ಜೀವನದಲ್ಲಿ ಮರೆಯಲಾಗದ ಸೋಲನ್ನು ಅನುಭವಿಸುತ್ತೀರಿ: ಶೆಟ್ಟರ್ ವಿರುದ್ಧ ಬಿಎಸ್ವೈ ಕಿಡಿ
ಹುಬ್ಬಳ್ಳಿ, ಏಪ್ರಿಲ್ 26: ಜಗದೀಶ್ ಶೆಟ್ಟರ್ ನಂಬಿಕೆ ಮತ್ತು ವಿಶ್ವಾಸ ದ್ರೋಹ ಮಾಡಿದ್ದಾರೆ. ಅಮಿತ್ ಶಾ ಮಾತನಾಡಿದರೂ, ವಿಶ್ವಾಸ ದ್ರೋಹ ಮಾಡಿ ಹೊರಟು ಹೋಗಿದ್ದಾರೆ. ಜಗದೀಶ್ ಶೆಟ್ಟರ್ ಪಕ್ಷದ ಬೆನ್ನಿಗೆ ಚೂರಿ ಹಾಕಿ ಹೋಗಿದ್ದಾರೆ ಎಂದು ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಮಾಜಿ ಸಿಎಂ ಜಗದೀಶ್ ಶೆಟ್ಟರ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಹುಬ್ಬಳ್ಳಿಯಲ್ಲಿ ನಡೆದ ಬಹಿರಂಗ ಸಮಾವೇಶದಲ್ಲಿ ಮಾತನಾಡಿದ ಅವರು, ಜೀವನದಲ್ಲಿ ಮರೆಯಲಾಗದ ಸೋಲನ್ನು ನೀವು ಅನುಭವಿಸುತ್ತೀರಿ. ಜಗದೀಶ್ ಶೆಟ್ಟರ್ ದ್ರೋಹ ಮಾಡಿರುವ ಬಗ್ಗೆ ಕಾರ್ಯಕರ್ತರು ಜನರಿಗೆ ತಿಳಿಸಬೇಕು. ಇನ್ನೂ ಹತ್ತು-ಹನ್ನೇರಡು ದಿನ ಜಗದೀಶ್ ಶೆಟ್ಟರ್ ಬೆನ್ನಿಗೆ ಚೂರಿ ಹಾಕಿದ್ದರ ಬಗ್ಗೆ ಜನರಿಗೆ ಮನವರಿಕೆ ಮಾಡಬೇಕು. ಜಗದೀಶ್ ಶೆಟ್ಟರ್ ಅವರನ್ನು ಈ ಬಾರಿಗೆ ಮನೆಗೆ ಕಳುಹಿಸಬೇಕು ಎಂದು ಕಿಡಿಕಾರಿದರು.

ನಮ್ಮ ಪಕ್ಷದ ಅಭ್ಯರ್ಥಿ 25-30 ಸಾವಿರ ಮತಗಳ ಅಂತರದಿಂದ ಗೆಲ್ಲಿಸಬೇಕು. ಇಷ್ಟು ದೊಡ್ಡ ಮಟ್ಟದಲ್ಲಿ ಜನ್ರು ಸೇರಿದ್ದು ನೋಡಿದ್ರೆ ನನಗೆ ವಿಶ್ವಾಸ ಬಂದಿದೆ. ನಮಗೆ ದ್ರೋಹ ಮಾಡಿದ ಜಗದೀಶ್ ಶೆಟ್ಟರ್ ಮತ್ತು ಲಕ್ಷ್ಮಣ ಸವದಿ ಮನೆಗೆ ಹೋಗುತ್ತಾರೆ. ವಿಧಾನಸಭಾ ಚುನಾವಣೆಯಲ್ಲಿ ಸೋತ ಸವದಿಯನ್ನು ವಿಧಾನ ಪರಿಷತ್ ಸದಸ್ಯನನ್ನಾಗಿ ಮಾಡಿದ್ದೆ ನಾನು. ಅವನು ನನಗೆ ದ್ರೋಹ ಮಾಡಿದ್ದಾನೆ, ಇನ್ನೂ ಜಗದೀಶ್ ಶೆಟ್ಟರ್ ಕಥೆ ಬೇರೆ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಾತು ಮುಂದುವರಿಸಿದ ಅವರು, ನೀವು ಯಾರು ಶೆಟ್ಟರ್ ಜೊತೆಗೆ ಯಾರು ಓಡಾಟ ಮಾಡಬೇಡಿ. ಕಾಂಗ್ರೆಸ್ ಪಕ್ಷ ಮುಳುಗುತ್ತಿರುವ ಪಕ್ಷ, ಆ ಪಕ್ಷದ ನಾಯಕ ಯಾರು..? ಅವರು ತಬ್ಬಲಿಗಳಾಗಿದ್ದಾರೆ. ನನಗೆ ಈಗ 80 ವರ್ಷ, ನಾನು ಮನೆಯಲ್ಲಿ ಕುಳಿತುಕೊಳ್ಳುವುದಿಲ್ಲ. ನಾನು ಈಗ ಇಲ್ಲಿ ಬಂದಿರುವ ಉದ್ದೇಶ ಶೆಟ್ಟರ್ ಅವರನ್ನು ಮನಗೆ ಕಳುಹಿಸಲು ಎಂದಿದ್ದಾರೆ.

ನರೇಂದ್ರ ಮೋದಿ, ಅಮಿತ್ ಶಾ ಎದುರು ಯಂಕಾ, ನಾಣಿ, ಶಿನ ಏನೂ ಮಾಡಲುಸಾಧ್ಯವಿಲ್ಲ. ಜಗದೀಶ್ ಶೆಟ್ಟರ್ ಮನೆಗೆ ಹೋಗ್ತಾರೆ, ಮಹೇಶ್ ತೆಂಗಿನಕಾಯಿ ಗೆದ್ದು ನಿಮ್ಮ ಸೇವೆ ಮಾಡ್ತಾರೆ. ನಾನು ನರೇಂದ್ರ ಮೋದಿ ಮತ್ತು ಅಮಿತ್ ಶಾ ಗೆ ಮಾತು ಕೊಟ್ಟು ಬಂದಿದ್ದೇನೆ. 150 ಸ್ಥಾನದಲ್ಲಿ ಗೆದ್ದು ನಮ್ಮ ಪಕ್ಷವನ್ನು ಅಧಿಕಾರಕ್ಕೆ ತಡುತ್ತೇನೆ ಎಂದು ಮಾತು ಕೊಟ್ಟಿದ್ದೇನೆ. ನಮ್ಮ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡು ಬನ್ನಿ ಎಂದು ಕೈ ಮುಗಿದು ಪ್ರಾರ್ಥನೆ ಮಾಡುತ್ತೇನೆ. ಚುನಾವಣೆ ಮುಗಿದ ಬಳಿಕ ಇದೇ ಜಾಗದಲ್ಲಿ ಜಗದೀಶ್ ಶೆಟ್ಟರ್ ಸಮ್ಮುಖದಲ್ಲಿಯೇ 1 ಲಕ್ಷ ಜನರನ್ನು ಸೇರಿಸಿ ವಿಜಯೋತ್ಸವ ಮಾಡೋಣ ಎಂದು ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ವಿಧಾನಸಭಾ ಕ್ಷೇತ್ರದ ಮತದಾರರಲ್ಲಿ ಮನವಿ ಮಾಡಿದ್ದಾರೆ.











Click it and Unblock the Notifications