ಅನಂತಕುಮಾರ್ ಹೆಗಡೆಗೆ ಸಂವಿಧಾನದ ಬಗ್ಗೆ ಕನಿಷ್ಠ ಜ್ಞಾನವೂ ಇಲ್ಲ: ಸಿಎಂ
ಹುಬ್ಬಳ್ಳಿ, ಡಿಸೆಂಬರ್ 25: ಸಂವಿಧಾನ ಬದಲಾಯಿಸ್ತೇವೆ ಎಂದು ಹೇಳಿದ್ದ ಅನಂತಕುಮಾರ್ ಹೆಗಡೆ ಹೇಳಿಕೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.
"ಅನಂತಕುಮಾರ್ ಹೆಗಡೆ ಅವರಿಗೆ ಸಂವಿಧಾನ ಗೊತಿಲ್ಲ. ಅದರ ಬಗ್ಗೆ ಗೌರವವೂ ಇಲ್ಲ," ಎಂದು ಖಾರವಾಗಿ ನುಡಿದ್ದಾರೆ. "ಸಂವಿಧಾನ ಮೊದಲು ಹುಟ್ಟಿದ್ದೋ ಅನಂತ ಕುಮಾರ್ ಹೆಗಡೆ ಹುಟ್ಟಿದ್ದೋ?" ಎಂದು ಅವರು ಪ್ರಶ್ನಿಸಿದ್ದಾರೆ.
ಜಾತ್ಯಾತೀತರು ಅಪ್ಪ- ಅಮ್ಮನ ರಕ್ತದ ಗುರುತಿಲ್ಲದವರು: ಅನಂತಕುಮಾರ್ ಹೆಗಡೆ
"ಸಾಮಾಜಿಕ ಸಂಸ್ಕ್ರತಿ ಅನಂತಕುಮಾರ್ ಅವರಿಗೆ ಗೊತ್ತಿಲ್ಲಾ. ಸಂವಿಧಾನದ ಬಗ್ಗೆ ಕನಿಷ್ಠ ಜ್ಞಾನವೂ ಅವರಿಗಿಲ್ಲ ಅಂತ," ವ್ಯಂಗ್ಯವಾಡಿದರು.
ಇನ್ನು ಕಳಸಾ ಬಂಡೂರಿ ವಿಚಾರವಾಗಿ ಮಾತನಾಡಿದ ಅವರು, "ಗೋವಾ ಸಿಎಂ ಮನೋಹರ್ ಪರಿಕ್ಕರ್ ಮತ್ತು ಬಿ.ಎಸ್. ಯಡಿಯೂರಪ್ಪ ಇಬ್ಬರೂ ಸೇರಿ ನಾಟಕವಾಡುತ್ತಿದ್ದಾರೆ. ಈ ಭಾಗದ ಜನರಿಗೆ ಮೋಸ ಮಾಡುವ ತಂತ್ರಗಾರಿಕೆಯನ್ನು ಬಿಜೆಪಿ ಅನುಸರಿಸುತ್ತಿದೆ. ಗೋವಾ ಸಿಎಂ ನನಗೆ ಪತ್ರ ಬರೆಯ ಬೇಕಿತ್ತು. ಆದರೆ ಅವರು ಯಡಿಯೂರಪ್ಪಗೆ ಪತ್ರ ಬರೆದಿದ್ದಾರೆ. ಅದು ದಾಖಲಾತಿ ಆಗೋದಿಲ್ಲ. ಅವರಿಗೆ ನೀರು ಕೊಡುವ ಮನಸ್ಸು ಇದ್ದರೆ ಟ್ರಿಬ್ಯೂನಲ್ ಗೆ ಅಫಿಡೆವಿಟ್ ಸಲ್ಲಿಸಲಿ," ಅಂತ ಹೇಳಿದರು.
ಇನ್ನು ಗದುಗಿನಲ್ಲಿ ನಿನ್ನೆ ಆಯೋಜಿಸಿದ್ದ ವೀರಶೈವ ಲಿಂಗಾಯತ ಧರ್ಮ ಜನಜಾಗೃತಿ ಸಮಾವೇಶದ ವಿಚಾರವಾಗಿ ದಿಂಗಾಲೇಶ್ವರ ಸ್ವಾಮೀಜಿಗಳ ಹೇಳಿಕೆಗೆ ತಿರುಗೇಟು ನೀಡಿದ ಸಿಎಂ, "ನಾನು ಮಾನವೀಯ ಮೌಲ್ಯದಲ್ಲಿ ನಂಬಿಕೆ ಇಟ್ಟಿದ್ದೇನೆ. ರುಂಡ ಮುಂಡ ಬೇರ್ಪಡಿಸುವ ಸಂಸ್ಕೃತಿ ನಮ್ಮದಲ್ಲ. ನಾವು ಧರ್ಮ ವಿಭಜನೆ ಮಾಡಲು ಹೊರಟಿಲ್ಲ. ಐದು ಪಿಟಿಷನ್ ಗಳನ್ನ ಸಲ್ಲಿಕೆಯಾಗಿವೆ. ಅವಗಳನ್ನು ಕಸದ ಬುಟ್ಟಿಗೆ ಹಾಕೋಕೆ ಆಗಲ್ಲ. ಹೀಗಾಗಿ ಸಮಿತಿಯನ್ನು ರಚಿಸಿದ್ದೇನೆ," ಎಂದು ಅವರು ವಿವರ ನೀಡಿದರು.