ಅನರ್ಹ ಶಾಸಕರ ಪರವಾಗಿ ಮತ್ತೆ ಸ್ವಪಕ್ಷದವರ ವಿರುದ್ಧ ಮಾತಾಡಿದ ಯತ್ನಾಳ್
ಹುಬ್ಬಳ್ಳಿ, ನವೆಂಬರ್ 14: "ಅನರ್ಹ ಶಾಸಕರಿಗೆ ಬಿಜೆಪಿಯಿಂದ ಟಿಕೆಟ್ ನೀಡಬೇಕು. ಇದು ಬಿಜೆಪಿ ರಾಜಧರ್ಮ, ಅನರ್ಹರ ಗೆಲುವಿಗೆ ಬಿಜೆಪಿಯವರು ಪ್ರಯತ್ನ ಮಾಡಬೇಕು" ಎಂದು ಮತ್ತೆ ಸ್ವಪಕ್ಷೀಯರ ವಿರುದ್ಧ ವಿಜಯಪುರ ಬಿಜೆಪಿ ಶಾಸಕ ಬಸವಗೌಡ ಪಾಟೀಲ ಯತ್ನಾಳ ವಾಗ್ದಾಳಿ ನಡೆಸಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, "ಬಿಜೆಪಿಯಲ್ಲಿ ಅನರ್ಹ ಶಾಸಕರ ಕುರಿತು ವಿರೋಧ ಇದೆ. ಅನರ್ಹ ಶಾಸಕರ ಭವಿಷ್ಯ ಮುಳುಗುವ ಭೀತಿ ಇದೆ. ಅವರ ಭವಿಷ್ಯದ ದೃಷ್ಟಿಯಿಂದ ಟಿಕೆಟ್ ನೀಡಬೇಕು. ಅಲ್ಲದೇ ಅನರ್ಹ ಶಾಸಕರ ಗೆಲುವಿಗೆ ಎಲ್ಲಾ ರೀತಿಯ ಪ್ರಯತ್ನ ಮಾಡುವುದು ನಮ್ಮ ಧರ್ಮ" ಎಂದು ವಿವರಿಸಿದರು.
"ನಾನು ಸಚಿವನಾಗುವೆ ಎಂದು ಯಾರ ಮುಂದೆಯೂ ಹೇಳಿಲ್ಲ. ಆದರೆ ನನಗೂ ಒಳ್ಳೆಯ ಕಾಲ ಬರುವುದು. ರಾಜಕಾರಣದಲ್ಲಿ ಎಚ್.ಡಿ. ದೇವೇಗೌಡರಿಗೆ ಪ್ರೀತಿ ಹೆಚ್ಚಾಗಿದೆ, ಕೆಲವು ಬಾರಿ ದ್ವೇಷ ಕೂಡ ಹೆಚ್ಚಾಗುತ್ತದೆ. ರಾಜಕಾರಣದಲ್ಲಿ ಕಾಲಕ್ಕೆ ತಕ್ಕಂತೆ ವೈರಿ ಕೂಡ ಗೆಳೆಯನಾಗುವನು. ಇದೀಗ ದೇವೇಗೌಡರು ಬಿಜೆಪಿಯತ್ತ ಒಲವು ತೋರಿಸುತ್ತಿದ್ದಾರೆ, ಅವರಿಗೆ ನನ್ನ ಕಡೆಯಿಂದ ಅಭಿನಂದನೆ" ಎಂದರು.

ಬಿಜೆಪಿ ವಿರುದ್ಧ ಮತ್ತೆ ವಾಗ್ದಾಳಿ ನಡೆಸಿದ ಯತ್ನಾಳ್, "ಬಿಜೆಪಿಯಲ್ಲಿ ಯಾರು ಬಾಯಿಗೆ ಬಂದ ಹಾಗೇ ಮಾತನಾಡುವರೋ ಅವರೇ ಮಂತ್ರಿಗಳಾಗಿದ್ದಾರೆ. ಅಲ್ಲದೇ ನನಗೆ ಬೈದವರೂ ಮಂತ್ರಿಯಾಗಿದ್ದಾರೆ. ಅವರೇ ಪಕ್ಷದ ಸಿದ್ಧಾಂತ ಹೇಳುತ್ತಿದ್ದಾರೆ. ಇದರಲ್ಲಿ ರಾಜಕೀಯ ಇದೆ" ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.












Click it and Unblock the Notifications