ಕಾರ ಹುಣ್ಣಿಮೆ ಸಂಭ್ರಮದಲ್ಲಿ ಮಿಂದೆದ್ದ ಉತ್ತರ ಕರ್ನಾಟಕ
ಹುಬ್ಬಳ್ಳಿ, ಜೂನ್ 9: ಉತ್ತರ ಕರ್ನಾಟಕದ ಜನಪ್ರಿಯ ಹಬ್ಬಗಳಲ್ಲಿ ಒಂದಾಗಿರುವ, ಅದರಲ್ಲೂ ವಿಶೇಷವಾಗಿ ಗ್ರಾಮೀಣ ಸೊಗಡಿನ ಕಾರ ಹುಣ್ಣಿಮೆಯನ್ನು ಶುಕ್ರವಾರ ಹುಬ್ಬಳ್ಳಿಯ ಜಂಗ್ಲಿಪೇಟೆಯಲ್ಲಿ ರೈತರು ಸಂಭ್ರಮದಿಂದ ಆಚರಿಸಿದರು.
ಹಬ್ಬದ ಅಂಗವಾಗಿ ನಗರದ ವಿವಿಧೆಡೆ ಎತ್ತುಗಳ ಕರಿ ಹರಿಯುವ ಮೂಲಕ ಕಡು ಬೇಸಿಗೆ ಕಳೆದು ಮುಂಗಾರು ಸ್ವಾಗತಿಸಲು ಹಬ್ಬ ಸಾಕ್ಷಿಯಾಯಿತು. ರೈತರು ತಮ್ಮ ಎತ್ತು ಹಾಗೂ ಹೋರಿಗಳ ಮೈ ತೊಳೆದು, ಬಣ್ಣ ಹಚ್ಚಿ ಶೃಂಗರಿಸಿ ಸಂಜೆ ಹಮ್ಮಿಕೊಂಡ ಕರಿ ಹರಿಯುವ ದೃಶ್ಯ ರೋಮಾಂಚನಗೊಳಿಸಿತು.

ವರ್ಷವಿಡೀ ದುಡಿಯುವ ಎತ್ತುಗಳಿಗೆ ಮನರಂಜನಾ ಕೂಟವಾಗಿರುವ ಕಾರ ಹುಣ್ಣಿಮೆ ನಿಮಿತ್ತ ವಿಶೇಷ ಅಲಂಕಾರ ಹಾಗೂ ಭಕ್ಷ್ಯಗಳನ್ನು ಉಣಿಸುವ ಸಂಪ್ರದಾಯ ಉತ್ತರ ಕರ್ನಾಟಕದಾದ್ಯಂತ ರೂಢಿಯಲ್ಲಿದೆ.[39 ಕಾಂಗ್ರೆಸ್ ಶಾಸಕರಿಗೆ ಟಿಕೆಟ್ ಕೊಕ್ ಸುದ್ದಿಗೆ ಡಿಕೆಶಿ ಹೇಳಿದ್ದೇನು]

ಇದರ ಭಾಗವಾಗಿ ಹುಬ್ಬಳ್ಳಿಯ ಜಂಗ್ಲಿಪೇಟೆ ಸೇರಿದಂತೆ ನಗರದ ವಿವಿಧ ಭಾಗಗಳಲ್ಲಿ ಎತ್ತುಗಳ ಕರಿ ಹರಿಯುವ ವಿಶಿಷ್ಠ ಆಚರಣೆಗೆ ನೂರಾರು ರೈತರು ಹಾಗೂ ಯುವಕರು ಸಾಕ್ಷಿಯಾದರು.

ಶೃಂಗರಿಸಿ ಕರೆತಂದಿದ್ದ ತಮ್ಮ ಎತ್ತುಗಳನ್ನು ಸಾಲು ಸಾಲಾಗಿ ಓಡಿಸುತ್ತ ಸಂಭ್ರಮಪಟ್ಟ ರೈತರು ನಂತರ ಮನೆಗೆ ಬಂದಾಗ ಅವುಗಳಿಗೆ ಆರತಿ ಎತ್ತಿ ಖುಷಿ ಪಟ್ಟರು.[ಹುಬ್ಬಳ್ಳಿಯಲ್ಲಿ ಬೆಳೆ ಹಾನಿಗೆ ಸರ್ಕಾರ ನೀಡಿದ ಪರಿಹಾರ ಬರೋಬ್ಬರಿ 1 ರೂ.!]

ಇದಕ್ಕೂ ಮೊದಲು ಮಹಿಳೆಯರು ಕಾರ ಹುಣ್ಣಿಮೆ ನಿಮಿತ್ತ ವಿಶೇಷ ಪೂಜೆ ನೆರವೇರಿಸಿದರು. ಅಲ್ಲದೆ ಸಮೀಪದ ಅರಳಿ ಮರಕ್ಕೆ ಪೂಜೆ ಸಲ್ಲಿಸುವ ಮೂಲಕ ಮುಂಗಾರನ್ನು ಬರಮಾಡಿಕೊಂಡರು. ಹಬ್ಬದ ಅಂಗವಾಗಿ ಮನೆಯಲ್ಲಿ ತಯಾರಿಸಿದ ವಿಶೇಷ ಸಿಹಿ ಖಾದ್ಯಗಳನ್ನು ಸವಿದು ಸಂಭ್ರಮ ಪಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.












Click it and Unblock the Notifications