ಶೆಟ್ಟರ್ ಭೇಟಿಯಾಗದೇ ಮುಖ್ಯಮಂತ್ರಿಗಳು ಹುಬ್ಬಳ್ಳಿಯಿಂದ ವಾಪಸ್!
ಹುಬ್ಬಳ್ಳಿ, ಜುಲೈ 30; "ಸ್ವಾಭಿಮಾನಕ್ಕೆ ಧಕ್ಕೆ ಬಂದಾಗ ಹೇಗೆ ಸಂಪುಟ ಸೇರಲಿ. ನನಗೂ ಸ್ವಾಭಿಮಾನ ಮತ್ತು ನೈತಿಕತೆ ಇದೆ" ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹುಬ್ಬಳ್ಳಿಯಲ್ಲಿ ಹೇಳಿದ್ದಾರೆ.
ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಅಧಿಕಾರ ಸ್ವೀಕಾರ ಮಾಡಿದ್ದಾರೆ. ಗುರುವಾರ ಅವರು ಹುಬ್ಬಳ್ಳಿಗೆ ಭೇಟಿ ನೀಡಿದ್ದರು. ಬಳಿಕ ಕಾರವಾರ, ಅಂಕೋಲ, ಯಲ್ಲಾಪುರದಲ್ಲಿ ನೆರೆ ಹಾನಿ ಅಧ್ಯಯನ ನಡೆಸಿದರು.
ಬೆಂಗಳೂರಿನಲ್ಲಿದ್ದ ಜಗದೀಶ್ ಶೆಟ್ಟರ್ ಗುರುವಾರ ಸಂಜೆಯೇ ಹುಬ್ಬಳ್ಳಿಗೆ ತೆರಳಿದ್ದರು. ಬಸವರಾಜ ಬೊಮ್ಮಾಯಿ ಮತ್ತು ಜಗದೀಶ್ ಶೆಟ್ಟರ್ ಭೇಟಿಯಾಗಲಿದ್ದಾರೆ ಎಂಬ ಸುದ್ದಿಗಳು ಹಬ್ಬಿತ್ತು. ಆದರೆ ಶೆಟ್ಟರ್ ಭೇಟಿ ಮಾಡದೇ ಸಿಎಂ ಬೆಂಗಳೂರಿಗೆ ವಾಪಸ್ ಆಗಿದ್ದಾರೆ.
ಶುಕ್ರವಾರ ಮುಖ್ಯಮಂತ್ರಿಗಳು ದೆಹಲಿ ಪ್ರವಾಸ ಕೈಗೊಂಡಿದ್ದಾರೆ. ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ. ಪಿ. ನಡ್ಡಾ ಭೇಟಿ ಮಾಡಲಿದ್ದಾರೆ. ಹೈಕಮಾಂಡ್ ನಾಯಕರ ಜೊತೆ ಸಂಪುಟ ವಿಸ್ತರಣೆ ಬಗ್ಗೆ ಮಾತುಕತೆ ನಡೆಲಿದ್ದಾರೆ.

ಪ್ರದೀಪ್ ಶೆಟ್ಟರ್ ಭೇಟಿ
ಬಸವರಾಜ ಬೊಮ್ಮಾಯಿ ಮತ್ತು ಜಗದೀಶ್ ಶೆಟ್ಟರ್ ಇಬ್ಬರೂ ಹುಬ್ಬಳ್ಳಿಯಲ್ಲಿದ್ದರೂ ಭೇಟಿಯಾಗಿಲ್ಲ. ಆದರೆ ಶೆಟ್ಟರ್ ಸಹೋದರ ಮತ್ತು ವಿಧಾನ ಪರಿಷತ್ ಸದಸ್ಯ ಪ್ರದೀಪ್ ಶೆಟ್ಟರ್ ಹುಬ್ಬಳಿ ವಿಮಾನ ನಿಲ್ದಾಣದಲ್ಲಿ ಬಸವರಾಜ ಬೊಮ್ಮಾಯಿ ಭೇಟಿಯಾಗಿ ಅಭಿನಂದನೆ ಸಲ್ಲಿಸಿ ಶುಭ ಹಾರೈಸಿದರು.

