ಪ್ರೀತಿಸಿ ವಿವಾಹವಾದ ರಾಜ್ಯದ ಮತ್ತಿಬ್ಬರು ಐಎಎಸ್ ಅಧಿಕಾರಿಗಳು
ಹುಬ್ಬಳ್ಳಿ, ಫೆಬ್ರವರಿ 25 : ಕರ್ನಾಟಕದ ಮತ್ತಿಬ್ಬರು ಐಎಎಸ್ ಅಧಿಕಾರಿಗಳು ಪ್ರೀತಿಸಿ ವಿವಾಹವಾಗಿದ್ದಾರೆ. ಐಎಎಸ್ ಅಧಿಕಾರಿ ಗೌತಮ್ ಬಗಾದಿ ಮತ್ತು ಅಶ್ವತಿ ಅವರ ವಿವಾಹ ಫೆ.14ರಂದು ಕೇರಳದಲ್ಲಿ ನಡೆದಿತ್ತು.
ಸೋಮವಾರ ಹುಬ್ಬಳ್ಳಿಯಲ್ಲಿ ಐಎಎಸ್ ಅಧಿಕಾರಿಗಳಾದ ಉಜ್ವಲ್ ಕುಮಾರ್ ಘೋಷ್ ಮತ್ತು ಹಬ್ಸಿಬಾ ರಾಣಿ ಕೊರ್ಲಾಪಾಟಿ ಅವರು ಕುಟುಂಬದವರ ಸಮ್ಮುಖದಲ್ಲಿ ಸರಳವಾಗಿ ವಿವಾಹವಾದರು.

ಉಜ್ವಲ್ ಕುಮಾರ್ ಘೋಷ್ ಅವರು ಕೃಷ್ಣಾ ಮೇಲ್ದಂಡೆ ಯೋಜನೆಯ ಎಂಡಿಯಾಗಿ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಹಬ್ಸಿಬಾ ರಾಣಿ ಕೊರ್ಲಾಪಾಟಿ ಅವರು ಉಡುಪಿ ಜಿಲ್ಲಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಉಜ್ವಲ್ ಕುಮಾರ್ ಘೋಷ್ ಅವರು ಕಲಬುರಗಿ ಜಿಲ್ಲಾಧಿಕಾರಿಯಾಗಿದ್ದರು. ಆಗ ಹಬ್ಸಿಬಾ ರಾಣಿ ಕೊರ್ಲಾಪಾಟಿ ಅವರು ಜಿಲ್ಲಾ ಪಂಚಾಯಿತಿ ಸಿಇಓ ಆಗಿದ್ದರು. ಆಗ ಇಬ್ಬರ ಪರಿಚಯವಾಗಿ ಪ್ರೇಮಾಂಕುರವಾಗಿತ್ತು.
ಇಬ್ಬರೂ ಅಧಿಕಾರಿಗಳ ಪ್ರೀತಿಗೆ ಕುಟುಂಬದವರ ಒಪ್ಪಿಗೆ ಸಿಕ್ಕಿತ್ತು. ಸೋಮವಾರ ಹುಬ್ಬಳ್ಳಿಯ ವಿವಾಹ ನೋಂದಣಿ ಕಚೇರಿಯಲ್ಲಿ ಇಬ್ಬರು ಅಧಿಕಾರಿಗಳು ಸರಳವಾಗಿ ವಿವಾಹವಾದರು. ಈಗ ಇಬ್ಬರು ಅಧಿಕಾರಿಗಳು ಬೇರೆ-ಬೇರೆ ಜಿಲ್ಲೆಗಳಲ್ಲಿ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ.
ದಾವಣಗೆರೆ ಜಿಲ್ಲಾಧಿಕಾರಿಯಾಗಿದ್ದ ಗೌತಮ್ ಬಗಾದಿ ಮತ್ತು ಜಿಲ್ಲಾ ಪಂಚಾಯಿತಿ ಸಿಇಒ ಅಶ್ವತಿ ಅವರು ಫೆ.14ರಂದು ಕೇರಳದಲ್ಲಿ ವಿವಾಹವಾಗಿದ್ದರು. ಈ ಅಧಿಕಾರಿಗಳದ್ದು ಪ್ರೇಮ ವಿವಾಹ. ಈಗ ಇಬ್ಬರು ಅಧಿಕಾರಿಗಳು ಚಿಕ್ಕಮಗಳೂರಿನಲ್ಲಿ ಜಿಲ್ಲಾಧಿಕಾರಿ ಮತ್ತು ಸಿಇಒ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.












Click it and Unblock the Notifications