ಚುನಾವಣೆ ಮಹಾತ್ಮೆ : ಎಂಎಲ್ಎಗಳು ಫುಲ್ ಆಕ್ಟೀವ್
ಹುಬ್ಬಳ್ಳಿ, ಜೂನ್ 30 : ರಾಜ್ಯದ ವಿಧಾನಸಭೆ ಚುನಾವಣೆ ಕಾವು ಹೆಚ್ಚುತ್ತಿರುವ ಈ ಸಂದರ್ಭದಲ್ಲಿ ಹಾಲಿ ಎಂಎಲ್ಎಗಳು, ಗರಿಗರಿ ಖಾದಿ ಬಟ್ಟೆ ತೊಟ್ಟು, ಹಲ್ಲು ಕಿರಿದುಕೊಂಡು, ಕೈಗಳೆರಡನ್ನು ಜೋಡಿಸಿಕೊಂಡು ಮತದಾರರನ್ನು ಸೆಳೆಯಲು ಫುಲ್ ಆಕ್ಟೀವ್ ಆಗಿ ಓಡಾಡುತ್ತಿದ್ದಾರೆ.
ಚುನಾವಣೆಗೆ ಇನ್ನೆನು ಕೆಲವೇ ತಿಂಗಳು ಬಾಕಿ ಇರುವುದರಿಂದ ಧಾರವಾಡ ಜಿಲ್ಲೆಯ ಎಲ್ಲ ಪಕ್ಷಗಳ ಶಾಸಕರು ಸರ್ಕಾರದ ವಿವಿಧ ಯೋಜನೆಗಳಿಗೆ ಫಲಾನುಭವಿಗಳನ್ನು ಆಯ್ಕೆ ಮಾಡುವತ್ತ ಗಮನ ಹರಿಸಿದ್ದಾರಲ್ಲದೆ, ಫಲಾನುಭವಿಗಳಿಗೆ ಖುದ್ದು ಸೌಲಭ್ಯ ಒದಗಿಸುವತ್ತ ಗಮನ ಹರಿಸಿದ್ದಾರೆ.
ಮುಖ್ಯವಾಗಿ ಕಳೆದ ನಾಲ್ಕು ವರ್ಷಗಳಿಂದ ಮಂಕು ಕವಿದಿದ್ದ ಶಾಸಕರ ನೇತೃತ್ವದ ಸಮಿತಿಗಳು ಜೀವಕಳೆ ಪಡೆದುಕೊಂಡಿದ್ದು, ಜಿಲ್ಲಾ ಮಟ್ಟದ ವಿವಿಧ ಇಲಾಖೆ, ನಿಗಮಗಳ ಕಚೇರಿಗಳಲ್ಲಿ ಫಲಾನುಭವಿಗಳ ಅರ್ಜಿಗಳ ಮಹಾಪೂರವೇ ಹರಿದು ಬಂದಿದೆ.
ಜನಪ್ರತಿನಿಧಿಗಳ ಈ ಚಟುವಟಿಕೆಗೆ ಬೆಚ್ಚಿಬಿದ್ದಿರುವ ಮತಬಾಂಧವರು, ಕಬ್ಬಿಣ ಕಾದಾಗಲೇ ಬಡಿಯುವಂತೆ ಮುಗಿಬಿದ್ದು ವಿವಿಧ ಯೋಜನೆಗಳ ಫಲ ಅನುಭವಿಸಲು ಅರ್ಜಿ ಗುಜರಾಯಿಸುತ್ತಿದ್ದಾರೆ. ವೈದ್ಯ ಹೇಳಿದ್ದೂ ಹಾಲುಅನ್ನು, ರೋಗಿ ಬಯಸಿದ್ದೂ ಹಾಲುಅನ್ನ ಎನ್ನುವಂತಾಗಿದೆ. ಇದೆಲ್ಲ ಚುನಾವಣೆಯ ಮಹಾತ್ಮೆಯಲ್ಲದೆ ಮತ್ತೇನೂ ಅಲ್ಲ.

