Get Updates
Get notified of breaking news, exclusive insights, and must-see stories!

ಕನ್ನಡದ ಹಿರಿಯ ನಟ, ಚಿಂತಕ ಜಿ.ಕೆ. ಗೋವಿಂದ ರಾವ್ ನಿಧನ

ಹುಬ್ಬಳ್ಳಿ, ಅಕ್ಟೋಬರ್ 15: ಕನ್ನಡದ ಹಿರಿಯ ನಟ ಪ್ರೊ. ಜಿ.ಕೆ. ಗೋವಿಂದ ರಾವ್ ಶುಕ್ರವಾರ ಬೆಳಿಗ್ಗೆ ಹುಬ್ಬಳ್ಳಿಯ ಅವರ ಪುತ್ರಿಯ ಮನೆಯಲ್ಲಿ ಅವರು ನಿಧನರಾಗಿದ್ದು, ಹುಬ್ಬಳ್ಳಿಯ ಕೇಶ್ವಾಪುರದ ಮುಕ್ತಿಧಾಮದಲ್ಲಿಇಂದು ಬೆಳಿಗ್ಗೆ 8 ಗಂಟೆಗೆ ಅಂತ್ಯಸಂಸ್ಕಾರ ನಡೆದಿದೆ.

ವೃತ್ತಿಯಿಂದ ಇಂಗ್ಲಿಷ್ ಪ್ರಾಧ್ಯಾಪಕರಾಗಿದ್ದ ಅವರು, ರಂಗಭೂಮಿ ಕಲಾವಿದರೂ ಆಗಿದ್ದರು. ಮಾಲ್ಗುಡಿ ಡೇಸ್, ಮಹಾಪರ್ವ ಧಾರಾವಾಹಿ ಸೇರಿದಂತೆ ಹಲವಾರು ಧಾರವಾಹಿಗಳಲ್ಲಿ ಹಾಗೂ ಚಲನಚಿತ್ರಗಳಲ್ಲಿ ಅವರು ಅಭಿನಯಿಸಿದ್ದರು. ವಯೋಸಹಜ ಅನಾರೋಗ್ಯಕ್ಕೆ ಒಳಗಾಗಿದ್ದ ಜಿ.ಕೆ. ಗೋವಿಂದ ರಾವ್​​ ತಮ್ಮ ಇಳಿ ವಯಸ್ಸಿನಲ್ಲೂ ರಂಗ ಚಟುವಟಿಕೆ ಮತ್ತು ಹೋರಾಟದಲ್ಲಿ ಸಕ್ರಿಯರಾಗಿದ್ದರು.

ವಿಪಕ್ಷ ನಾಯಕ ಸಿದ್ದರಾಮಯ್ಯನವರು ಜಿ.ಕೆ. ಗೋವಿಂದರಾವ್ ನಿಧನದ ಸುದ್ದಿಗೆ ಸಂತಾಪ ಸೂಚಿಸಿದ್ದಾರೆ. ಈ ಕುರಿತು ಅವರು ಟ್ವೀಟ್ ಮಾಡಿದ್ದು, ''ಹಿರಿಯ ಲೇಖಕ, ಚಿಂತಕ,‌ ನಟ ಪ್ರೊ.ಜಿ.ಕೆ. ಗೋವಿಂದರಾವ್ ಸಾವಿನಿಂದ ಆಘಾತಕ್ಕೀಡಾಗಿದ್ದೇನೆ. ನನ್ನ ಹಿತೈಷಿ, ಮಾರ್ಗದರ್ಶಕ ಮತ್ತು ಆತ್ಮೀಯ ಸ್ನೇಹಿತರಾಗಿದ್ದ ಪ್ರೊ.ಜಿಕೆಜಿ ಅವರಿಗೆ ಗೌರವದ ನಮನಗಳು. ಅವರನ್ನು ಕಳೆದುಕೊಂಡ ಕುಟುಂಬದ ಸದಸ್ಯರು, ಶಿಷ್ಯರು, ಅಭಿಮಾನಿಗಳ ದುಃಖದಲ್ಲಿ ನಾನೂ ಭಾಗಿಯಾಗಿದ್ದೇನೆ,'' ಎಂದು ಸಂತಾಪ ಸೂಚಿಸಿದ್ದಾರೆ.

