ಹುಬ್ಬಳ್ಳಿ ಟು ಬೆಂಗಳೂರು; ರೈಲಿನಲ್ಲಿ ಇನ್ನು ಐದೇ ತಾಸು?
ಬೆಂಗಳೂರು, ಡಿಸೆಂಬರ್ 18: ರೈಲಿನಲ್ಲಿ ಹುಬ್ಬಳ್ಳಿಯಿಂದ ಬೆಂಗಳೂರಿಗೆ 5 ಗಂಟೆಯಲ್ಲಿ ಸಂಚರಿಸಲು ಸಾಧ್ಯವೇ ಎಂಬುದನ್ನು ಅಧ್ಯಯನ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ರೈಲ್ವೆ ಖಾತೆ ರಾಜ್ಯ ಸಚಿವ ಸರೇಶ್ ಅಂಗಡಿ ಹೇಳಿದ್ದಾರೆ.
ರೈಲ್ವೆ ಇಲಾಖೆಯ ನೇಮಕಾತಿ ಮಂಡಳಿ (ಆರ್ ಆರ್ ಬಿ) ಉಪ ಕಾರ್ಯಾಲಯ ಉದ್ಘಾಟಿಸಿ ಮಾತನಾಡಿದ ಅವರು, ಅಧಿಕಾರಿಗಳು ಅಧ್ಯಯನ, ಪರಿಶೀಲನೆ ನಡೆಸಿದ ನಂತರ ರೈಲು ಸಂಚಾರ ಮಾಡಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಹುಬ್ಬಳ್ಳಿ ಮತ್ತು ಬೆಂಗಳೂರು ನಡುವೆ ಪೂರ್ತಿ ಜೋಡಿ ಮಾರ್ಗವಿಲ್ಲ, ಇರುವ ಸೌಲಭ್ಯದಲ್ಲಿ ಈ ರೈಲನ್ನು ಓಡಿಸಲು ಸಾಧ್ಯವೇ ಎಂದು ಪರಿಶೀಲಿಸುತ್ತಿದ್ದೇವೆ ಎಂದು ಸಚಿವ ಸುರೇಶ್ ಅಂಗಡಿ ಹೇಳಿದರು.

ಇದೇ ಸಂಧರ್ಭದಲ್ಲಿ ಮಂಗಳೂರು-ಬೆಂಗಳೂರು, ಬೀದರ್-ಕಲಬುರ್ಗಿ, ಬೀದರ್-ಬೆಂಗಳೂರು ರೈಲು ಪ್ರಾರಂಭಿಸಬೇಕೆಂಬ ಹಲವು ದಿನಗಳ ಬೇಡಿಕೆಯನ್ನು, ಆದಷ್ಟು ಶೀಘ್ರದಲ್ಲಿ ಪ್ರಾರಂಭಿಸಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಸದ್ಯ ಕರ್ನಾಟಕದಲ್ಲಿ ದಾವಣಗೆರೆ-ತುಮಕೂರು ಹಾಗೂ ಬಾಗಲಕೋಟೆ-ಕುಡಚಿ ಮಾರ್ಗದಲ್ಲಿ ಜೋಡಿ ಮಾರ್ಗದ ನಿರ್ಮಾಣಕ್ಕೆ ಭೂಸ್ವಾಧೀನದ ಸಮಸ್ಯೆಯಿದೆ. ಶೀಘ್ರದಲ್ಲಿ ಬಗೆಹರಿಸಲಾಗುವುದು ಎಂದರು.
ಬೆಳಗಾವಿಯ ಕಿತ್ತೂರನ್ನು ಎಕ್ಸ್ ಪೋರ್ಟ್ ಝೋನ್ ಮಾಡುವ ಯೋಜನೆಯಿದ್ದು, ರೈಲ್ವೆಗೆ ಬೇಕಾಗುವ ಬಿಡಿ ಭಾಗಗಳ ಉತ್ಪಾದನೆಗೆ ಮುಂದೆ ಬರುವ ಸಣ್ಣ ಕೈಗಾರಿಕೆಗಳಿಗೆ ಆದ್ಯತೆ ನೀಡಲಾಗುವುದು ಎಂದು ಹೇಳಿದರು.












Click it and Unblock the Notifications