ಪ್ರತಿಯೊಬ್ಬರಿಗೂ ಕಾನೂನು ಅರಿವು ಅಗತ್ಯ-ನ್ಯಾಯಾಧೀಶ ಚಿನ್ನಣ್ಣವರ್ ಆರ್.ಎಸ್.
ಹುಬ್ಬಳ್ಳಿ ನವೆಂಬರ್ 6: ಪ್ರತಿಯೊಬ್ಬರಿಗೂ ಕಾನೂನು ಅರಿವು ಅಗತ್ಯವಾಗಿದೆ. ಕಾನೂನುಗಳ ಬಗ್ಗೆ ತಿಳಿದುಕೊಳ್ಳಲು ಸಾರ್ವಜನಿಕರು ಮುಂದಾಗಬೇಕು ಎಂದು ತಾಲೂಕು ಕಾನೂನು ಸೇವಾ ಸಮಿತಿಯ ಅಧ್ಯಕ್ಷ ಹಾಗೂ ಪ್ರಧಾನ ಹಿರಿಯ ನ್ಯಾಯಾಧೀಶರಾದ ಚಿನ್ನಣ್ಣವರ್ ಆರ್.ಎಸ್. ಹೇಳಿದರು.
ಹುಬ್ಬಳ್ಳಿ ತಾಲೂಕಿನ ಕುಸುಗಲ್ ಗ್ರಾಮದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಕಂದಾಯ ಇಲಾಖೆ, ತಾಲೂಕು ಪಂಚಾಯತ, ಪೊಲೀಸ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ವಾರ್ತಾ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಮೆಗಾ ಕಾನೂನು ಅರಿವು ಶಿಬಿರವನ್ನು ಆಯೋಜಿಸಲಾಗಿತ್ತು.
ಪ್ರತಿಷ್ಠಿತ ಕಂಪನಿಗಳಲ್ಲಿ ಖಾಯಂ ಹುದ್ದೆ ಕೊಡಿಸುವುದಾಗಿ ವಂಚನೆ
ಈ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜೀವನಕ್ಕೆ ಅವಶ್ಯಕವಾಗಿರುವ ಕಾನೂನುಗಳ ಕುರಿತು ಮೊದಲು ತಿಳಿದುಕೊಳ್ಳಬೇಕು. ಕಾನೂನು ಅರಿವಿನಿಂದ ಸುಸಜ್ಜಿತ ಜೀವನ ನಡೆಸಬಹುದು. ಆಸ್ತಿ ಮಾರಾಟ ಮಾಡಲು ನೋಂದಣಿ ಅವಶ್ಯ ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ ಎಂದರು.
ಸಮಸ್ಯೆಗಳನ್ನು ಪರಿಹರಿಸಲು ಕಾನೂನು ನೆರವು ಸಹಾಯಕ
ಇನ್ನು ಮಹಿಳೆಯರು ಮತ್ತು ಮಕ್ಕಳ ಮೇಲೆ ದೌರ್ಜನ್ಯಗಳು ಆಗುತ್ತಿವೆ. ಈ ಕುರಿತು ಹಲವಾರು ಪ್ರಕರಣಗಳು ಇಂದು ಕೂಡ ನ್ಯಾಯಾಲಯಗಳಲ್ಲಿವೆ. ವರದಕ್ಷಿಣೆ ನಿರ್ಮೂಲನೆ ಮಾಡಬೇಕಾಗಿದೆ. ವರದಕ್ಷಿಣೆ ನಿಷೇಧ ಕಾಯ್ದೆಯ ಬಗ್ಗೆ ಅರಿತುಕೊಳ್ಳಬೇಕು. ಎಲ್ಲರು ಶಾಂತಿ, ಸಹಬಾಳ್ವೆಯಿಂದ ಜೀವನ ನಡೆಸಲು ಚಿಂತನೆ ಮಾಡಬೇಕಾಗಿದೆ. ಲೋಕ ಅದಾಲತ್ ಮೂಲಕ ಹಲವಾರು ಪ್ರಕರಣಗಳು ಇತ್ಯರ್ಥವಾಗಿವೆ. ರಾಜಿ ಸಂಧಾನದ ಮೂಲಕ ಬಗೆಹರಿಯದ ಪ್ರಕರಣಗಳನ್ನು ಬಗೆಹರಿಸಲಾಗಿದೆ. ಮನೆ ಬಾಗಿಲಿಗೆ ಕಾನೂನು ನೆರವು ನೀಡಲಾಗುತ್ತಿದೆ. ನಿಮ್ಮ ಸಮಸ್ಯೆಗಳನ್ನು ಪರಿಹರಿಸಲು ಕಾನೂನು ನೆರವು ಸಹಾಯಕವಾಗುವುದು. ಗ್ರಾಮದ ಸರ್ವತೋಮುಖ ಅಭಿವೃದ್ಧಿಗೆ ಎಲ್ಲರೂ ಮುಂದಾಗಬೇಕು ಎಂದು ಈ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು ಎಂದು ಹೇಳಿದರು.
