Jagadish Shettar: ಲೋಕಸಭೆಗೆ 2 ಕ್ಷೇತ್ರಗಳಿಂದ ಕಣಕ್ಕಿಳಿಯಲು ಸಿದ್ಧವಾಗಿರುವ ಜಗದೀಶ್ ಶೆಟ್ಟರ್
ಹುಬ್ಬಳ್ಳಿ, ಫೆಬ್ರವರಿ 19: ಬಿಜೆಪಿ ತೊರೆದು ಕಾಂಗ್ರೆಸ್ನಲ್ಲಿದ್ದಾಗ ಲೋಕಸಭಾ ಚುನಾವಣೆ ಸ್ಪರ್ಧೆ ಇಲ್ಲ ಎಂದು ಕಡ್ಡಿ ತುಂಡಾದಂತೆ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದ್ದರು. ಇದೀಗ ವರಸೆ ಬದಲಿಸಿರುವ ಅವರು ಬಿಜೆಪಿಯಿಂದ ಈ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸುವ ಆಸೆ ವ್ಯಕ್ತಪಡಿಸಿದ್ದಾರೆ.
ಎರಡು ದಿನ ನಡೆದ ಬಿಜೆಪಿ ರಾಷ್ಟ್ರೀಯ ಕಾರ್ಯ ಕಾರ್ಯಕಾರಿಣಿ ಸಭೆಯ ಬಳಿಕ ಹುಬ್ಬಳ್ಳಿಯಲ್ಲಿ ಪ್ರತಿಕ್ರಿಯಿಸಿದ ಜಗದೀಶ್ ಶೆಟ್ಟರ್, ಸಭೆಯಲ್ಲಿ ಲೋಕಸಭೆ ಚುನಾವಣೆಯಲ್ಲಿ ದೃಷ್ಟಿಯಿಂದ ಸಂಘಟನಾತ್ಮಕವಾಗಿ ಹಲವು ವಿಷಯಗಳು ಚರ್ಚೆಯಾದವು. ಟಿಕೆಟ್ ಹಂಚಿಕೆ ವಿಚಾರವಾಗಿ ಯಾವುದೇ ಚರ್ಚೆಗಳು ನಡೆದಿಲ್ಲ.

ಈ ಕ್ಷೇತ್ರಗಳಲ್ಲಿ ಸ್ಪರ್ಧೆಗೆ ಶೆಟ್ಟರ್ ಯೋಚನೆ
ಲೋಕಸಭೆ ಚುನಾವಣೆ ಟಿಕೆಟ್ ವಿಚಾರವಾಗಿ ಮಾತನಾಡಿದ ಅವರು, ಕೇಂದ್ರದ ವರಿಷ್ಠರು ಸೂಚಿಸಿದಂತೆ ನಡೆದುಕೊಳ್ಳುತ್ತೇನೆ. ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುತ್ತೇನೆ ಎಂದು ಪುನರುಚ್ಛರಿಸಿದರು. ವರಿಷ್ಠತರು ಒಪ್ಪಿಗೆ ನೀಡಿದರೂ ಸಿದ್ದ ಎಂದು ತಾವು ಲೋಕಸಭಾ ಟಿಕೆಟ್ ಆಕಾಂಕ್ಷಿ ಎಂದು ತಿಳಿಸಿದ್ದಾರೆ. ಧಾರವಾಡ ಇಲ್ಲವೇ ಬೆಳಗಾವಿಯ ಟಿಕೆಟ್ ಬಯಸಿರುವುದಾಗಿ ಅವರು ಪರೋಕ್ಷವಾಗಿ ತಿಳಿಸಿದರು.
ಇದೇ ವೇಳೆ ಕಾಂಗ್ರೆಸ್ ನಾಯಕರ ಆರೋಪಕ್ಕೆ ತಿರುಗೇಟು ನೀಡಿ, ಹಣಕಾಸಿಗೆ ಸಂಬಂಧಪಟ್ಟ ಲೆಕ್ಕ ಪತ್ರಗಳನ್ನು ಸರಿಯಾಗಿ ಇಟ್ಟುಕೊಂಡರೆ ಹೆದರುವ ಪ್ರಮೇಯ ಬರುವುದಿಲ್ಲ. ಸರಿಯಾದ ವಹಿವಾಟು ತೋರಿಸದೇ ಇದ್ದಲ್ಲಿ ನೋಟಿಸ್ ನೀಡುವ ಮತ್ತು ವಿಚಾರಣೆ ನಡೆಸುವ ಅಧಿಕಾರ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳಿಗೆ ಇರುತ್ತದೆ. ಹೀಗಾಗಿ ಈ ಪ್ರಕ್ರಿಯೆಯನ್ನು ರಾಜಕಾರಣಕ್ಕೆ ತಳಕು ಹಾಕಬಾರದು ಎಂದು ತಿಳಿಸಿದರು.
ಕಾರ್ಯಕರ್ತರಿಗೆ ವರಿಷ್ಠರ ಮಾರ್ಗದರ್ಶನ
ಲೋಕಸಭೆ ಚುನಾವಣೆಯನ್ನು ಯಾವ ರೀತಿಯಾಗಿ ಎದುರಿಸಬೇಕು. ಸಂಘಟನೆಯನ್ನು ಹೇಗೆ ಮಾಡಬೇಕು. ಕಾರ್ಯಕರ್ತರು ಯಾವ ರೀತಿ ಕೆಲಸ ಮಾಡಬೇಕು ಎಂಬುದರ ಕುರಿತು ಸುದೀರ್ಘವಾಗಿ ಚರ್ಚೆಯಾಗಿದೆ. ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ, ಜೆ.ಪಿ. ನಡ್ಡಾ, ರಾಜನಾಥ್ ಸಿಂಗ್ ಸೇರಿದಂತೆ ಅನೇಕ ಬಿಜೆಪಿ ನಾಯಕರು ಕಾರ್ಯಕರ್ತರಿಗೆ ಸಂಘಟನಾತ್ಮಕವಾಗಿ ಮಾರ್ಗದರ್ಶನ ನೀಡಿದ್ದಾರೆ ಎಂದು ಅವರು ತಿಳಿಸಿದರು.

