ರಾಜ್ಯದಲ್ಲಿ ಹೆಚ್ಚುತ್ತಿದೆ ಕುಡಿಯುವ ನೀರಿಗಾಗಿ ಹಾಹಾಕಾರ: ಎಲ್ಲಿದೆಯೋ ಜನರ ಬಗ್ಗೆ ಚಿಂತಿಸುವ ಸರ್ಕಾರ?
ಹುಬ್ಬಳ್ಳಿ, ಮೇ 17: ಧಾರವಾಡ ಜಿಲ್ಲೆಯಲ್ಲಿ ತಾಪಮಾನದ ಪ್ರಮಾಣ ಹೆಚ್ಚಾದಂತೆ ಕುಡಿಯುವ ನೀರಿಗೂ ಹಾಹಾಕಾರ ಹೆಚ್ಚಾಗಿದೆ. ಬಿಸಿಲಿನ ಬೇಗೆಯಿಂದ ತಪ್ಪಿಸಿಕೊಳ್ಳುವಲ್ಲಿ ಹೈರಾಣಾಗಿರುವ ಜನರು ಕುಡಿಯುವ ನೀರಿಗಾಗಿ ದಿನವೂ ಸರ್ಕಸ್ ಮಾಡುವಂತಾಗಿದೆ. ನೀರಿಗಾಗಿ ಹುಬ್ಬಳ್ಳಿ ತಾಲೂಕಿನ ಬ್ಯಾಹಟ್ಟಿ ಗ್ರಾಮದ ಜನರ ಸ್ಥಿತಿ ಚಿಂತಾಜನಕವಾಗಿದೆ.
ಹುಬ್ಬಳ್ಳಿ ತಾಲೂಕಿನ ಬ್ಯಾಹಟ್ಟಿ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸಿದೆ. ಇದ್ದ ಮೂರು ಶುದ್ಧ ನೀರಿನ ಘಟಕಗಳು ಕೈಕೊಟ್ಟಿದ್ದು, ಕುಡಿಯಲು ನೀರು ಬೇಕಾದರೆ ಅಕ್ಕಪಕ್ಕದ ಗ್ರಾಮಕ್ಕೆ ಹೋಗಿ ತರುವಂತಾಗಿದ್ದು, ಎಷ್ಟೇ ಅಭಿವೃದ್ಧಿ ಮಂತ್ರ ಜಪಿಸಿದರೂ ಕೂಡ ಕುಡಿಯುವ ನೀರಿಗಾಗಿ ಹಾಹಾಕಾರ ಎದುರಾಗಿರುವುದು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ.

ಇ ಹುನ್ನುಬ್ಬಳ್ಳಿ ನಗರದಿಂದ ಕೇವಲ 18 ಕಿಮೀ ದೂರದಲ್ಲಿರುವ ಬ್ಯಾಹಟ್ಟಿ ಗ್ರಾಮದಲ್ಲಿ ಕಳೆದ 6 ತಿಂಗಳಿಂದ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದೆ. ಗ್ರಾಮಕ್ಕೆ ನೀರು ಪೂರೈಕೆ ಮಾಡಲು ನಿರ್ಮಿಸಿರುವ ಮುಖ್ಯ ಕ್ವಾರಿಯಲ್ಲಿನ ನೀರು ಕಲುಷಿತವಾಗಿದೆ. ಇದರ ಸಮರ್ಪಕ ನಿರ್ವಹಣೆ, ಹೂಳೆತ್ತದಿರುವುದೇ ಸಮಸ್ಯೆಗೆ ಕಾರಣ.
ಇದೇ ನೀರನ್ನು ಗ್ರಾಮಕ್ಕೆ, ಶುದ್ಧ ನೀರಿನ ಘಟಕಗಳಿಗೆ ಸರಬರಾಜು ಮಾಡಲಾಗುತ್ತಿದ್ದು, ಇದರಿಂದಾಗಿ ಇದ್ದ 3 ಶುದ್ಧ ನೀರಿನ ಘಟಕಗಳು ಕೂಡ ಬಂದ್ ಆಗಿವೆ. ಗ್ರಾಮಸ್ಥರು ಶುದ್ಧ ಕುಡಿಯುವ ನೀರು ಬೇಕಾದಲ್ಲಿ ಪಕ್ಕದ 5-6 ಕಿ.ಮೀ ದೂರದ ಕುಸುಗಲ್ಲ, 12-13 ದೂರದಲ್ಲಿರುವ ತಿರ್ಲಾಪುರಕ್ಕೆ ತೆರಳುವಂತಾಗಿದೆ.

ಕ್ವಾರಿಯಲ್ಲಿರುವ ನೀರನ್ನು ಪರೀಕ್ಷೆಗೆ ಕಳಿಸಿದಾಗ ಅದು ಕುಡಿಯಲು ಯೋಗ್ಯವಾಗಿದೆ ಎಂಬ ವರದಿ ಬಂದಿದೆ ಎಂಬುದು ಗ್ರಾಮ ಪಂಚಾಯತ್ ಸದಸ್ಯರ ವಾದವಾಗಿದೆ. ಆದರೆ, ಗ್ರಾಮಸ್ಥರು ಹೇಳುವಂತೆ ಕ್ವಾರಿಯಿಂದ ಪೂರೈಕೆಯಾಗುತ್ತಿರುವ ವ್ಯವಸ್ಥೆ ಸಂಪೂರ್ಣ ಹಾಳಾಗಿದ್ದು, ನಲ್ಲಿಯಲ್ಲಿ ಜೊಂಡು, ಹುಳುಗಳು ಬರುತ್ತಿವೆ. ಇಂತಹ ನೀರನ್ನು ಹೇಗೆ ಕುಡಿಯಬೇಕು.
ಈ ಕುರಿತು ಈಗಾಗಲೇ ಗ್ರಾಮಸ್ಥರು, ಗ್ರಾಮ ಪಂಚಾಯತ್ ಅಧ್ಯಕ್ಷರಿಗೆ, ಪಿಡಿಓಗೆ ಲಿಖಿತ, ಮೌಖಿಕ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ ಸ್ಥಳೀಯ ಅಧಿಕಾರಿಗಳು ಹಾಗೂ ನೂತನ ಜನಪ್ರತಿನಿಧಿಗಳು ಎಚ್ಚೆತ್ತುಕೊಂಡು ಜನರ ಸಮಸ್ಯೆಗೆ ಸ್ಪಂದಿಸಬೇಕಾಗಿದೆ.












Click it and Unblock the Notifications