ಕವಲು ಹಾದಿಯಲ್ಲಿದ್ದ ದಂಪತಿಯನ್ನು ಹುಬ್ಬಳ್ಳಿಯಲ್ಲಿ ಒಂದಾಗಿಸಿದ ದೀಪಕ್ ಮಿಶ್ರಾ
ಹುಬ್ಬಳ್ಳಿ, ಆಗಸ್ಟ್ 13: ಹುಬ್ಬಳ್ಳಿ ನೂತನ ನ್ಯಾಯಾಲಯಗಳ ಸಂಕೀರ್ಣಗಳ ಉದ್ಘಾಟನೆಗಾಗಿ ಆಗಮಿಸಿದ್ದ ಸುಪ್ರಿಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರು ಇಂದು ನೂತನ ನ್ಯಾಯಾಲಯದಲ್ಲಿ ಏರ್ಪಡಿಸಲಾಗಿದ್ದ ವಿಶೇಷ ಲೋಕ ಅದಾಲತ್ ನಲ್ಲಿ ಕೌಟುಂಬಿಕ ವಾಜ್ಯ ಒಂದನ್ನು ಖುದ್ದಾಗಿ ಇತ್ಯರ್ಥ ಪಡಿಸಿದರು. ಹುಬ್ಬಳ್ಳಿ ಕೌಟುಂಬಿಕ ನ್ಯಾಯಾಲಯದ ಮುಂದೆ ಇದ್ದ ಗಂಡ-ಹೆಂಡಿರ ನಡುವಿನ ವಿಚ್ಛೇದನ ಪ್ರಕರಣ ಬಗೆಹರಿಸಿ ದಂಪತಿ ಹಾಗೂ ಮಕ್ಕಳನ್ನು ಒಗ್ಗೂಡಿಸಿದರು.
ಇಲ್ಲಿನ ಕೇಶ್ವಾಪುರದ ನಿವಾಸಿ ಜಗದೀಶ್ ಶೆಳಗಿ ಹಾಗೂ ಪಾರ್ವತಿ ದಂಪತಿಗಳ ವಿಚ್ಛೇದನ ಪ್ರಕರಣ ವಿಶೇಷ ಲೋಕ ಅದಾಲತ್ ನಲ್ಲಿ ಭಾರತದ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಮುಂದೆ ವಿಚಾರಣೆಗೆ ಬಂದಿತು. ನ್ಯಾಯಿಕ ಸಂಧಾನಕಾರರಾದ ಮಹೇಶ್ ಪಾಟೀಲ್ ಹಾಗೂ ವಕೀಲ ಸಂಧಾನಕಾರರಾದ ಶೋಭಾ ಪವಾರ್ ಅವರು ಪ್ರಕರಣ ನಿರ್ವಹಿಸುತ್ತಿದ್ದರು. ವಿಚ್ಛೇದನ ಕೋರಿದ ದಂಪತಿ ಹಾಗೂ ಮಕ್ಕಳಾದ ರೋಹಿತ್, ನಂದಿನಿ, ರಕ್ಷಿತಾ ಹಾಗೂ ಸಿದ್ಧಾರ್ಥರೊಂದಿಗೆ ಮುಖ್ಯ ನ್ಯಾಯಮೂರ್ತಿಗಳ ಮುಂದೆ ಹಾಜರು ಪಡಿಸಿದರು.
ನ್ಯಾ. ದೀಪಕ್ ಮಿಶ್ರಾ ಅವರು ಗಂಡ-ಹೆಂಡತಿಗೆ ಕೌಂಟುಬಿಕ ಮೌಲ್ಯಗಳನ್ನು ತಿಳಿಸುವುದರ ಮೂಲಕ ವಾದಿ-ಪ್ರತಿವಾದಿಗಳ ಮನ ಒಲಿಸಿದರು. "ಈಗ ನೀವಿಬ್ಬರೂ ಹಟ ಬಿದ್ದು ವಿಚ್ಛೇದನ ಪಡೆದರೆ, ನಾಳೆ ನಿಮ್ಮ ಮಕ್ಕಳಿಗೆ ಯಾವ ರೀತಿಯಾಗಿ ಮದುವೆ ಹಾಗೂ ಕೌಟುಂಬಿಕ ಜೀವನವನ್ನು ಕಟ್ಟಿಕೊಳ್ಳಲು ಹೇಳುತ್ತೀರಿ? ನಿಮ್ಮ ನಡುವಿನ ಜಗಳಗಳನ್ನು ನೋಡಿ ಬೆಳದ ಮಕ್ಕಳು ಭವಿಷ್ಯದಲ್ಲಿ ಕುಂಟುಬ ವ್ಯವಸ್ಥೆಯಲ್ಲಿ ನಂಬಿಕೆ ಕಳೆದುಕೊಂಡು ಮದುವೆಯಾಗಲು ಹಿಂದೇಟು ಹಾಕುತ್ತಾರೆ. ಕುಟುಂಬ ವ್ಯವಸ್ಥೆ ಹಾಳಾದರೆ ಸಮಾಜದ ಸ್ವಾಸ್ಥ್ಯ ಕೆಡುತ್ತದೆ. ಮಕ್ಕಳಿಗೆ ಹಾಗೂ ಮುಂದಿನ ಪೀಳಿಗೆಗೆ ಮಾದರಿಯಾಗಿದ್ದು ನೈತಕವಾಗಿ ಜೀವಿಸಿ ಸುಖಸಂತಸದಿಂದರಿ ಎಂದು ಸಲಹೆ ನೀಡಿದರು.

ನ್ಯಾಯಮೂರ್ತಿಗಳ ಮಾತು ಕೇಳಿದ ದಂಪತಿ ತಮ್ಮ ವಿಚ್ಛೇದನ ಪ್ರಕರಣವನ್ನು ಹಿಂಪಡೆದು ಪ್ರಕರಣ ಸುಖಾಂತ್ಯಗೊಳಿಸಿಕೊಂಡರು. ಒಟ್ಟು 9 ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ವಿಶೇಷ ಲೋಕ ಅದಾಲತ್ ನಲ್ಲಿ ಬಗೆ ಹರಿಸಲಾಯಿತು. ಹುಬ್ಬಳ್ಳಿ ನೂತನ ನ್ಯಾಯಾಲಯಗಳ ಸಂಕೀರ್ಣದಲ್ಲಿ ನಡೆದ ಮೊದಲ ವಿಶೇಷ ಲೋಕ ಅದಾಲತ್ ನಲ್ಲಿ ಭಾರತದ ಮುಖ್ಯ ನ್ಯಾಯಮೂರ್ತಿಗಳೇ ಖುದ್ದಾಗಿ ಭಾಗವಹಿಸಿ ವಿಚ್ಛೇದನಕ್ಕೆ ಮುಂದಾಗಿದ್ದ ದಂಪತಿಗಳನ್ನು ಒಂದುಗೂಡಿಸಿದ್ದು ಐತಿಹಾಸಿಕ ನೆನಪಾಗಿ ಜನಮನದಲ್ಲಿ ಚಿರಕಾಲ ಉಳಿಯಲಿದೆ.












Click it and Unblock the Notifications