ಬೊಮ್ಮಾಯಿ ಜನತಾ ದಳಕ್ಕೆ ಬಂದರೆ ಅದ್ಧೂರಿ ಸ್ವಾಗತ: ಸಿಎಂ ಇಬ್ರಾಹಿಂ
ಹುಬ್ಬಳ್ಳಿ, ನವೆಂಬರ್ 21 : 90ರ ದಶಕದಲ್ಲಿದ್ದ ಜನತಾ ದಳವನ್ನು ನಾವು ಪುನಃ ಸ್ಥಾಪನೆ ಮಾಡುತ್ತೇವೆ. ಜನತಾ ದಳವನ್ನು ಪುನರ್ ಸ್ಥಾಪನೆ ಮಾಡಲು ಎಲ್ಲಾ ಪ್ರಯತ್ನಗಳು ನಡೆದಿವೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಳೆ ಜನತಾ ದಳ ಒಂದುಗೂಡಿಸಲು ಬೆಂಗಳೂರಿನಲ್ಲಿ ಕಾರ್ಯಕ್ರಮವನ್ನು ರೂಪಿಸಿದ್ದೇವೆ. ಮಹಿಮಾ ಪಟೇಲ್ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದರು.
ಕುಮಾರಸ್ವಾಮಿ ಅವರ ಪಂಚರತ್ನ ಯಾತ್ರೆ ಭಾರಿ ಜೋರಾಗಿ ನಡೆಯುತ್ತಿದೆ. ಹಳೆ ಮೈಸೂರು ಭಾಗದಲ್ಲಿ ಪಂಚರತ್ನ ಜೋರಾಗಿದೆ. ಹಳ್ಳಿ ಜನ ಹಬ್ಬದಂತೆ ಸಂಭ್ರಮ ಪಡುತ್ತಿದ್ದಾರೆ. ಭರವಸೆ ನೀಡಿದ ಕಾರ್ಯಕ್ರಮವನ್ನು ನಾವು ಮಾಡದೇ ಹೋದರೆ 2028ರಲ್ಲಿ ನಾವು ಮತ್ತೆ ಮತ ಕೇಳಲು ಬರಲ್ಲ. ಆರೋಗ್ಯ, ಶಿಕ್ಷಣ, ನೀರಾವರಿ ನಮ್ಮ ಮೊದಲ ಆದ್ಯತೆಯಾಗಿದೆ. ಒಂದು ಹನಿ ನೀರು ಸಮುದ್ರ ಸೇರಲು ಬಿಡಲ್ಲ. ದೇವೇ ಗೌಡರ ರಾಜಕೀಯ ಹೋರಾಟವೇ ನೀರಾವರಿ ಎಂದು ಹೇಳಿದರು.

ಯಡಿಯೂರಪ್ಪ ಅವರ ಪರಿಸ್ಥಿತಿ ತಬ್ಬಲಿ ಆದೆಯಾ ಮಗನೇ ಎನ್ನುವ ರೀತಿ ಆಗಿದೆ
ಪಾಪ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಆಗಿದ್ದಾರೆ. ಒಂದು ಕಡೆ ಕೇಶವ ಕೃಪಾ, ಮತ್ತೊಂದು ಕಡೆ ಬಸವ ಕೃಪಾ. ಎರಡರ ಮಧ್ಯೆ ಮುಖ್ಯಮಂತ್ರಿಯಾಗಿ ಸಿಲುಕಿಕೊಂಡಿದ್ದಾರೆ. ನಮ್ಮಲ್ಲಿ ಟಿಕೆಟ್ ಕೊಡುವ ಜಾಗದಲ್ಲಿದ್ದವರು, ಅಲ್ಲಿ ಟಿಕೆಟ್ಗಾಗಿ ಕಾಯುತ್ತಿದ್ದಾರೆ. ಬಸವರಾಜ ಹೊರಟ್ಟಿಯವರು ನಮ್ಮಲ್ಲಿದ್ದವರು. ಅಲ್ಲಿಗೆ ಹೋಗಿ ಏನು ಮಾಡುತ್ತಿದ್ದಾರೆ. ಕೋನರೆಡ್ಡಿ ಅವರು ಈಗ ಟಿಕೆಟ್ಗಾಗಿ ಅರ್ಜಿ ಹಾಕಿದ್ದಾರೆ. ಇನ್ನು ಮಾಜಿ ಸಿಎಂ ಯಡಿಯೂರಪ್ಪ ಅವರ ಪರಿಸ್ಥಿತಿ ತಬ್ಬಲಿ ಆದೆಯಾ ಮಗನೇ ಎನ್ನುವ ರೀತಿ ಆಗಿದೆ ಎಂದು ವ್ಯಂಗ್ಯವಾಡಿದರು.

