ಈ ಬಾರಿ ಪಿಓಪಿ ಗಣೇಶ ಮೂರ್ತಿಗಿಲ್ಲ ಅವಕಾಶ, ಹುಬ್ಬಳ್ಳಿ ಪಾಲಿಕೆ ಆದೇಶ
ಹುಬ್ಬಳ್ಳಿ, ಜೂನ್, 26 : ಗಣೇಶ ಹಬ್ಬಕ್ಕೆ ಇನ್ನೇರಡು ತಿಂಗಳು ಬಾಕಿ ಇದೆ. ಆಗಲೇ ಪ್ಲಾಸ್ಟರ್ ಆಫ್ ಪ್ಯಾರಿಸ್ ನಿಂದ ತಯಾರಿಸಿದ ಗಣೇಶ ವಿಗ್ರಹಗಳ ನಿಷೇಧದ ಬಗ್ಗೆಯೂ ಚರ್ಚೆ ಆರಂಭವಾಗಿದೆ.
ಆಗಸ್ಟ್ 25(ಶುಕ್ರವಾರ) ಕರ್ನಾಟನದಾದ್ಯಂತ ಗಣೇಶ ಚತುರ್ಥಿಯನ್ನು ಆಚರಿಸಲಾಗುತ್ತದೆ. ಅದೇ ತರಹನಾಗಿ ಉತ್ತರ ಕರ್ನಾಟಕದ ಪ್ರಮುಖ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಪ್ರತಿವರ್ಷ ಗಣೇಶ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗುತ್ತದೆ.
ಇದಕ್ಕಾಗಿ ವರ್ಷದಿಂದಲೇ ತಯಾರಿ ನಡೆಸಲಾಗುತ್ತಿದ್ದು, ಸಾರ್ವಜನಿಕ ಗಣೇಶ ಉತ್ಸವ ಸಮಿತಿಗಳು ನಗರ ವಿವಿಧ ಬಡಾವಣೆಗಳಲ್ಲಿ ಪ್ರತಿಷ್ಠಾಪಿಸುವ ಬೃಹದಾಕಾರದ ವಿವಿಧ ವಿನ್ಯಾಸಗಳ ಗಣೇಶ ಮೂರ್ತಿಗಳು ಗಮನ ಸೆಳೆಯುತ್ತವೆ.
ಆದರೆ, ಈ ಬಾರಿ 'ಪ್ಲಾಸ್ಟರ್ ಆಪ್ ಪ್ಯಾರಿಸ್' (ಪಿಓಪಿ) ನಿಂದ ತಯಾರಿಸುವ ಗಣೇಶ ಮೂರ್ತಿಗಳಿಗೆ ಕಡಿವಾಣ ಬೀಳಲಿದ್ದು, ಮೂರ್ತಿಗಳ ಎತ್ತವನ್ನೂ ಪೊಲೀಸ್ ಇಲಾಖೆಯೇ ನಿರ್ಧರಿಸಲು ಉದ್ದೇಶಿಸಿರುವುದು ಉತ್ಸವದ ಸಂಭ್ರಮಕ್ಕೆ ಕೊಂಚ ಅಡೆ-ತಡೆಯಾಗುವ ಸಾಧ್ಯತೆ ಹೆಚ್ಚಿದೆ. ಇತ್ತೀಚಿಗೆ ನಡೆದ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಪಿಓಪಿ ಗಣೇಶ ಮೂರ್ತಿ ಬೇಡಾ
ಪರಿಸರ ಸ್ನೇಹಿ ಮೂರ್ತಿಗಳನ್ನು ಪ್ರೋತ್ಸಾಹಿಸಲು ಮುಂದಾಗಿರುವ ಮಹಾನಗರ ಪಾಲಿಕೆ ಆಯುಕ್ತ ಸಿದ್ಧಲಿಂಗಯ್ಯ ಹಿರೇಮಠ ಅವರು, ಮುಂಬರುವ ಗಣೇಶ ಹಬ್ಬಕ್ಕೆ 'ಪ್ಲಾಸ್ಟರ್ ಆಫ್ ಪ್ಯಾರಿಸ್' (ಪಿಒಪಿ) ಮೂರ್ತಿಗಳನ್ನು ಪ್ರತಿಷ್ಠಾಪಿಸುವಂತಿಲ್ಲ ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಸುಪ್ರೀಂ ಕೋರ್ಟ್ ಆದೇಶದನ್ವಯ ಪರಿಸರಕ್ಕೆ ಹಾನಿಯಾಗುವುದನ್ನು ತಡೆಯಲು ಪಿಒಪಿ ಮೂರ್ತಿಗಳನ್ನು ನಿಷೇಧಿಸಲಾಗಿದೆ. ಯಾವುದೇ ಕಾರಣಕ್ಕೂ ಅಂಥ ಮೂರ್ತಿಗಳಿಗೆ ಅವಕಾಶ ನೀಡುವುದಿಲ್ಲ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ.

