ದೇಶವನ್ನು ಒಡೆದು ಆಳುತ್ತಿದೆ ಬಿಜೆಪಿ: ಕೆ.ಸಿ.ವೇಣುಗೋಪಾಲ್
ಹುಬ್ಬಳ್ಳಿ, ಅಕ್ಟೋಬರ್ 18: 'ಮುಸ್ಲಿಮರು ಹಿಂದು ವಿರೋಧಿಗಳು, ಅವರು ಹಸು ಸಾಕುವುದೇ ಅಪರಾಧ ಎಂಬಂತೆ ಬಿಜೆಪಿ ಬಿಂಬಿಸುತ್ತಿದೆ. ಇಂಥ ಧೋರಣೆಗಳಿಂದ ಸಮಾಜವನ್ನು ಒಡೆದು ಆಳುವ ನೀತಿಯನ್ನು ಅನುಸರಿಸುತ್ತಿದೆ' ಎಂದು ಕಾಂಗ್ರೆಸ್ ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಆರೋಪಿಸಿದ್ದಾರೆ.
ಎರಡು ದಿನಗಳ ಧಾರವಾಡ ಜಿಲ್ಲಾ ಪ್ರವಾಸದಲ್ಲಿ ಇರುವ ಕೆ.ಸಿ. ವೇಣುಗೋಪಾಲ್ ಅವರು ಹುಬ್ಬಳ್ಳಿ ಮತ್ತು ಧಾರವಾಡದ ಆಯ್ದ ಕೆಲ ಪ್ರದೇಶಗಳಿಗೆ 'ಮನೆ ಮನೆಗೆ ಕಾಂಗ್ರೆಸ್' ಪ್ರಚಾರ ಮಾಡಿದ್ದಾರೆ. ಇದೇ ವೇಳೆಯಲ್ಲಿ ಮಾತನಾಡಿದ ಅವರು, 'ಜಾತ್ಯತೀತ ತತ್ವದಲ್ಲಿ ನಂಬಿಕೆ ಇಟ್ಟಿರುವ ಕಾಂಗ್ರೆಸ್ ಎಲ್ಲರನ್ನೂ ಒಗ್ಗೂಡಿಸಿಕೊಂಡು ಹೋಗುವ ಪಕ್ಷವಾಗಿದೆ. ಸಮಾಜ ವಿಭಜಿಸುವ ರಾಜಕೀಯವನ್ನು ಎಂದಿಗೂ ಮಾಡಿಲ್ಲ. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ದೇಶವನ್ನು ಒಡೆದು ಆಳುತ್ತಿದೆ. ಹೀಗಾಗಿ ದೇಶದಲ್ಲಿ ಅರಾಜಕತೆ ಉಂಟಾಗಿದೆ' ಎಂದು ಕೇಂದ್ರ ಬಿಜೆಪಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.

'ಮುಂಬರುವ ರಾಜ್ಯ ಚುನಾವಣೆಗೆ ಕಾಂಗ್ರೆಸ್ ಸಿದ್ಧವಾಗಿದೆ. ರಾಜ್ಯದಾದ್ಯಂತ ಅಂದಾಜು 53 ಸಾವಿರ ಬೂತ್ ಸಮಿತಿ ರಚಿಸಲಾಗಿದೆ. ಅವುಗಳು ಸರಿಯಾಗಿ ಕಾರ್ಯ ನಿರ್ವಹಿಸುವಂತೆ ನೋಡಿಕೊಳ್ಳಬೇಕು ಆಗ ಮಾತ್ರ ಕಂಗ್ರಸ್ ಸರ್ಕಾರ ನಿಚ್ಚಳ ಬಹುಮತದಿಂದ ಆರಿಸಿ ಬರಲಿದೆ. 53 ಸಾವಿರ ಬೂತ್ ಸಮಿತಿಗಳು ಉತ್ತಮವಾಗಿ ಕೆಲಸ ಮಾಡುವಂತೆ ನೋಡಿಕೊಳ್ಳುವು ಜವಾಬ್ದಾರಿ ಇಲ್ಲಿನ ನಾಯಕರ ಮೇಲಿದೆ, ಬಿಜೆಪಿ ಅಧಿಕಾರಕ್ಕೆ ಬರುವ ಪೂರ್ವದಲ್ಲಿ ಪ್ರಧಾನಿ ಮೋದಿ ಅವರು ಒಳ್ಳೆಯ ದಿನಗಳು ಬರಲಿವೆ ಎಂದು ಹೇಳುತ್ತಿದ್ದರು. ಈಗ ಅವರ ಒಳ್ಳೆಯ ದಿನಗಳು ಮುಗಿಯುತ್ತಾ ಬಂದಿವೆ. 2019ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದ್ದು, ರಾಹುಲ್ ಗಾಂಧಿ ಪ್ರಧಾನಿಯಾಗಲಿದ್ದಾರೆ' ಎಂದು ವಿಶ್ವಾಸ ವ್ಯಕ್ತಪಡಿಸಿದರು.












Click it and Unblock the Notifications