನ ಸರಾಸರಿ 36 ಡಿಗ್ರಿ ಸೆಲ್ಸಿಯಸ್ ಇರುತ್ತದೆ. ಸಂಜೆ ಆರಂಭವಾಗುವ ಶೀತಗಾಳಿ ಬೆಳಿಗ್ಗೆ 7 ಗಂಟೆಯವರೆಗೂ ಮುಂದುವರಿಯುತ್ತದೆ. ನಸುಕಿ-ನಲ್ಲಿ ಮಂಜು ಕವಿದ ವಾತಾವರಣ ಇರುತ್ತದೆ.

ಬೆಳಗಿನ ಹೊತ್ತು 16 ಡಿಗ್ರಿ ಸೆಲ್ಸಿಯಸ್ ವರೆಗೂ ಕನಿಷ್ಠ ತಾಪಮಾನವಿರುವುದರಿಂದ ಬೆಳಗ್ಗೆ 5 ಕ್ಕೆ ವಾಕಿಂಗ್ ತೆರಳುತ್ತಿರುವವರ ಸಂಖ್ಯೆಯಲ್ಲಿ ಗಣನೀಯವಾಗಿ ಇಳಿಮುಖವಾಗಿದೆ. ಬೆಳಗಿನ ಸಮಯಕ್ಕಿಂತ ಸಂಜೆಯ ಹೊತ್ತೇ ವಾಕಿಂಗ್ ಮಾಡುತ್ತಿದ್ದಾರೆ.
ಚಿಕ್ಕಮಕ್ಕಳಂತೂ ನೆಗಡಿ, ಕೆಮ್ಮು ಹಾಗೂ ಕಫ್ ಗಟ್ಟಿಯಿಂದಾಗಿ ಹಲವಾರು ಚಿಕ್ಕಮಕ್ಕಳ ತಜ್ಞ ವೈದ್ಯರಿಗೆ ಸೀಜನ್ ಶುರುವಾದಂತಾಗಿದೆ. ಈ ಚಳಿಯಿಂದ ಮಕ್ಕಳು-ವೃದ್ಧರು ಹಾಗೂ ರೋಗಿಗಳು ಹೆಚ್ಚಿನ ತೊಂದರೆಗೀಡಾಗುತ್ತಿದ್ದಾರೆ.
'ವಿಪರೀತ ಚಳಿಯಿಂದ ಮಕ್ಕಳಲ್ಲಿ ಕಫದ ತೊಂದರೆ ಹೆಚ್ಚುತ್ತಿದೆ. ಪಾಲಕರು ತಮ್ಮ ಮಕ್ಕಳಿಗೆ ಉಣ್ಣೆ ಬಟ್ಟೆ ತೊಡಿಸಿ, ಆದಷ್ಟು ಬೆಚ್ಚಗೆ ಇಟ್ಟುಕೊಳ್ಳಬೇಕು'ಹೊಸೂರಿನ ಡಾ. ವಿಜಯಕುಮಾರ್ ಅವರ ಸಲಹೆ.