Kannada Film Actor And Thinker GK Govinda Rao Passed Away

ಮೂಲತಃ ಇಂಗ್ಲೀಷ್​​ ಪ್ರೊಫೆಸರ್​ ಆಗಿದ್ದ ಜಿ.ಕೆ. ಗೋವಿಂದರಾವ್​​ ಕನ್ನಡದ ಮೇಲೆ ಅಪಾರ ಹಿಡಿತ ಹೊಂದಿದ್ದರು. ಕನ್ನಡದಲ್ಲಿ ಹಲವು ಕೃತಿಗಳನ್ನು ರಚಿಸಿದ್ದ ಅವರು ಬಹುಮುಖ ಪ್ರತಿಭೆ. ಸಾಹಿತ್ಯದ ಜೊತೆಜೊತೆಗೆ ನಾಟಕ ರಂಗದಲ್ಲೂ ಜಿ.ಕೆ. ಗೋವಿಂದರಾವ್​ ಸಕ್ರಿಯರಾಗಿದ್ದರು. ಅಲ್ಲದೆ ಹಲವು ಸಿನಿಮಾ ಮತ್ತು ಟಿವಿ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಯಾವುದೇ ಪಾತ್ರ ಕೊಟ್ಟರೂ ಜೀವಂತಿಕೆ ತುಂಬಬಲ್ಲ ಸಾಮರ್ಥ್ಯ ಜಿ.ಕೆ. ಗೋವಿಂದ ರಾವ್‌ವರಿಗಿತ್ತು.

ಗ್ರಹಣ, ಮಿಥಿಲೆಯ ಸೀತೆಯರು, ಕರ್ಫ್ಯೂ, ನಿಶ್ಯಬ್ದ, ಭೂಮಿ ತಾಯಿಯ ಚೊಚ್ಚಲ ಮಗ, ಅಜ್ಜು, ಶಾಸ್ತ್ರಿ ಮುಂತಾದ ಹಲವು ಸಿನಿಮಾಗಳಲ್ಲಿ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದರು.

ಸಾಹಿತ್ಯ ಕ್ಷೇತ್ರದಲ್ಲೂ ಸಾಧನೆ ಮಾಡಿರುವ ಜಿ.ಕೆ. ಗೋವಿಂದ ರಾವ್​, ಈಶ್ವರ ಅಲ್ಲಾ ಎಂಬ ಕಿರು ಕಾದಂಬರಿ, ಶೇಕ್ಸ್​ಪೀಯರ್​ ನಾಟಕ ಅಧ್ಯಯನ, ಶೇಕ್ಸ್​ಪೀಯರ್​ ಸಂವಾದ ಲೇಖನ ಮಾಲಿಕೆ, ನಡೆ ನುಡಿ ನಾಗರಿಕತೆ, ಅರಾಜಕತೆ, ಬಿಂಬ ಪ್ರತಿಬಿಂಬ, ಕ್ರಿಯೆ ಪ್ರತಿಕ್ರಿಯೆ, ಮನು ವರ್ಸಸ್ ಅಂಬೇಡ್ಕರ್​​ ಮುಂತಾದ ಹಲವು ಕೃತಿಗಳನ್ನು ಬರೆದಿದ್ದಾರೆ.

ಚಳವಳಿಯಲ್ಜಿಲೂ ಮುಂಚೂಣಿಯಲ್ಲಿದ್ದ ಜಿ.ಕೆ. ಗೋವಿಂದರಾವ್​​ ಹೋರಾಟದ ಕ್ಷೇತ್ರದಲ್ಲಿ ಜಿಕೆಜಿ ಎಂದೇ ಚಿರಪರಿಚಿತರು. ಮಾನವ ಹಕ್ಕು ಉಲ್ಲಂಘನೆ, ಪ್ರಭುತ್ವದ ದೌರ್ಜನ್ಯ, ಅನ್ಯಾಯ ಅಕ್ರಮಗಳು ಎಲ್ಲೇ ನಡೆದರೂ ಜಿಕೆಜಿ ಹೋರಾಟ ಅಲ್ಲಿ ದಾಖಲಾಗುತ್ತಿತ್ತು. ಎಡಪಂಥೀಯ ಚಿಂತಕರ ಜೊತೆ ಗುರುತಿಸಿಕೊಂಡಿದ್ದ ಜಿ.ಕೆ. ಗೋವಿಂದ ರಾವ್​ ಪ್ರಗತಿಪರ ಹೋರಾಟಗಾರರಾಗಿದ್ದರು.