ಬಿಜೆಪಿ ಕಾರ್ಯಕರ್ತರು ಉತ್ಸಾಹಿಗಳು ಅವರಲ್ಲಿ ಸಾಕಷ್ಟು ಹುರುಪಿದ್ದು, ಪಕ್ಷಕ್ಕೆ ಪೂರಕವಾದ ವಾತಾವರಣ ನಿರ್ಮಾಣವಾಗಿದೆ. ಹಲವು ಕಾಂಗ್ರೆಸ್ ನಾಯಕರು ಬಿಜೆಪಿಗೆ ಸೇರ್ಪಡೆಯಾಗುತ್ತಿದ್ದಾರೆ. ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಕೂಡ ಬಿಜೆಪಿ ಸೇರ್ಪಡೆಗೊಂಡಿದ್ದಾರೆ. ಕಮಲನಾಥ್ ಹಾಗೂ ಅವರ ಪುತ್ರ ಕೂಡ ಕಾಂಗ್ರೆಸ್ ಗೆ ವಿದಾಯ ಹೇಳಿದ್ದಾರೆ. ಇಂಡಿಯಾ ಒಕ್ಕೂಟ ಛಿದ್ರವಾಗಿದೆ. ಹೀಗಾಗಿ ಬಿಜೆಪಿ 370ಕ್ಕೂ ಅಧಿಕ ಸೀಟುಗಳನ್ನು ಗೆಲ್ಲಲಿದೆ ಎಂದು ತಿಳಿಸಿದರು.
ಸುಪ್ರೀಂ ಕೋರ್ಟ್ ನಿರ್ದೇಶನದಂತೆಯೇ ಶ್ರೀರಾಮ ಮಂದಿರವನ್ನು ನಿರ್ಮಾಣ ಮಾಡಲಾಗಿದೆ. ಎಲ್ಲ ದಾಖಲೆಗಳನ್ನು ಸುಪ್ರೀಂ ಕೋರ್ಟ್ಗೆ ಸಲ್ಲಿಕೆ ಆಗಿದೆ. ಅದರ ಪರಿಶೀಲನೆಯ ಬಳಿಕವೇ ಮಂದಿರ ನಿರ್ಮಾಣಕ್ಕೆ ಅಸ್ತು ಎಂದಿತ್ತು. ಹೀಗಿರುವಾಗ ನಿಗದಿತ ಜಾಗ ಬಿಟ್ಟು ಬೇರೆ ರಾಮಮಂದಿರ ನಿರ್ಮಿಸಲು ಹೇಗೆ ಸಾಧ್ಯ. ಒಂದು ವೇಳೆ ನಿರ್ಮಿಸಿದ್ದರು ಕಾಂಗ್ರೆಸ್ ಎಷ್ಟು ವರ್ಷ ಏಕೆ ಸುಮ್ಮನಿತ್ತು. ನ್ಯಾಯಾಲಯದ ಮೊರೆ ಹೋಗಬಹುದಿತ್ತಲ್ಲ ಎಂದು ಶ್ರೀರಾಮ ಮಂದಿರ ನಿರ್ಮಾಣದ ವಿಚಾರವಾಗಿ ಸಂತೋಷ್ ಲಾಡ್ ಹೇಳಿಕೆಗೆ ಅವರು ಪ್ರತಿಕ್ರಿಯಿಸಿದರು












Click it and Unblock the Notifications