6 ತಿಂಗಳಲ್ಲಿ ಮೊದಲು ಅಧಿಕಾರ ಮೊಟಕು
ಹಾಲಿ ಶಾಸಕರ ಅವಧಿ 2018ರ ಮೇನಲ್ಲಿ ಕೊನೆಗೊಳ್ಳಲಿದೆ. ಸಂವಿಧಾನದ ಪ್ರಕಾರ ಅಧಿಕಾರಾವಧಿ ಕೊನೆಗೊಳ್ಳವ ಆರು ತಿಂಗಳು ಮೊದಲು ಯಾವುದೇ ಫಲಾನುಭವಿಗಳನ್ನು ಆಯ್ಕೆ ಮಾಡುವಂತಿಲ್ಲ. ಅಲ್ಲದೆ ಚುನಾವಣೆ ಅಧಿಸೂಚನೆ ಹೊರಬಿದ್ದು ಮುಂದಿನ ಚುನಾವಣೆ ನಡೆಯುವವರೆಗೂ ಶಾಸಕರ ನೇತೃತ್ವದ ಸಮಿತಿಗಳು ಅಸ್ತಿತ್ವದಲ್ಲಿದ್ದರೂ ಅಧಿಕಾರ ಮಾತ್ರ 6 ತಿಂಗಳು ಮೊದಲೇ ಮೊಟಕುಗೊಳ್ಳಲಿದೆ. ಅರ್ಹ ಫಲನುಭವಿಗಳ ಆಯ್ಕೆಯನ್ನು ಆಯಾ ಕ್ಷೇತ್ರದ ಶಾಸಕರೆ ನಿರ್ವಹಿಸುವಂತೆ ಅಥವಾ ಅವರ ಗಮನಕ್ಕೆ ತಂದೇ ಅಧಿಕಾರಿಗಳು ಪಟ್ಟಿ ಅಂತಿಮಗೊಳಿಸಬೇಕು ಎಂದು ಸರ್ಕಾರದ ಆದೇಶವಿದೆ.

ಕ್ಷೇತ್ರದ ಉದ್ಧಾರಕ್ಕಾಗಿಯೇ ಹುಟ್ಟಿದವರಂತೆ...
ಇದೆಲ್ಲದಕ್ಕಿಂತ ಮುಖ್ಯವಾಗಿ ಚುನಾವಣೆಯಲ್ಲಿ ತಮಗೆ ಅನುಕೂಲವಾಗುವ ಕಾರಣದಿಂದ ಶಾಸಕರು ಫಲಾನುಭವಿಗಳ ಆಯ್ಕೆ ಹಾಗೂ ಸೌಲಭ್ಯಗಳನ್ನು ಕೊಡಿಸಲು ತುದಿಗಾಲಲ್ಲಿ ನಿಂತಿದ್ದಾರೆ. ನಾಲ್ಕು ವರ್ಷಗಳ ಕಾಲ ಕ್ಷೇತ್ರಕ್ಕೆ ಬನ್ನಿಬನ್ನಿ, ನಮ್ಮ ಅವಸ್ಥೆ ನೋಡಿನೋಡಿ ಎಂದು ಮತದಾರರು ಗೋಗರೆಯುತ್ತಿದ್ದರೂ ಕ್ಯಾರೆ ಅನ್ನದಿದ್ದ ಪುಢಾರಿಗಳು ಈಗ ಕ್ಷೇತ್ರದ ಉದ್ಧಾರಕ್ಕಾಗಿಯೇ ಹುಟ್ಟಿದವರಂತೆ 'ಶ್ರದ್ಧೆಯಿಂದ' ಓಡಾಡುತ್ತಿದ್ದಾರೆ.