ತುರ್ತು ಪ್ರಯಾಣದ ಕಾರಣ
ಜಗದೀಶ್ ಶೆಟ್ಟರ್ ಭೇಟಿಯಾಗದ ಕುರಿತು ಬಸವರಾಜ ಬೊಮ್ಮಾಯಿ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಮಾತನಾಡಿದ್ದಾರೆ. "ಇಂದು ಅವರ ಮನೆಗೆ ಭೇಟಿ ನೀಡಬೇಕಿತ್ತು. ಆದರೆ ತಾಂತ್ರಿಕ ಕಾರಣದಿಂದಾಗಿ ಬೆಂಗಳೂರಿಗೆ ರಾತ್ರಿ 9 ಗಂಟೆಗೆ ವಿಮಾನ ಪ್ರಯಾಣ ಕೈಗೊಳ್ಳಬೇಕಾದ ಕಾರಣ ಭೇಟಿ ಸಾಧ್ಯವಾಗಲಿಲ್ಲ" ಎಂದು ಹೇಳಿದ್ದಾರೆ.

ಅಸಮಾಧಾನ ಸಹಜ
"ಜಗದೀಶ್ ಶೆಟ್ಟರ್ ಜೊತೆ ಈಗಷ್ಟೇ ಮಾತನಾಡಿದ್ದೇನೆ. ಅವರು ಬೆಂಗಳೂರಿಗೆ ಬಂದ ಬಳಿಕ ಖುದ್ದಾಗಿ ಭೇಟಿಯಾಗಿ ಚರ್ಚೆ ನಡೆಸುವೆ. ಶೆಟ್ಟರ್ ಹಿರಿಯರು. ಅಸಮಾಧಾನ ಸಹಜ. ಹಾಗಾಗಿ ಅವರನ್ನು ಭೇಟಿ ಮಾಡಿ ಚರ್ಚಿಸುವೆ" ಎಂದು ಬಸವರಾಜ ಬೊಮ್ಮಾಯಿ ಹೇಳಿದರು.
Recommended Video

ಆರ್ಎಸ್ಎಸ್ ಕಚೇರಿಗೆ ಭೇಟಿ
ಗುರುವಾರ ಸಂಜೆ ಹುಬ್ಬಳ್ಳಿಯಲ್ಲಿ ಆರ್ಎಸ್ಎಸ್ ಕಚೇರಿಗೆ ಜಗದೀಶ್ ಶೆಟ್ಟರ್ ಭೇಟಿ ನೀಡಿದ್ದರು. "ಸ್ವಾಭಿಮಾನಕ್ಕೆ ಧಕ್ಕೆ ಬಂದಾಗ ಮುಂದುವರೆಯಲು ಸಾಧ್ಯವಿಲ್ಲ. ಸದ್ಯ ನಾನು ಶಾಸಕನಾಗಿದ್ದೇನೆ. ಸಚಿವ ಸ್ಥಾನವಿಲ್ಲದೇ ಅಭಿವೃದ್ಧಿ ಮಾಡಬಹುದು. ಅಭಿವೃದ್ಧಿ ಮಾಡಿ ತೋರಿಸುತ್ತೇನೆ. ಪ್ರಹ್ಲಾದ್ ಜೋಶಿ ಕೇಂದ್ರ ಸಚಿವರು, ಈ ಭಾಗದವರೇ. ಸಿಎಂ ಬಸವರಾಜ ಬೊಮ್ಮಾಯಿ ಕೂಡಾ ಧಾರವಾಡ ಜಿಲ್ಲೆಯವರೇ" ಎಂದು ಶೆಟ್ಟರ್ ಹೇಳಿದರು.












Click it and Unblock the Notifications