ಸಿದ್ದರಾಮಯ್ಯ ವರುಣಾದಿಂದ ಸ್ಪರ್ಧೆ ಮಾಡಲಿ
ವಿಪಕ್ಷ ನಾಯಕ ಸಿದ್ದರಾಮಯ್ಯ, ಮುಂದಿನ ಚುನಾವಣೆಗೆ ಕ್ಷೇತ್ರ ಹುಡುಕುವ ಪರಿಸ್ಥಿತಿ ಬಂದಿದೆ. ಇದು ಸ್ವಯಂಕೃತ ಅಪರಾಧ ಆದರೂ, ಅವರ ಮೇಲೆ ನನಗೆ ಗೌರವ ಇದೆ. ನಾನು ಅವರಿಗೆ ವರುಣಾದಿಂದ ಸ್ಪರ್ಧೆ ಮಾಡಲಿ ಎಂದು ಹೇಳುತ್ತೇನೆ. ಒಂದು ವೇಳೆ ಕೋಲಾರಕ್ಕೆ ಹೋದರೆ ಅವರನ್ನು ಬಿಸ್ಮಿಲ್ಲಾ ಮಾಡುತ್ತಾರೆ ಎಂದು ಇಬ್ರಾಹಿಂ ಲೇವಡಿ ಮಾಡಿದ್ದಾರೆ.
ಇನ್ನು ಇದೇ ವೇಳೆ ಮಂಗಳೂರು ಬ್ಲಾಸ್ಟ್ ಬಗ್ಗೆ ಮಾತನಾಡಿದ ಅವರು, ಕಳೆದ ಮೂರು ವರ್ಷಗಳ ಹಿಂದೆ ಆರ್ಎಸ್ಎಸ್ನ ಯುವಕ ಬ್ಲಾಸ್ಟ್ ಮಾಡಿದ್ದ. ಅದರ ಬಗ್ಗೆ ಇವರ್ಯಾರು ಮಾತನಾಡಿಲ್ಲ. ಇವರದು ಬರೀ ಹಿಜಾಬ್, ಹಲಾಲ್ ಕಟ್, ಜಟ್ಕಾ ಕಟ್ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಮ್ಮ ಪಕ್ಷದಲ್ಲಿ ಲಿಂಗಾಯುತರು ಹೆಚ್ಚಾಗಿದ್ದಾರೆ
ಮುಂದಿನ ಚುನಾವಣೆಯಲ್ಲಿ ಜೆಡಿಎಸ್ ಗೆಲುವಿನ ಬಗ್ಗೆ ಮಾತನಾಡಿದ ಅವರು, ನಾವು ಹಳೆ ಮೈಸೂರು ಭಾಗದಲ್ಲಿ 70 ಸೀಟ್ ಗೆಲ್ಲುತ್ತೇವೆ. ಉತ್ತರ ಕರ್ನಾಟಕದಲ್ಲಿ 40 ಸ್ಥಾನ ಗೆಲ್ಲುತ್ತೇವೆ. ಐದು ರಾಜ್ಯಗಳಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಹೊರತು ಪಡಿಸಿ ಅಧಿಕಾರಕ್ಕೆ ಬರಬೇಕು. 2023ರಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಹೊರತುಪಡಿಸಿ ಅಧಿಕಾರಕ್ಕೆ ಬಂದರೆ ನಮ್ಮ ಟಾರ್ಗೆಟ್ 2024ರ ಚುನಾವಣೆ. ಕೆ.ಸಿ ಚಂದ್ರಶೇಖರ್ ದೆಹಲಿಯಲ್ಲಿ ಸಭೆ ಕರೆದಿದ್ದಾರೆ ಎಂದರು.
