ಲಾಕ್ ಡೌನ್ ಅಂತ್ಯ; ಎಲ್ಲಾ ಬಸ್ ಸಂಚಾರ ಆರಂಭಿಸಿದ NWKRTC
ಹುಬ್ಬಳ್ಳಿ, ಅಕ್ಟೋಬರ್ 16 : ಕೋವಿಡ್ ಲಾಕ್ ಡೌನ್ ಅಂತ್ಯಗೊಂಡಿದ್ದು ಅಂತರರಾಜ್ಯ ಸೇರಿದಂತೆ ಎಲ್ಲಾ ಬಸ್ಗಳ ಸಂಚಾರವನ್ನು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯು ಆರಂಭಿಸಿದೆ. ಜನರು ಸರ್ಕಾರಿ ಬಸ್ನಲ್ಲಿ ಪ್ರಯಾಣ ಮಾಡಬೇಕು ಎಂದು ಮನವಿ ಮಾಡಿದೆ.
ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವ್ಯಾಪ್ತಿಗೆ 6 ಜಿಲ್ಲೆಗಳು, 9 ವಿಭಾಗಗಳು, 51 ಘಟಕಗಳು ಬರುತ್ತವೆ. ಸುಮಾರು 3754 ಬಸ್ಗಳನ್ನು ಸಂಸ್ಥೆ ಒಳಗೊಂಡಿದ್ದು, ರಾಜ್ಯ ಮತ್ತು ಅಂತರರಾಜ್ಯಗಳ ನಡುವೆ ಬಸ್ ಸಂಚಾರ ನಡೆಸುತ್ತದೆ.
ಸಾರಿಗೆ ಸಂಸ್ಥೆಯ ಬಸ್ಗಳ ಮೇಲೆ ಗ್ರಾಮೀಣ ಭಾಗದ ವಿದ್ಯಾರ್ಥಿಗಳು, ಸಾಮಾನ್ಯ ಜನರು, ವಯೋವೃದ್ದರು, ಮಹಿಳೆಯರು ವಿಶೇಷವಾಗಿ ಬಡವರ್ಗದ ಜನರು ಅತೀವ ವಿಶ್ವಾಸವನ್ನು ಹೊಂದಿದ್ದಾರೆ.
ಕೋವಿಡ್ ಹರಡದಂತೆ ತಡೆಯಲು ಮಾರ್ಚ್ನಲ್ಲಿ ಲಾಕ್ ಡೌನ್ ಘೋಷಣೆ ಮಾಡಿದ ಬಳಿಕ ಬಸ್ಗಳ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು. ಹಂತಹಂತವಾಗಿ ಬಸ್ ಸಂಚಾರ ಆರಂಭ ಮಾಡಲಾಗಿದ್ದು, ಎಲ್ಲಾ ಬಸ್ ಸೇವೆಗಳನ್ನು ಪುನಃ ಆರಂಭಿಸಲಾಗಿದೆ.

ಎಲ್ಲಾ ಬಸ್ಗಳ ಸಂಚಾರ
ಮಾರ್ಚ್ನಲ್ಲಿ ಲಾಕ್ ಡೌನ್ ಘೋಷಣೆ ಮಾಡಿದ್ದು ಸಾರಿಗೆ ಸಂಸ್ಥೆಯ ಮೇಲೆ ಮಾರಕ ಪರಿಣಾಮ ಬೀರಿದೆ. ಪ್ರಸ್ತುತ ಎಲ್ಲಾ ಬಸ್ ಸೇವೆಗಳನ್ನು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಆರಂಭಿಸಿದ್ದು, ಜನರು ಸದುಪಯೋಗ ಮಾಡಿಕೊಳ್ಳಬೇಕು ಎಂದು ಕರೆ ನೀಡಲಾಗಿದೆ.

ಸಾಮಾಜಿಕ ಹೊಣೆಗಾರಿಕೆ
ಸಂಸ್ಥೆಯ ಜನರ ಅನುಕೂಲಕ್ಕಾಗಿ ವಿವಿಧ ಪ್ರೋತ್ಸಾಹದಾಯಕ ಕ್ರಮಗಳನ್ನು ಕೈಗೊಂಡಿದೆ. ಸಾಮಾಜಿಕ ಹೊಣೆಗಾರಿಕೆಯಿಂದ ವಿದ್ಯಾರ್ಥಿ ರಿಯಾಯತಿ ಪಾಸು, ಸ್ವಾತಂತ್ರ್ಯಯೋಧರ, ಹಿರಿಯ ನಾಗರಿಕರ ಅಂಗವಿಕಲ, ದೃಷ್ಟಿಮಾಂದ್ಯರ ಪಾಸುಗಳನ್ನು ವಿತರಣೆ ಮಾಡುತ್ತಿದೆ.

ಎಲ್ಲಾ ಆಸನಗಳು ಭರ್ತಿ
ಕೋವಿಡ್ ಮಾರ್ಗಸೂಚಿಯಂತೆ ಹಿಂದೆ ಬಸ್ನಲ್ಲಿ ಪ್ರಯಾಣಿಕರ ಆಸನಗಳಲ್ಲಿ ಕೇವಲ ಅರ್ಧದಷ್ಟು ಜನರು ಮಾತ್ರ ಪ್ರಯಾಣಿಸಲು ಅವಕಾಶ ನೀಡಲಾಗಿತ್ತು. ಪ್ರಸ್ತುತವಾಗಿ ಬಸ್ಸಿನಲ್ಲಿರುವ ಎಲ್ಲಾ ಪ್ರಯಾಣಿಕರ ಆಸನಗಳಲ್ಲಿ ಕುಳಿತುಕೊಳ್ಳಲು ಅನುಮತಿ ನೀಡಲಾಗಿದೆ. ಪ್ರಯಾಣಿಕರ ಸುರಕ್ಷತೆಗೆ ಅವಶ್ಯಕವಿರುವ ಎಲ್ಲಾ ಕ್ರಮಗಳನ್ನು ಸಂಸ್ಥೆ ಕೈಗೊಂಡಿದೆ.
Recommended Video

ಅಂತರರಾಜ್ಯ ಬಸ್ ಸಂಚಾರ
ಸಾರಿಗೆ ಸಂಸ್ಥೆಯು ಅಂತರಾಜ್ಯಗಳಾದ ಮಹಾರಾಷ್ಟ್ರ, ಗೋವಾ, ಆಂಧ್ರಪ್ರದೇಶ ಮತ್ತು ತೆಲಂಗಾಣಕ್ಕೂ ಬಸ್ ಸೇವೆಗಳನ್ನು ಆರಂಭಿಸಿದೆ. ಸಂಸ್ಥೆಯ ಬಸ್ಸುಗಳು ಸುರಕ್ಷಿತವಾಗಿವೆ ಪ್ರಯಾಣಿಕರು ಯಾವುದೇ ಆತಂಕವಿಲ್ಲದೇ ಸಂಚರಿಸಬಹುದು ಎಂದು ತಿಳಿಸಲಾಗಿದೆ.












Click it and Unblock the Notifications