ಉತ್ತಮ ಸಮಾಜ ನಿರ್ಮಾಣಕ್ಕೆ ಕಾನೂನು ಅವಶ್ಯಕ
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ವಕೀಲರಾದ ಸಿದ್ಧನಗೌಡ ಕೆಂಚನಗೌಡ ಅವರು ಮಾತನಾಡಿ, ಹುಟ್ಟಿನಿಂದ ಸಾವಿನವರೆಗೂ ಕಾನೂನು ಮುಖ್ಯ ಪಾತ್ರವನ್ನು ವಹಿಸುತ್ತದೆ. ಉತ್ತಮ ಸಮಾಜ ನಿರ್ಮಾಣಕ್ಕೆ ಕಾನೂನು ಅವಶ್ಯಕವಾಗಿದೆ. ಕಾನೂನು ಸಾಕ್ಷರತಾ ಶಿಬಿರದ ಮೂಲಕ ವಕೀಲರನ್ನು ನೇಮಕ ಮಾಡಿ ಕೊಡಲಾಗುತ್ತದೆ. ರಿಟ್ ಗಳ ಮೂಲಕ ಹೈಕೋರ್ಟ್, ಸುಪ್ರೀಂ ಕೋರ್ಟ್ ಮೂಲಕ ನ್ಯಾಯವನ್ನು ಪಡೆಯಬಹುದು ಎಂದು ಮೂಲಭೂತ ಹಕ್ಕುಗಳು ಮತ್ತು ಕರ್ತವ್ಯ ವಿಷಯದ ಕುರಿತು ತಮ್ಮ ಉಪನ್ಯಾಸದಲ್ಲಿ ತಿಳಿಸಿದರು.
ಪ್ರತಿಯೊಬ್ಬರು ಕಾನೂನು ನೆರವು ಪಡೆದುಕೊಳ್ಳಬೇಕು
ವಕೀಲರಾದ ಸಿದ್ಧನಗೌಡ ಪಾಟೀಲ್ ಅವರು ಮಾತನಾಡಿ, ವಿವಿಧ ಇಲಾಖೆಯ ಯೋಜನೆಗಳು ಸಾರ್ವಜನಿಕರಿಗೆ ದೊರೆಯಬೇಕು. ಜನರಲ್ಲಿ ಕಾನೂನು ಕುರಿತು ಅರಿವು ಮೂಡಿಸಲು ಇಂತಹ ಕಾರ್ಯಕ್ರಮ ಅವಶ್ಯಕವಾಗಿದೆ. ಕೌಟುಂಬಿಕ ಕಲಹ, ಹಣಕಾಸು, ಲೈಂಗಿಕ ದೌರ್ಜನ್ಯ ಇತರ ವ್ಯಾಜ್ಯಗಳ ಬಗ್ಗೆ ಕಾನೂನು ನೆರವು ಪಡೆಯಬಹುದಾಗಿರುತ್ತದೆ. ಪ್ರತಿಯೊಬ್ಬರೂ ಕಾನೂನು ನೆರವು ಕೇಂದ್ರದ ಸದುಪಯೋಗ ಪಡೆದುಕೊಳ್ಳಲು ಮುಂದಾಗಬೇಕು ಎಂದು ಹೇಳಿದರು.
ಹುಬ್ಬಳ್ಳಿಯಲ್ಲಿ ಕಾನೂನು ಅರಿವು ಶಿಬಿರ
ಕಾರ್ಯಕ್ರಮದಲ್ಲಿ ಹುಬ್ಬಳ್ಳಿ ಗ್ರಾಮೀಣ ಅಪರ ತಹಸೀಲ್ದಾರ ಶಿವಾನಂದ ಹೆಬ್ಬಳ್ಳಿ, ಉಪ ತಹಸೀಲ್ದಾರ ಸಿ.ಎಚ್. ನೀರಲಗಿ, ತಾಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಗಂಗಾಧರ್ ಕಂದಕೂರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ದೀಪಾ ಜಾವೂರ್, ಅಂಗವಿಕಲ ಇಲಾಖೆಯ ಮಹಾಂತೇಶ ಕುರ್ತಕೋಟಿ, ಎಸ್.ಎಸ್. ಪಾಟೀಲ, ವಿ.ಎಸ್. ಕೆಂಚನಗೌಡ್ರ, ವಕೀಲರಾದ ಸುನೀಲ್ ಬೆಂಡಿಗೇರಿ, ಅಂಗನವಾಡಿ ಮೇಲ್ವಿಚಾರಕಿ ಶೈಲಜಾ ಅರಕೇರಿ, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಶಶಿಧರ್ ಮಂಟೂರ, ಗ್ರಾಮ ಪಂಚಾಯತಿ ಸದಸ್ಯರು, ವಿವಿಧ ಸ್ವ ಸಹಾಯ ಸಂಘದ ಸದಸ್ಯರು, ವಿವಿಧ ಇಲಾಖೆಯ ಅಧಿಕಾರಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು.