ಚಂದ್ರಯಾನ-3 ಯಶಸ್ವಿ ಹಿನ್ನೆಲೆ ಹುಬ್ಬಳ್ಳಿಯಲ್ಲಿ ಶಾಲಾ ವಿದ್ಯಾರ್ಥಿಗಳಿಂದ ಸಂಭ್ರಮವೋ.. ಸಂಭ್ರಮ
ಹುಬ್ಬಳ್ಳಿ, ಆಗಸ್ಟ್, 24: ಚಂದ್ರಯಾನ-3 ನೌಕೆಯು ಚಂದ್ರನ ಮೇಲೆ ಸಾಫ್ಟ್ ಲ್ಯಾಂಡಿಂಗ್ ಮಾಡುವ ಮೂಲಕ ಭಾರತೀಯ ಬಾಹ್ಯಾಕಾಶ ಸಂಸ್ಥೆ ಯಶಸ್ವಿಯಾದ ಹಿನ್ನೆಲೆ ನಗರದ ಕುಸುಗಲ್ ರಸ್ತೆಯಲ್ಲಿನ ಸಂಸ್ಕಾರ ಇಂಗ್ಲೀಷ್ ಮಿಡಿಯಂ ಶಾಲೆಯಲ್ಲಿ ವಿದ್ಯಾರ್ಥಿಗಳು, ಸಿಬ್ಬಂದಿ ಸಂಭ್ರಮಾಚರಣೆ ಮಾಡಿದರು.
ವಿಕ್ರಮ ಲ್ಯಾಂಡರ್ ಚಂದ್ರನ ಮೇಲೆ ಯಶಸ್ವಿಯಾಗಿ ಲ್ಯಾಂಡ್ ಆಗಿದ್ದು, ಈ ಹಿನ್ನೆಲೆ ಇಡೀ ದಿನ ಶಾಲಾ ಮಕ್ಕಳು ಕುಣಿದು ಕುಪ್ಪಳಿಸುವ ಜೊತೆಗೆ ಚಂದ್ರಯಾನ-3ರ ಮಹತ್ವ ಹಾಗೂ ಇದು ದೇಶದ ಅಭಿವೃದ್ಧಿಗೆ ಯಾವ ರೀತಿ ಪೂರಕ ಆಗಲಿದೆ ಎಂದು ಜಾಗೃತಿ ಮೂಡಿಸಿದರು. ವಿಕ್ರಂ ಲ್ಯಾಂಡರ್ ಚಂದ್ರಯಾನ-3 ಯಶಸ್ವಿಯಾದ ನಂತರ ಅದು ಉಪಗ್ರಹದ ಕಕ್ಷೆಗೆ ಯಾವ ರೀತಿ ಹೋಗುತ್ತದೆ ಮತ್ತು ಹೊಸ ಹೊಸ ಆವಿಷ್ಕಾರ ಹೇಗೆ ನಡೆಸಲಾಗುತ್ತದೆ ಎನ್ನುವ ಬಗ್ಗೆ ಅಧ್ಯಯನ ನಡೆಸಲಿದೆ.

ಇದರಲ್ಲಿ ಇಸ್ರೋ ಸಂಸ್ಥೆಯ ಪಾತ್ರ, ವಿಜ್ಞಾನಿಗಳ ಶ್ರಮ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರು ಸೇರಿದಂತೆ ಕೇಂದ್ರ ಸರ್ಕಾರ ಕೊಟ್ಟ ಸಹಕಾರ ಎಲ್ಲವನ್ನೂ ಸಮಗ್ರವಾಗಿ ತಿಳಿಹೇಳಲಾಯಿತು. ಅಲ್ಲದೆ ವಿದ್ಯಾರ್ಥಿಗಳು ಭಿತ್ತಿಪತ್ರ ಹಾಗೂ ರಾಷ್ಟ್ರ ಧ್ವಜಗಳನ್ನು ಪ್ರದರ್ಶಿಸಿ ವಿಜ್ಞಾನಿಗಳಿಗೆ ಶುಭ ಹಾರೈಸಿದರು.
