ಕೇರಳ, ತಮಿಳುನಾಡಿನಲ್ಲೂ ಬಿಜೆಪಿ ಬಾವುಟ ಹಾರಿಸುತ್ತೇವೆ: ಸಿ.ಟಿ ರವಿ
ಹುಬ್ಬಳ್ಳಿ, ಅಕ್ಟೋಬರ್ 21: ಮುಂದಿನ ಚುನಾವಣೆಯಲ್ಲಿ ದಕ್ಷಿಣ ಭಾರತದ ರಾಜ್ಯಗಳಾದ ತಮಿಳುನಾಡು, ಪುದುಚೇರಿ ಮತ್ತು ಕೇರಳದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯುವ ಗುರಿ ಬಿಜೆಪಿ ಪಕ್ಷ ಹೊಂದಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಹೇಳಿದ್ದಾರೆ.
ಹುಬ್ಬಳ್ಳಿ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಚಿವ ಸಿ.ಟಿ ರವಿ, "" ಬಿಜೆಪಿ ಪಕ್ಷವು ದಕ್ಷಿಣ ರಾಜ್ಯಗಳಲ್ಲಿ ಮಾತ್ರವಲ್ಲ, ಪಶ್ಚಿಮ ಬಂಗಾಳದಂತಹ ರಾಜ್ಯಗಳಲ್ಲಿಯೂ ವಿಜಯ ಮೆರವಣಿಗೆ ನಡೆಸುವ ಮಹತ್ವಾಕಾಂಕ್ಷೆ ಹೊಂದಿದೆ'' ಎಂದು ತಿಳಿಸಿದರು.
"ನಮ್ಮಲ್ಲಿ ಒಂದು ಕಾರ್ಯತಂತ್ರವಿದೆ ಮತ್ತು ಈ ದಕ್ಷಿಣ ರಾಜ್ಯಗಳ ಮುಂದಿನ ವಿಧಾನ ಸಭಾ ಚುನಾವಣೆಗಳಲ್ಲಿ ಅಪೇಕ್ಷಿತ ಫಲಿತಾಂಶಗಳನ್ನು ಸಾಧಿಸಲು ನಾವು ಕೆಲಸ ಮಾಡುತ್ತಿದ್ದೇವೆ. ಈ ಕ್ಷೇತ್ರಗಳಲ್ಲಿ ನಾವು ಇಲ್ಲಿಯವರೆಗೆ ಗೆದ್ದಿಲ್ಲ. ದಕ್ಷಿಣ ರಾಜ್ಯಗಳ ಉಸ್ತುವಾರಿಯಾಗಿರುವ ನನಗೆ ಉಸ್ತುವಾರಿ ನೀಡಿದ ಈ ರಾಜ್ಯಗಳಲ್ಲಿ ಬಿಜೆಪಿ ಗೆಲುವು ಸಾಧಿಸುತ್ತದೆ ಎಂಬ ವಿಶ್ವಾಸವಿದೆ' ಎಂದರು.

ಪ್ರಧಾನಿ ನರೇಂದ್ರ ಮೋದಿಯವರ ಆರು ವರ್ಷಗಳ ಅವಧಿಯನ್ನು "ಸುಧಾರಣೆಗಳ ಸುವರ್ಣ ಯುಗ' ಎಂದು ಕರೆದಿರುವ ಸಿ.ಟಿ ರವಿ ಅವರು, ಅನಗತ್ಯವಾಗಿದ್ದ 100 ಕ್ಕೂ ಹೆಚ್ಚು ಪುರಾತನ ನಿಯಮಗಳನ್ನು ಬೆಳವಣಿಗೆಗೆ ಆದ್ಯತೆ ನೀಡುವಂತೆ ಬದಲಾಯಿಸಲಾಗಿದೆ ಎಂದು ಹೇಳಿದರು.
"ಈ ಬದಲಾವಣೆಗಳು ಮುಂದಿನ ದಿನಗಳಲ್ಲಿ ಖಂಡಿತವಾಗಿಯೂ ದೇಶಸ ಜನರಿಗೆ ಫಲ ನೀಡುತ್ತವೆ. ಒಂಬತ್ತು ಕೋಟಿ ಶೌಚಾಲಯಗಳ ನಿರ್ಮಾಣ, ಭೂ ಸುಧಾರಣಾ ಕಾನೂನುಗಳು, ಕೃಷಿ ಕಾನೂನುಗಳ ತಿದ್ದುಪಡಿ, ಎಪಿಎಂಸಿ ಕಾನೂನುಗಳ ತಿದ್ದುಪಡಿ ಮೊದಲಾದವುಗಳ ಮೂಲಕ ಆಯಾ ಕ್ಷೇತ್ರದಲ್ಲಿ ಸುಧಾರಣೆಗಳನ್ನು ತಂದು ಜನರಿಗೆ ಅಧಿಕಾರ ನೀಡಲಾಗಿದೆ ಎಂದು ಅಭಿಪ್ರಾಯಪಟ್ಟರು.
ರಾಜರಾಜೇಶ್ವರಿ ನಗರ ಮತ್ತು ಶಿರಾ ವಿಧಾನಸಭೆ ಕ್ಷೇತ್ರಗಳ ಉಪ ಚುನಾವಣೆಗಳಲ್ಲಿ ಎರಡೂ ಸ್ಥಾನಗಳನ್ನು ಗೆಲ್ಲುವ ವಿಶ್ವಾಸ ಬಿಜೆಪಿಗೆ ಇದೆ ಎಂದು ಅವರು ಈ ಸಂದರ್ಭದಲ್ಲೇ ಹೇಳಿದರು.












Click it and Unblock the Notifications