Kannada Film Actor And Thinker GK Govinda Rao Passed Away

ಆದಿವಾಸಿ ವಿದ್ಯಾರ್ಥಿ ಬಂಧನದ ವಿರುದ್ಧದ ಹೋರಾಟ ಸೇರಿದಂತೆ ಕರ್ನಾಟಕದ ಬಹುತೇಕ ಚಳವಳಿಯಲ್ಲಿ ಜಿ.ಕೆ. ಗೋವಿಂದರಾವ್​​ ಭಾಗಿಯಾಗಿದ್ದರು. ಪ್ರಖರ ವಾಗ್ಮಿಯೂ ಆಗಿದ್ದ ಜಿಕೆಜಿ ಭಾಷಣ ಹಲವರನ್ನು ಪ್ರೇರೇಪಿಸುವಂತಿರುತ್ತದೆ. ಖಡಕ್​​ ಶೈಲಿಯಲ್ಲಿ ಭಾಷಣ ಮಾಡುವ ಅವರು, ಮೇಲ್ನೋಟಕ್ಕೆ ಕಠೋರದಂತೆ ಕಂಡು ಬಂದರೂ,ಮಾತೃಹೃದಯಿ ಎಂಬುದನ್ನು ಹತ್ತಿರದಿಂದ ಬಲ್ಲವರಿಗೆ ಗೊತ್ತು.

ಇಂದು ಮುಂಜಾನೆ ಜಿ.ಕೆ. ಗೋವಿಂದರಾವ್​ ನಿಧನರಾಗಿದ್ದರಿಂದ ಸಾಹಿತ್ಯ, ರಂಗಚಟುವಟಿಕೆ, ಸಿನಿಮಾ, ಪ್ರಗತಿಪರ ವಲಯಕ್ಕೆ ತುಂಬಲಾರದ ನಷ್ಟ. ಜಿಕೆಜಿ ನಿಧನಕ್ಕೆ ಹಲವು ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.

ಮುಖ್ಯಮಂತ್ರಿ ಸಂತಾಪ:

ಕನ್ನಡದ ಹಿರಿಯ ನಟ, ಚಿಂತಕ, ಪ್ರೊ.ಜಿ.ಕೆ ಗೋವಿಂದ ರಾವ್ ಅವರ ನಿಧನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ರಂಗಭೂಮಿ, ಸಿನಿಮಾ ಹಾಗೂ ಸಾಹಿತ್ಯ ಕ್ಷೇತ್ರದಲ್ಲಿಯೂ ತಮ್ಮ ಛಾಪನ್ನು ಮೂಡಿದಿದ್ದ ಅವರು, ತಮ್ಮ ಜನಪರ ನಿಲುವಿನಿಂದ ಜನಮಾನಸದಲ್ಲಿ ವಿಶಿಷ್ಟ ಸ್ಥಾನ ಗಳಿಸಿದ್ದರು. ಅವರ ನಿಧನದಿಂದ ಒಬ್ಬ ಅನನ್ಯ ಚಿಂತಕನನ್ನು ನಾಡು ಕಳೆದುಕೊಂಡಂತಾಗಿದೆ. ಭಗವಂತ ಮೃತರ ಆತ್ಮಕ್ಕೆ ಶಾಂತಿ ನೀಡಲಿ ಹಾಗೂ ಅವರ ಕುಟುಂಬದವರಿಗೆ ಮತ್ತು ಅಭಿಮಾನಿಗಳಿಗೆ ಅವರ ಅಗಲಿಕೆಯ ದುಃಖ ಭರಿಸುವ ಶಕ್ತಿ ನೀಡಲಿ ಎಂದು ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.