ಶಂಕುಸ್ಥಾಪನೆ, ಉದ್ಘಾಟನೆ, ಕ್ಷೇತ್ರ ಪರ್ಯಟನೆ
ಹಾಲಿ ಶಾಸಕರು ಪುನರಾಯ್ಕೆ ಬಯಸಿ ಕ್ಷೇತ್ರದಾದ್ಯಂತ ಕಾಲಿಗೆ ಚಕ್ರ ಕಟ್ಟಿಕೊಂಡು ತಿರುಗಾಡುತ್ತಿದ್ದಾರೆ. ಮಂಜೂರಾಗುವ ಹಂತದಲ್ಲಿರುವ ಸರ್ಕಾರಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸುವುದು ಸೇರಿದಂತೆ ಕಾಮಗಾರಿ ಮುಗಿಯಲಿ ಮುಗಿಯದಿರಲಿ ತರಾತುರಿಯಲ್ಲಿ ಉದ್ಘಾಟನೆ ಮಾಡುವುದರಲ್ಲಿ ತೊಡಗಿಸಿಕೊಂಡಿದ್ದಾರೆ. ವಾರದಲ್ಲಿ ಎರಡು ದಿನ ಮಾತ್ರ ಕ್ಷೇತ್ರದಲ್ಲಿ ಇರುತ್ತಿದ್ದ ಶಾಸಕರು ಈಗ ಆರು ದಿನ ಜನರ ಕ್ಷೇತ್ರದ ಮತದಾರರ ಕೈಗೆ ಸಿಗುತ್ತಿದ್ದಾರೆ. ಒಟ್ಟಿನಲ್ಲಿ ಚುನಾವಣೆಯನ್ನೇ ಗುರಿಯಾಗಿಸಿಕೊಂಡಿರುವ ಶಾಸಕರು ಶತಾಯಗತಾಯ ಪುನರಾಯ್ಕೆಯಾಗಬೇಕು ಎಂಬ ಹಂಬಲದಿಂದ ಜನರೆದುರು ತಗ್ಗಿಬಗ್ಗಿ ನಡೆದುಕೊಳ್ಳಲಾರಂಭಿಸಿದ್ದಾರೆ. ಇದೇ ಅಲ್ವೆ ಚುನಾವಣೆಯ ಚಮತ್ಕಾರ!

ಆಕಾಂಕ್ಷಿಗಳೂ ಜನಸೇವೆಗೆ ಮುಂದು
ಇನ್ನೊಂದೆಡೆ ಕಳೆದ ಬಾರಿ ಚುನಾವಣೆಯಲ್ಲಿ ಸೋತಿರುವ ಹಾಗೂ ಈ ಬಾರಿ ವಿವಿಧ ಪಕ್ಷಗಳ ಟಿಕೆಟ್ ಆಕಾಂಕ್ಷಿಗಳಾಗಿರುವ ಮುಖಂಡರು ಕ್ಷೇತ್ರದಲ್ಲಿಯೇ ಬಿಡು ಬಿಟ್ಟಿದ್ದಾರೆ. ಪ್ರತಿದಿನ 6ರಿಂದ 8 ಹಳ್ಳಿಗಳಿಗೆ ಭೇಟಿ ನೀಡುವ ಆಕಾಂಕ್ಷಿಗಳು ಗ್ರಾಮಗಳ ಪ್ರಮುಖ ಮುಖಂಡರನ್ನು ಭೇಟಿ ಮಾಡಿ ಕಾರ್ಯತಂತ್ರಗಳನ್ನು ರೂಪಿಸುವಲ್ಲಿ ಬ್ಯೂಸಿಯಾಗಿದ್ದಾರೆ. ಪಕ್ಷದ ಟಿಕೆಟ್ ಖಾತ್ರಿ ಇಲ್ಲದಿದ್ದರೂ ಈಗಾಗಲೇ ಚುನಾವಣಾ ಪ್ರಚಾರ ಆರಂಭಿಸಿರುವ ಬಹುತೇಕ ಆಕಾಂಕ್ಷಿಗಳ ಪಕ್ಷಾಂತರ ಪರ್ವ ಚುನಾವಣೆ ಸಂದರ್ಭದಲ್ಲಿ ನಡೆಯುವುದಂತೂ ಗ್ಯಾರಂಟಿ.












Click it and Unblock the Notifications