ಇನ್ನು ಕೆಲವು ಶಾಲೆಗಳಲ್ಲಿ ಮಕ್ಕಳು ಸ್ವೇಟರ್ ಧರಿಸಿಕೊಂಡು ಬನ್ನಿ ಎಂದು ಹೇಳಿ, ಇಂಥಹದೇ ಅಂಗಡಿಯಲ್ಲಿ ಇಂಥಹದೇ ಬಣ್ಣದ ಸ್ವೇಟರ್ ತೆಗೆದುಕೊಂಡು ಬನ್ನಿ ಎಂದು ಹೇಳುತ್ತಿರುವುದು ಕೆಲ ಪಾಲಕರಿಗೆ ಆತಂಕ ಮೂಡಿಸಿದೆ.
ಮೊದಲೇ ಆರ್ಥಿಕ ಸ್ಥಿತಿಯಲ್ಲಿ ಏರುಪೇರಾಗಿದೆ ಇಂಥಹದರಲ್ಲಿ ಈ ಖಾಸಗಿ ಶಾಲೆಗಳು ಈ ರೀತಿ ಹೇಳಿದರೆ ಏನು ಮಾಡುವುದು ಎನ್ನುತ್ತಿದ್ದಾರೆ ಪೋಷಕರು. ಮಲೆನಾಡಿನ ಸೆರಗಿನಲ್ಲಿ ಹುಬ್ಬಳ್ಳಿಯ ವಾತಾವರಣ ತುಂಬಾ ಹದವಾಗಿರುತ್ತದೆ. ಬೇಸಿಗೆಯಲ್ಲಿ ಅಷ್ಟೇ ಚಳಿಗಾಲದಲ್ಲಿಯೂ ಅಷ್ಟೇ.
ಆದರೆ ಬಯಲುಸೀಮೆಯ ಜನಕ್ಕೆ ಚಳಿಯನ್ನು ತಡೆದುಕೊಳ್ಳುವ ಶಕ್ತಿ ಇಲ್ಲದಿರುವುದರಿಂದ ಅಂಥಹವರು ಹುಬ್ಬಳ್ಳಿಗೆ ಬಂದರೆ ಏನು ಚಳಿ ಐತ್ರೀಪಾ ಇಲ್ಲಿ ಎಂದು ಗಡಗಡ ನಡುಗಲಾರಂಭಿಸಿದ್ದಾರೆ.
ಇನ್ನು ಕೆಲವೊಂದು ರಸ್ತೆ ಬದಿಯ ತಿಂಡಿ, ತಿನಿಸುಗಳ ಅಂಗಡಿಯಲ್ಲಿ ಮೊದಲು ಸಂಜೆಯಾಗುತ್ತಿದ್ದಂತೆಯೇ ಬಾಯಿ ರುಚಿಗೆ ಜನರು ಬಂದು ತಮಗಿಷ್ಟದಾದ ಮಿರ್ಚಿ, ಭಜ್ಜಿ, ಬೋಂಡಾ, ಗಿರಮಿಟ್, ಪಾನಿಪುರಿ, ಸೇವಪುರಿ ತಿನ್ನುತ್ತಿದ್ದರು. ಆದರೆ ಈಗ ನೋಟು ಬದಲಾವಣೆಯ ಗದ್ದಲದಲ್ಲಿ ಯಾವ ಗಿರಾಕಿಯೂ ಬರುತ್ತಿಲ್ಲವೆಂದು ಗಿರಮಿಟ್ ವ್ಯಾಪಾರಿ ಹಾಲಸ್ವಾಮಿ ಮಾತು.
ಹತ್ತಿರದ ಬೆಳಗಾವಿ ಮತ್ತು ಧಾರವಾಡಗಳಲ್ಲೂ ಚಳಿಯ ಪ್ರಭಾವ ಹೆಚ್ಚಾಗಿದೆ. ಈಗಲೇ 16 ಡಿಗ್ರಿ ಸೆಲ್ಸಿಯಸ್ ಗೆ ಹವಾಮಾನ ಬಂದಿದ್ದು ನೋಡಿದರೆ ಇನ್ನು ಡಿಸೆಂಬರ್ ತಿಂಗಳಲ್ಲಿ ನಮ್ಮ ಗತಿ ಏನು ಎಂಬ ಆತಂಕ ಜನರಲ್ಲಿ ಮೂಡಿಸಿದೆ.
ಒಟ್ಟಿನಲ್ಲಿ ಎಲ್ಲ ಕಾಲಗಳಿಗಿಂತ ಹೆಚ್ಚಿನ ಜನ ಮನೆ ಹಿಡಿದು ಕುಳಿತುಕೊಳ್ಳುವಂತೆ ಮಾಡುವ ಚಳಿಗಾಲವನ್ನೇ ಇಷ್ಟಪಡುವುದರಿಂದ ಜನಸಾಮಾನ್ಯರಿಗೆ ಒಂದು ರೀತಿ ವರವಾದರೆ, ನೆಗಡಿ, ಕೆಮ್ಮು, ಶೀತಜ್ವರ ಬಂದರೆ ಶಾಪವಾದಂತಾಗುತ್ತದೆ.ಯಾವುದಕ್ಕೂ ಚಳಿಗಾಲದ ಸಿದ್ಧತೆಯನ್ನು ಈಗಲೇ ಮಾಡಿಕೊಳ್ಳುವುದು ಒಳ್ಳೆಯದು.












Click it and Unblock the Notifications