ಹಿರಿಯ ನಿರ್ದೇಶಕ ಟಿ.ಎನ್. ಸೀತಾರಾಮ್ ಸಂತಾಪ
"ನಮ್ಮ ತಂಡದ ಅನೇಕ ಧಾರಾವಾಹಿಗಳಲ್ಲಿ ಮುಖ್ಯ ಪಾತ್ರಗಳನ್ನು ಮಾಡುತ್ತಾ ನಮ್ಮೆಲ್ಲರಿಗೂ ತುಂಬಾ ಹತ್ತಿರವಾದವರು ನೀವು. ನಿಮ್ಮ ಜ್ಞಾನ ಪಾಂಡಿತ್ಯಕ್ಕಿಂತ ಹೆಚ್ಚಾಗಿ ಹೃದಯದ ಮೂಲಕ ಗೆಳೆಯರ ಜತೆ ಬಾಂಧವ್ಯವಿಟ್ಟುಕೊಂಡವರು ನೀವು.‌ ನಿಮ್ಮ ಜತೆ ಜಗಳಗಳು ಗಂಟು ಮುಖದಿಂದ ಕೂಡಿರುತ್ತಿರಲಿಲ್ಲ. ನಗು, ಉಲ್ಲಾಸಗಳಿಂದ ತುಂಬಿರುತ್ತಿತ್ತು."

Recommended Video

      ವಿಶ್ವ ಕ್ರಿಕೆಟ್ ನ್ನು ಕಂಟ್ರೋಲ್ ಮಾಡೋ ಭಾರತವೇ ಕಿಂಗ್ ಎಂದ ಪಾಕಿಸ್ತಾನ | Oneindia Kannada

      "ಮುಂದಿನ ಧಾರಾವಾಹಿಯಲ್ಲಿ ಕೋಪದ ವ್ಯಕ್ತಿತ್ವದ, ಆದರೆ ಅಂತಃಕರಣ ತುಂಬಿದ ಮುಖ್ಯಮಂತ್ರಿ ಪಾತ್ರ ಮಾಡಿಸಬೇಕೆಂದು ನಿನ್ನೆ ತಾನೇ ನನ್ನ ತಂಡದವರ ಜತೆ ಮಾತನಾಡುತ್ತಿದ್ದೆ. ಇಷ್ಟು ಬೇಗ ವಿದಾಯ ಹೇಳುತ್ತೀರೆಂದು ಭಾವಿಸಿರಲಿಲ್ಲ," ಎಂದು ಹಿರಿಯ ನಿರ್ದೇಶಕ ಟಿ.ಎನ್. ಸೀತಾರಾಮ್ ಸಂತಾಪ ಸೂಚಿಸಿದ್ದಾರೆ.

      ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಸಂತಾಪ
      ಹಿರಿಯ ಚಿಂತಕ, ರಂಗಕರ್ಮಿ ಪ್ರೊ. ಜಿ.ಕೆ. ಗೋವಿಂದರಾವ್ ವಿಧಿವಶರಾದ ಸುದ್ದಿ ತಿಳಿದು ಅತೀವ ದುಃಖವಾಗಿದೆ. ಇಂಗ್ಲೀಷ್ ಪ್ರಾಧ್ಯಾಪಕರಾಗಿದ್ದ ಅವರು ಚಲನಚಿತ್ರ, ಸಾಹಿತ್ಯ ಕ್ಷೇತ್ರದಲ್ಲೂ ಸಕ್ರಿಯರಾಗಿದ್ದರು. ದೇವರು ಅವರ ಆತ್ಮಕ್ಕೆ ಚಿರಶಾಂತಿಯನ್ನು, ಅವರ ಕುಟುಂಬ ಹಾಗೂ ಅಭಿಮಾನಿಗಳಿಗೆ ನೋವನ್ನು ಭರಿಸುವ ಶಕ್ತಿ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಸಂತಾಪ ವ್ಯಕ್ತಪಡಿಸಿದರು.

      More From
      Prev
      Next
      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+