ಇನ್ನು ನಮ್ಮ ಪಕ್ಷದಲ್ಲಿ ಲಿಂಗಾಯುತರು ಹೆಚ್ಚಾಗಿದ್ದಾರೆ. ನಮ್ಮ ಪಕ್ಷದಲ್ಲಿ ಲಿಂಗಾಯತರು ಇರಲಿಲ್ಲ. ಇದೀಗ ಲಿಂಗಾಯುತರು ಹೆಚ್ಚಾಗಿದ್ದಾರೆ. ಸಿಎಂ ಬಸವರಾಜ ಬೊಮ್ಮಾಯಿ ಜೆಡಿಎಸ್ಗೆ ಬಂದರೆ ನಾವು ಬೇಡ ಎನ್ನುವುದಿಲ್ಲ. ಬೊಮ್ಮಾಯಿ ಜನತಾ ದಳಕ್ಕೆ ಬಂದರೆ ನಾವು ಅದ್ಧೂರಿ ಸ್ವಾಗತ ಮಾಡುತ್ತೇವೆ ಎಂದು ಹೇಳಿದರು.

ಕುಮಾರಸ್ವಾಮಿ ಲೋಕಸಭೆ ಪ್ರವೇಶದ ಬಗ್ಗೆ ಸಿಎಂ ಇಬ್ರಾಹಿಂ ಭವಿಷ್ಯ
ಇನ್ನು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಕೇಂದ್ರಕ್ಕೆ ಹೋಗುತ್ತಾರೆ. ದೇವರ ಮೇಲೆ ವಿಶ್ವಾಸ ಇದೆ. ಜ್ಯೋತಿಷಿಗಳಿಂದ ಅಲ್ಲ ದೇವರ ವಿಶ್ವಾಸದಿಂದ ಕುಮಾರಸ್ವಾಮಿ ಕೇಂದ್ರಕ್ಕೆ ಹೋಗುತ್ತಾರೆ ಎಂದು ಎಚ್ಡಿ ಕುಮಾರಸ್ವಾಮಿ ಲೋಕಸಭೆ ಪ್ರವೇಶದ ಬಗ್ಗೆ ಸಿಎಂ ಇಬ್ರಾಹಿಂ ಭವಿಷ್ಯ ನುಡಿದರು.
ಮತ ಡಿಲೀಟ್ ಆಗಿರುವ ವಿಚಾರವಾಗಿ ಮಾತನಾಡಿದ ಅವರು, ಇದು ಕೇವಲ ಬೆಂಗಳೂರಿಗೆ ಸೀಮಿತವಲ್ಲ, ಬೆಂಗಳೂರು, ಮಂಗಳೂರು, ಹುಬ್ಬಳ್ಳಿ , ಧಾರವಾಡದಲ್ಲೂ ಹೀಗೆ ಆಗಿದೆ. ನಾಳೆ ಈ ಕುರಿತು ನಾನು ಹೋರಾಟ ಮಾಡುತ್ತೇನೆ. ಬೆಂಗಳೂರು ಚುನಾವಣಾ ಆಯೋಗದ ಕಚೇರಿ ಮುಂದೆ ಪ್ರತಿಭಟನೆ ಮಾಡುತ್ತೇನೆ. ನನ್ನ ನೇತೃತ್ವದಲ್ಲಿ ನಾಳೆ ಹೋರಾಟ ಎಂದು ಸಿ.ಎಂ ಇಬ್ರಾಹಿಂ ಹೇಳಿದ್ದಾರೆ.











Click it and Unblock the Notifications