ಗಣೇಶ ಮೂರ್ತಿಗಳ ಎತ್ತರಕ್ಕೂ ಬೀಳಲಿದೆ ಕಡಿವಾಣ
ಇನ್ನೊಂದಡೆ ಸಾರ್ವಜನಿಕ ಸ್ಥಳಗಳಲ್ಲಿ ಪ್ರತಿಷ್ಠಾಪಿಸುವ ಎತ್ತರದ ಗಣೇಶ ಮೂರ್ತಿಗಳಿಗೆ ಕಡಿವಾಣ ಬೀಳಲಿದ್ದು, ಇಲಾಖೆ ನಿಗದಿಪಡಿಸುವ ಮಾನದಂಡದಂತೆ ಮೂರ್ತಿಗಳನ್ನು ಪ್ರತಿಷ್ಠಾಪಿಸುವಂತೆ ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮಿಷನರೇಟ್ ಆದೇಶಿಸಿದೆ.

ವಿದ್ಯುತ್ ಅವಘಡ ತಡೆಗೆ ಎತ್ತರ ಗಣೇಶ ಮೂರ್ತಿಗೆ ತಡೆ
'ಈ ಬಾರಿ ಗಣೇಶ ಉತ್ಸವಕ್ಕಾಗಿ ಸಾರ್ವಜನಿಕ ಸ್ಥಳಗಳಲ್ಲಿ ಪ್ರತಿಷ್ಠಾಪಿಸುವ ಗಣೇಶ ಮೂರ್ತಿಗಳ ಎತ್ತರ ಹಾಗೂ ಗಾತ್ರವನ್ನು ನಾವು ನಿರ್ಧರಿಸುತ್ತೇವೆ. ಮೆರವಣಿಗೆ ಸಂದರ್ಭದಲ್ಲಿ ವಿದ್ಯುತ್ ಅವಘಡ ಸಂಭವಿಸಬಾರದು ಎಂಬ ಕಾರಣಕ್ಕೆ ಈ ಕ್ರಮ ತೆಗೆದುಕೊಳ್ಳಲಾಗಿದ್ದು, ಪರಿಸರ ಸ್ನೇಹಿ ಗಣೇಶ ಮೂರ್ತಿಗಳಿಗೆ ಒತ್ತು ನೀಡಬೇಕು' ಎಂದು ಅವರು ಮನವಿ ಮಾಡಿದ್ದಾರೆ.

ಗಣೇಶ ಮೂರ್ತಿ ತಯಾರಕರ ಅಸಮಾಧಾನ
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಹಾಗೂ ಪೊಲೀಸ್ ಇಲಾಖೆಯ ಈ ಆದೇಶಕ್ಕೆ ಕಲಾವಿದರು ತೀವ್ರ ಅಸಮದಾನ ವ್ಯಕ್ತಪಡಿಸಿದ್ದು, ಅನಗತ್ಯ ನಿಯಮಗಳು ಹಬ್ಬದ ಆಚರಣೆಗೆ ಅಡ್ಡಿಯಾಗಲಿವೆ ಎಂಬ ಆತಂಕ ವ್ಯಕ್ತಪಡಿಸಿದ್ಧಾರೆ. ಈ ವರ್ಷ ಹುಲ್ಲಿನಿಂದ ಮಾಡಿದ ಪಿಓಪಿ ಗಣೇಶ ಮೂರ್ತಿಗಳಿಗೆ ಅವಕಾಶ ನೀಡಬೇಕು ಎಂದು ಮೂರ್ತಿ ತಯಾರಕರ ಹಾಗೂ ಪೆಂಟಿಂಗ್ ಕಲಾವಿದರು ಪಾಲಿಕೆ ಆಯುಕ್ತರಿಗೆ ಮನವಿ ಮಾಡಿದ್ದಾರೆ. ಆದರೆ ಈ ಮನವಿಯನ್ನು ಆಯುಕ್ತರು ಸಾರಾಸಗಟವಾಗಿ ತಿರಸ್ಕರಿಸಿದ್ದಾರೆ.












Click it and Unblock the Notifications