ಹುಬ್ಬಳ್ಳಿ: ಹಾಲಿ ಸಿಎಂ ಹೇಳಿಕೆ ಸಮರ್ಥಿಸಿಕೊಂಡು ಮಾಜಿ ಸಿಎಂ
ಹುಬ್ಬಳ್ಳಿ, ಡಿಸೆಂಬರ್ 06: ರಾಜ್ಯದ ಮುಸ್ಲಿಂ ಹಿತರಕ್ಷಣೆ ಮಾಡುವ ಹೇಳಿಕೆಯನ್ನು ದೊಡ್ಡದು ಮಾಡುವ ಅವಶ್ಯಕತೆ ಇಲ್ಲ ಎಂದು ಹೇಳುವ ಮೂಲಕ ಹಾಲಿ ಸಿಎಂ ಹೇಳಿಕೆಯನ್ನು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಸಮರ್ಥಿಸಿಕೊಂಡಿದ್ದಾರೆ. ಈ ಮೂಲಕ ಬಿಜೆಪಿಗೆ ಟಾಂಗ್ ಕೊಟ್ಟಿದ್ದಾರೆ.
ಹುಬ್ಬಳ್ಳಿಯಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ಇಂತಹ ವಿಚಾರ ದೊಡ್ಡದು ಮಾಡುವಂತದ್ದಲ್ಲವೇ ಅಲ್ಲಾ. ನನಗೆ ಅರ್ಥವೇ ಆಗುತ್ತಿಲ್ಲ. ಸಿಎಂ ಸಿದ್ದರಾಮಯ್ಯ ಹೇಳಿಕೆಯನ್ನು ನಾನು ಸಹ ಗಮನಿಸಿದ್ದೇನೆ. ಮುಸ್ಲಿಮರ ಹಿತರಕ್ಷಣೆ ಮಾಡುತ್ತೇನೆ ಎಂದು ಹೇಳಿದ್ದಾರೆ ಎಂದು ಸಮರ್ಥಿಸಿಕೊಂಡಿದ್ದಾರೆ.

ಬೇರೆ ಬೇರೆ ಸಮಾಜದ ಕಾರ್ಯಕ್ರಮಗಳಿಗೆ ಹೋದಾಗ ಅವರವರ ಹಿತರಕ್ಷಣೆ ಮಾಡುತ್ತೀನಿ ಎಂದು ಹೇಳುವುದು ಸಹಜ. ಇಲ್ಲ ನಿಮ್ಮ ಹಿತ ರಕ್ಷಣೆ ಮಾಡುವುದಿಲ್ಲ ಎಂದು ಹೇಳುತ್ತಾರೆಯೇ? ಎಂದು ಶೆಟ್ಟರ್ ಪ್ರಶ್ನಿಸಿದ್ದಾರೆ.
ಸಿದ್ದರಾಮಯ್ಯನವರೇ ಉತ್ತರ ಕೊಡ್ತಾರೆ: ಶೆಟ್ಟರ್
ಮುಸ್ಲಿಂ ಸಮಾಜದ ಕಾರ್ಯಕ್ರಮಕ್ಕೆ ಹೋದಾಗಿ ಹಾಗೇ ಹೇಲಿದ್ದಾರೆ. ಅದನ್ನು ದೊಡ್ಡದು ಮಾಡುವ ಅವಶ್ಯಕತೆ ಇಲ್ಲ ಅದನ್ನು ಬಿಟ್ಟು ಬಿಡಿ, ಸಿದ್ದರಾಮಯ್ಯ ಅವರೇ ಸಮರ್ಥರಿದ್ದಾರೆ. ಅವರೇ ಅದರಲ್ಲಿ ಉತ್ತರ ಕೊಡುತ್ತಾರೆ ಎಂದು ತಿಳಿಸಿದರು.
ಉತ್ತರ ಕರ್ನಾಟಕ ಅಭಿವೃದ್ಧಿ ವಿಚಾರ, ಅದರ ಬಗ್ಗೆ ಚರ್ಚೆ ಆಗಲೇಬೇಕು. ವಿರೋಧ ಪಕ್ಷದವರ ಮೇಲೆ ಕೂಡ ಸಾಕಷ್ಟು ಜವಾಬ್ದಾರಿ ಇದೆ, ಉತ್ತರ ಕರ್ನಾಟಕ ಅಭಿವೃದ್ಧಿ ಬಗ್ಗೆ ಪ್ರತಿಪಕ್ಷದವರು ದ್ವನಿ ಎತ್ತಿದರೆ ಖಂಡಿತವಾಗಿ ಚರ್ಚೆ ಆಗುತ್ತೆ.
ಉತ್ತರ ಕರ್ನಾಟಕ ಅಭಿವೃದ್ಧಿ ಅಂತ ಬಂದರೆ ಮಹದಾಯಿ ಕಳಸ ಬಂಡೂರಿ ಸೇರಿ ಎಲ್ಲ ವಿಷಯಗಳು ಒಳಗೊಳ್ಳುತ್ತವೆ ಎಂದರು.

ಯತ್ನಾಳ್ ಅಸಮಾಧಾನಕ್ಕೆ ಏನಂದ್ರು ಶೆಟ್ಟರ್?
ರಾಜ್ಯಾಧ್ಯಕ್ಷ ನೇಮಕ ನಂತರ ಯತ್ನಾಳ್ ಅಸಮಾಧಾನ ವಿಚಾರ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಶೆಟ್ಟರ್, ಈ ಪ್ರಶ್ನೆಗೆ ಅವರವರೇ ಮಾತನಾಡಬೇಕು. ನಾನು ಆ ಬಗ್ಗೆ ಏನು ಮಾತನಾಡಲಿ? ನಾನು ಹಿಂದೇನು ಸಾಕಷ್ಟು ಬಾರಿ ಹೇಳಿದ್ದೇನೆ. ಪದೇ ಪದೇ ಹೇಳುವುದರಲ್ಲಿ ಅರ್ಥವಿಲ್ಲ ಎಂದು ಹೇಳಿದರು.
ಹುಬ್ಬಳ್ಳಿಯಲ್ಲಿ ನಡೆದ ಮುಸ್ಲಿಂ ಸಮುದಾಯ ಸಮಾವೇಶದಲ್ಲಿ ಸಿಎಂ ಸಿದ್ದರಾಮಯ್ಯ ಪಾಲ್ಗೊಂಡಿದ್ದರು. ಈ ವೇಳೆ ಮಾತನಾಡುವಾಗ ರಾಷ್ಟ್ರದ ಸಂಪತ್ತಿನ ಪಾಲು ಮುಸ್ಲಿಮರಿಗೆ ನೀಡುವುದಾಗಿ, ನಿಮ್ಮ ಹಿತರಕ್ಷಣೆ ಕಾಯುವುದಾಗಿ ಹೇಳಿದ್ದರು. ಇದು ಇದೀಗ ವಿವಾದ ಅಲೆ ಎಬ್ಬಿಸಿದೆ.
ಈ ಹೇಳಿಕೆ ಹೊರ ಬೀಳುತ್ತಿದ್ದಂತೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು, ಮುಖ್ಯಮಂತ್ರಿಗಳು ಐಸಿಸ್ ಸಂಪರ್ಕ ಹೊಂದಿರುವ ಮೌಲ್ವಿಗಳ ಜೊತೆಗೆ ವೇದಿಕೆ ಹಂಚಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ. ಸದ್ಯ ಇವೆರಡು ಹೇಳಿಕೆಗಳು ತೀವ್ರ ಚರ್ಚೆಯಾಗುತ್ತಿವೆ.












Click it and Unblock the Notifications