ಸಂಸ್ಕಾರ ಶಾಲಾ ಮಕ್ಕಳಿಂದಲೇ ಥರ್ಮೋಕೋಲ್ನಲ್ಲಿ ಚಂದ್ರಯಾನ-3ರ ಮಾಡಲ್ ಅನ್ನು ಸಿದ್ಧಪಡಿಸಿ ವಿಶೇಷವಾಗಿ ಇಸ್ರೋ ವಿಜ್ಞಾನಿಗಳಿಗೆ ಶುಭ ಹಾರೈಸಿದ್ದು ಎಲ್ಲರ ಗಮನ ಸೆಳೆಯಿತು. ಈ ವೇಳೆ ಸಂಸ್ಕಾರ ಶಾಲೆಯ ಮುಖ್ಯಸ್ಥರಾದ ಮಹೇಂದ್ರ ಸಿಂಘಿ ಅವರ ಮಾರ್ಗದರ್ಶನದಲ್ಲಿ ಶಾಲೆಯ ಆಡಳಿತಾಧಿಕಾರಿ ವಿನೋದ, ಶಾಲಾ ಮುಖ್ಯ ಶಿಕ್ಷಕಿ ನಯನಾ, ಶಿಕ್ಷಕಿಯರಾದ ರಜನಿ ಗಲಗಲಿ, ಜ್ಯೋತಿ ಮೆಂಡಿಗೇರಿ, ಶ್ರೀಮತಿ ನಿಲೋಫರ್ ಧಾರವಾಡ, ವಿದ್ಯಾರ್ಥಿಗಳಾದ ಫೇಬಿನಾ ಶಾಹುಲ್, ಸಂಪದ ಶೀಲವಂತರ ಅವರು ಯಶಸ್ವಿಯಾಗಿ ಚಂದ್ರಯಾನ-3ರ ಬಗ್ಗೆ ಮಾಹಿತಿ ನೀಡಿದರು.
ಹಾಸನದಲ್ಲಿ ಪಾಟಾಕಿ ಸಿಡಿಸಿ ಸಂಭ್ರಮಿಸಿದ ಜನ
ಹಾಗೆಯೇ ಚಂದ್ರಯಾನ-3ರ ವಿಕ್ರಮ್ ಲ್ಯಾಂಡರ್ ಕೊನೆಗೂ ಚಂದ್ರನ ಮೇಲೆ ಲ್ಯಾಂಡ್ ಆಗಿದ್ದು, ಇಡೀ ವಿಶ್ವವೇ ಭಾರತದತ್ತ ತಿರುಗಿ ನೋಡುವಂತೆ ಮಾಡಿದೆ. ಅಲ್ಲದೇ ದೇಶದೆಲ್ಲೆಡೆ ಚಂದ್ರಯಾನ-3ರ ಯಶಸ್ವಿ ಸಂಭ್ರಮ ಮನೆ ಮಾಡಿದೆ. ಹಾಗೆಯೇ ಹಾಸನದಲ್ಲಿಯೂ ಜನರು ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಿದ್ದಾರೆ.
ವಿಕ್ರಂ ಲ್ಯಾಂಡರ್ ಚಂದ್ರನ ಮೇಲೆ ಇಳಿಯುತ್ತಿದ್ದಂತೆ ಹಾಸನದ ಎಂಜಿ ರಸ್ತೆಯಲ್ಲಿ ಜನರು ಪಟಾಕಿ ಸಿಡಿಸಿ ಜೈ ಇಸ್ರೋ ಎಂದು ಘೋಷಣೆ ಕೂಗುವುದಲ್ಲದೇ ಸಿಹಿ ಹಂಚಿ ಸಂಭ್ರಮಿಸಿದ್ದಾರೆ.












Click it and Unblock the Notifications