ಪಕ್ಷ ಕೊಟ್ಟ ಜವಾಬ್ದಾರಿ ನಿರ್ವಹಿಸುವೆ; ಬಸವರಾಜ ಹೊರಟ್ಟಿ
ಹುಬ್ಬಳ್ಳಿ, ಜುಲೈ 01: "ನಾನು ಎಂಎಲ್ಸಿಯಾಗಿ ಯಾವ ಅಧಿಕಾರವನ್ನು ಕೇಳುವುದಿಲ್ಲ. ನನ್ನ ಮೇಲೆ ನಂಬಿಕೆಯಿಟ್ಟು ಯಾವುದೇ ಹುದ್ದೆ ನೀಡಿದರೂ ಸಮರ್ಥವಾಗಿ ನಿಭಾಯಿಸುವೆ" ಎಂದು ಮಾಜಿ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.
ಶುಕ್ರವಾರ ಹುಬ್ಬಳ್ಳಿ ಪತ್ರಕರ್ತರ ಭವದಲ್ಲಿ ಮಾಧ್ಯಮ ಸಂವಾದದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. "ನನಗೆ ಯಾವುದೇ ಹುದ್ದೆಯನ್ನು ನೀಡಿದರೂ ನಾನು ಬೇಡ ಎನ್ನುವುದಿಲ್ಲ. ನನ್ನ ಆತ್ಮದ ವಿರುದ್ಧ ಎಂದಿಗೂ ನಾನು ನಡೆಯುವುದಿಲ್ಲ" ಎಂದರು.
"ಈ ಹಿಂದಿನಂತೆಯೇ ನೇರ ನುಡಿಯಲ್ಲಿಯೇ ಮಾತನಾಡುವೆ.ರಾಜ್ಯದಲ್ಲಿ ಶಿಕ್ಷಣ ವ್ಯವಸ್ಥೆ ಹಿಂದೆ ಉಳಿದಿದೆ. ಶಿಕ್ಷಣ ಕ್ಷೇತ್ರದಲ್ಲಿನ ಸಮಸ್ಯೆಗಳನ್ನು ಸಂಪೂರ್ಣವಾಗಿ ಬಗೆಹರಿಸಲು ಯಾರಿಂದಲೂ ಸಾಧ್ಯವಿಲ್ಲ. ದೇವರು ಕೆಳಗೆ ಬಂದರೂ ಅದು ಆಗದು. ಒಂದು ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಷ್ಟರಲ್ಲಿ ಮತ್ತೊಂದು ಸಮಸ್ಯೆ ಎದುರಾಗಿರುತ್ತದೆ" ಎಂದು ಬಸವರಾಜ ಹೊರಟ್ಟಿ ತಿಳಿಸಿದರು.

ಯಾರೂ ಕಮರ್ಷಿಯಲ್ ಆಗಬಾರದು; "ಮಕ್ಕಳ ಕಲಿಕಾ ಮಟ್ಟ ಸುಧಾರಿಸಲು ಸರ್ಕಾರ ಎಲ್ಲ ರೀತಿಯ ಕ್ರಮ ತೆಗೆದುಕೊಳ್ಳಬೇಕು. ಮಕ್ಕಳ ವಿಷಯದಲ್ಲಿ ಯಾರು ಕಮರ್ಷಿಯಲ್ ಆಗಬಾರದು. ಇದೀಗ ಪಠ್ಯಪುಸ್ತಕ, ಸಮವಸ್ತ್ರ ಸರಿಯಾಗಿ ಮಕ್ಕಳಿಗೆ ತಲುಪುತ್ತಿಲ್ಲ. ಅದನ್ನು ಸರ್ಕಾರ ಮತ್ತು ಅಧಿಕಾರಿಗಳು ಕಾಲಕಾಲಕ್ಕೆ ತಲುಪಿಸುವ ಕೆಲಸ ಮಾಡಬೇಕು" ಎಂದು ಬಸವರಾಜ ಹೊರಟ್ಟಿ ಆಗ್ರಹಿಸಿದರು.
"ನನ್ನ ಅಧಿಕಾರದ ಅವಧಿಯಲ್ಲಿ ಮೇ ತಿಂಗಳಲ್ಲಿಯೇ ಸೈಕಲ್, ಪುಸ್ತಕ ಕೊಡುವ ಪದ್ದತಿ ಇತ್ತು. ಆದರೆ ಕೆಲವೊಂದು ಅಧಿಕಾರಿಗಳ ನಿರ್ಲಕ್ಷ್ಯದಿಂದ ದೊಡ್ಡ ಮಟ್ಟದ ಸಮಸ್ಯೆಗೆ ಕಾರಣವಾಗುತ್ತದೆ. ಹಾಗಾಗಿ ಶಾಲೆ ಪ್ರಾರಂಭದಲ್ಲೇ ಎಲ್ಲ ಸೌಲಭ್ಯ ಕಲ್ಪಿಸುವ ಕೆಲಸವನ್ನು ಸರ್ಕಾರ ಮಾಡಬೇಕು" ಎಂದು ಒತ್ತಾಯಿಸಿದರು.

"ನಾನು ಸಭಾಪತಿಯಂತಹ ಜವಾಬ್ದಾರಿ ಸ್ಥಾನದಲ್ಲಿದ್ದಾಗ ಶಿಕ್ಷಣ ವ್ಯವಸ್ಥೆಯ ಕೆಲ ಸಮಸ್ಯೆಗಳ ಕುರಿತು ಸರ್ಕಾರಕ್ಕೆ 112 ಪತ್ರಗಳನ್ನು ಬರೆದಿದ್ದೆ. ಆದರೆ ಅದ್ಯಾವುದಕ್ಕೂ ಸರ್ಕಾರದಿಂದ ಒಂದೇ ಒಂದು ಉತ್ತರ ಬಂದಿಲ್ಲ" ಎಂದು ಬಸವರಾಜ ಹೊರಟ್ಟಿ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.












Click it and Unblock the Notifications